Site icon Ullalavani

ವಯನಾಡಿನಲ್ಲಿ ಮತ್ತೆ ಭೂಕುಸಿತ – ಇಬ್ಬರು ಕಾರ್ಮಿಕರು ಸಾವು, 30 ಮಂದಿ ನಾಪತ್ತೆ….!

ತಿರುವನಂತಪುರಂ,ಜು. 07 : 2 ವರ್ಷಗಳ ಹಿಂದೆ ಕೇರಳದ ವಯನಾಡಿನ ಚೂರಲ್ಮಲದಲ್ಲಿ ಸಂಭವಿಸಿದ್ದ ಭೂಕುಸಿತ ನೂರಾರು ಜನರ ಜೀವವನ್ನ ಆಹುತಿ ಪಡೆದುಕೊಂಡಿತ್ತು. ಇದೀಗ ಮತ್ತೆ ಅಂತಹದ್ದೇ ದುರಂತ ವಯನಾಡಿನಲ್ಲಿ ಸಂಭವಿಸಿದೆ. ವಯನಾಡಿನ ಮೆಪ್ಪಾಡಿಯಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ.

ವಯನಾಡಿನ ಸುರಂಗ ನಿರ್ಮಾಣ ಪ್ರದೇಶದ ಮೀನಾಕ್ಷಿ ಸೇತುವೆ ಬಳಿ ಭೂಕುಸಿತ ಸಂಭವಿಸಿದೆ. ಇದರಿಂದ ಇಬ್ಬರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಸುಮಾರು 20 ಮಂದಿ ಅವಶೇಷಗಳ ಅಡಿಯಲ್ಲೇ ಸಿಲುಕಿಕೊಂಡಿದ್ದು, 30 ಮಂದಿ ನಾಪತ್ತೆಯಾಗಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.ಘಟನೆಯಲ್ಲಿ ಗಾಯಗೊಂಡಿದ್ದ 6 ಮಂದಿಯನ್ನ ಸ್ಥಳೀಯರು ರಕ್ಷಣೆ ಮಾಡಿದ್ದು, ಮೆಪ್ಪಾಡಿಯ ಡಾ. ಮೂಪೆನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಗಾಯಗೊಂಡವರನ್ನ ಹೀರಾ ಸುರೇಶ್, ದಿಲೀಪ್, ಸೂರಜ್, ಸಂಜಯ್ ಥಾಪುರ್, ರಜನೀಶ್ ಮತ್ತು ತನ್ಮಯ್ ಘೋಷ್ ಎಂದು ಗುರುತಿಸಲಾಗಿದೆ. ಒಬ್ಬರ ಸ್ಥಿತಿ ಗಂಭೀರವಾಗಿದೆ.


ಭೂಕುಸಿತ ದುರಂತದ ಬಗ್ಗೆ ಮಾಹಿತಿ ಪಡೆದ ಸಿಎಂ ವಿ.ಡಿ ಸತೀಶನ್‌, ಇಬ್ಬರು ಸಚಿವರು ಕೂಡಲೇ ಘಟನಾ ಸ್ಥಳಕ್ಕೆ ಹೋಗಲು ಸೂಚನೆ ನೀಡಿದ್ದಾರೆ. ಕೇರಳದಲ್ಲಿ ಕಳೆದ 24 ಗಂಟೆಯಲ್ಲಿ 26 ಸೆಂ. ಮೀಟರ್‌ ನಷ್ಟು ಮಳೆಯಾಗಿದ್ದು, ಚೂರಲ್ ಮಲಕ್ಕೆ ಸಂಚಾರ ಸ್ಥಗಿತಗೊಳಿಸಲಾಗಿದೆ. ನಿರಂತರ ಮಳೆಯ ಕಾರಣ ನಿನ್ನೆಯಿಂದ ಸುರಂಗ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಮಣ್ಣು ಕುಸಿದ ಪ್ರದೇಶದಲ್ಲಿ ಅನೇಕ ವಾಹನಗಳೂ ಸಮಾಧಿಯಾಗಿವೆ.

Exit mobile version