Site icon Ullalavani

ದೇರಳಕಟ್ಟೆ ಜನರ ವಿಶ್ವಾಸವನ್ನು ಎಂ.ಸಿ.ಸಿ ಬ್ಯಾಂಕ್‌ ಬಲಪಡಿಸಲಿದೆ : ಫಾ. ವಿಕ್ಟರ್ ಡಿಮೆಲ್ಲೊ ,, 22 ನೇ ಶಾಖೆ ದೇರಳಕಟ್ಟೆಯಲ್ಲಿ ಉದ್ಘಾಟನೆ

ದೇರಳಕಟ್ಟೆ : 114 ವರ್ಷಗಳ ಸೇವಾ ಪರಂಪರೆಯನ್ನು ಹೊಂದಿರುವ ಎಂಸಿಸಿ ಬ್ಯಾಂಕ್ ತನ್ನ 22ನೇ ಶಾಖೆಯನ್ನು ದೇರಳಕಟ್ಟೆಯಲ್ಲಿ ಉದ್ಘಾಟಿಸುವ ಮೂಲಕ ಕರಾವಳಿಯ ಜನರಿಗೆ ಮತ್ತಷ್ಟು ಹತ್ತಿರವಾಗಿದೆ. ವೇಗವಾಗಿ ಬೆಳೆಯುತ್ತಿರುವ ದೇರಳಕಟ್ಟೆ ಪ್ರದೇಶದಲ್ಲಿ ಆರಂಭವಾದ ಈ ಶಾಖೆಯು ಜನರ ವಿಶ್ವಾಸವನ್ನು ಇನ್ನಷ್ಟು ಬಲಪಡಿಸುವ ಕೇಂದ್ರವಾಗಲಿದೆ ಎಂದು  ಪಾನೀರ್‌ನ ಅವರ್ ಲೇಡಿ ಆಫ್ ಮರ್ಸಿ ಚರ್ಚ್‌ನ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೊ ಅಭಿಪ್ರಾಯಪಟ್ಟರು. 

ಅವರು ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ 114 ವರ್ಷಗಳಿಂದ ಯಶಸ್ವಿಯಾಗಿ ಬ್ಯಾಂಕಿಂಗ್ ಸೇವೆ ಸಲ್ಲಿಸುತ್ತಿರುವ ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್‌ನ 22ನೇ ಶಾಖೆ ಯನ್ನು ದೇರಳಕಟ್ಟೆ ಫಾದರ್‌ ಮುಲ್ಲರ್ಸ್‌ ಕಾಂಪ್ಲೆಕ್ಸ್‌ ನೆಲಮಹಡಿಯಲ್ಲಿ ಭಾನುವಾರ ಉದ್ಘಾಟಿಸಿ   ,ಎಟಿಎಂ ಉದ್ಘಾಟನೆಯಲ್ಲಿ ಭಾಗವಹಿಸಿ  ಬಳಿಕ ನಡೆದ  ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. 

ಪವಿತ್ರ ಸಭೆಗೆ ಪವಿತ್ರ ಧ್ಯೇಯ ಇರಬೇಕು. ಹೊಸದಾಗಿ ಆರಂಭವಾದ 22ನೇ ಶಾಖೆ ಯಶಸ್ವಿಯಾಗಿ ಬೆಳೆಯಲಿ. ಈ ಶಾಖೆಯ ಎಲ್ಲ ಸಿಬ್ಬಂದಿಗೆ ಅಭಿನಂದನೆಗಳು. ದೇರಳಕಟ್ಟೆ ಹಾಗೂ ಸುತ್ತಮುತ್ತಲಿನ ಜನರ ಸಂಪೂರ್ಣ ಸಹಕಾರ ಈ ಶಾಖೆಗೆ ಲಭಿಸಲಿ.ಬ್ಯಾಂಕ್ ವ್ಯವಹಾರಗಳ ವಿಷಯದಲ್ಲಿ ಹಲವರು ಹಿಂಜರಿಯುತ್ತಾರೆ. ಅವ್ಯವಹಾರ, ಮೋಸ ಹಾಗೂ ಹಣಕಾಸಿನ ನಷ್ಟದ ಭಯ ಜನರಲ್ಲಿ ಇರುತ್ತದೆ. ಆದರೆ ಎಂಸಿಸಿ ಬ್ಯಾಂಕ್ ತನ್ನ ಪಾರದರ್ಶಕತೆ ಮತ್ತು ವಿಶ್ವಾಸಾರ್ಹ ಸೇವೆಯ ಮೂಲಕ ಜನರ ನಂಬಿಕೆಗೆ ಪಾತ್ರವಾಗಿದೆ. ಹೊಸ ಶಾಖೆಯು ದೇವರ ಆಶೀರ್ವಾದದೊಂದಿಗೆ ಬೆಳೆಯಲಿ ಎಂದು ಹಾರೈಸಿದ ಅವರು, “ಗ್ರಾಹಕರೇ ದೇವರು. ಬ್ಯಾಂಕ್‌ಗೆ ಬರುವ ಪ್ರತಿಯೊಬ್ಬ ಗ್ರಾಹಕರಿಗೂ ಗೌರವಯುತ ಸೇವೆ ಸಿಗಬೇಕು. ಕೆಲ ಬ್ಯಾಂಕ್‌ಗಳಲ್ಲಿ ವ್ಯಕ್ತಿಯ ಉಡುಗೆ ಅಥವಾ ಬಾಹ್ಯ ರೂಪವನ್ನು ನೋಡಿ ಸೇವೆ ನೀಡುವ ಮನೋಭಾವ ಕಂಡುಬರುತ್ತದೆ. ಅಂತಹ ಪ್ರವೃತ್ತಿಗೆ ಇಲ್ಲಿ ಅವಕಾಶ ಇರಬಾರದು. ಎಲ್ಲರೊಂದಿಗೆ ಸಮಾನ ಗೌರವದಿಂದ ವರ್ತಿಸಿ, ಆತ್ಮೀಯ ಸೇವೆ ನೀಡಬೇಕು” ಎಂದು ಸಿಬ್ಬಂದಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಮಾತನಾಡಿ, ಮುಂದಿನ ಆರು ತಿಂಗಳೊಳಗೆ ದೇರಳಕಟ್ಟೆ ಶಾಖೆಯಲ್ಲಿ ₹10 ಕೋಟಿ ವ್ಯವಹಾರ (ಟರ್ನೋವರ್) ಸಾಧಿಸುವ ಗುರಿ ಹೊಂದಿದ್ದೇವೆ. “ಆಸ್ಪತ್ರೆ ಮತ್ತು ಬ್ಯಾಂಕ್ ಎಂಬ ಎರಡು ಕ್ಷೇತ್ರಗಳಲ್ಲಿ ಜನರು ತಮ್ಮ ಹಣ ಮತ್ತು ನಂಬಿಕೆಯನ್ನು ಒಪ್ಪಿಸುತ್ತಾರೆ. ಆ ನಂಬಿಕೆಗೆ ಧಕ್ಕೆಯಾಗದಂತೆ, ಗ್ರಾಹಕರ ಹಣವನ್ನು ಎಂದಿಗೂ ಆತಂಕದಲ್ಲಿಡದ ರೀತಿಯಲ್ಲಿ ಎಂ.ಸಿ.ಸಿ. ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಸಹಕಾರ ಬ್ಯಾಂಕ್ ಆಗಿದ್ದರೂ, ರಾಷ್ಟ್ರೀಯ ವಾಣಿಜ್ಯ ಬ್ಯಾಂಕ್‌ಗಳ ಮಟ್ಟದ ಸೇವೆಗಳನ್ನು ನೀಡುತ್ತಿದ್ದು, ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಾವಳಿಗಳಡಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. “ಬ್ಯಾಂಕ್ ಈಗ ಎರಡನೇ ಶತಮಾನಕ್ಕೆ ದೃಢ ಹೆಜ್ಜೆಯಿಡಲು ಸಜ್ಜಾಗಿದೆ. 2018ರಲ್ಲಿ ಸುಮಾರು ₹500 ಕೋಟಿ ವ್ಯವಹಾರ ಹೊಂದಿದ್ದ ಬ್ಯಾಂಕ್, ಇಂದು ₹1,530 ಕೋಟಿ ವ್ಯವಹಾರ ತಲುಪಿದೆ. ಈ ಸಾಧನೆ ಬ್ಯಾಂಕಿನ ಸಿಬ್ಬಂದಿಯ ಶ್ರಮ, ಸಮರ್ಪಣೆ ಹಾಗೂ ಗ್ರಾಹಕರ ವಿಶ್ವಾಸದಿಂದ ಸಾಧ್ಯವಾಗಿದೆ. “ಕರ್ನಾಟಕದಾದ್ಯಂತ ಬ್ಯಾಂಕಿನ ಸೇವೆಯನ್ನು ವಿಸ್ತರಿಸುವ ಗುರಿಯೊಂದಿಗೆ ನಾವು ಸಾಗುತ್ತಿದ್ದೇವೆ. ದೇರಳಕಟ್ಟೆ ಮಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿನ ಜನರ ಸಹಕಾರದಿಂದ ಈ ಭಾಗ ಅಭಿವೃದ್ಧಿ ಹೊಂದಿದ್ದು, ಹೊಸ ಶಾಖೆಯೂ ಉತ್ತಮ ಬೆಳವಣಿಗೆ ಸಾಧಿಸಲಿದೆ ಎಂದರು. 

 ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಅರ್ಸುಲೈನ್ ಫ್ರಾನ್ಸಿಸ್ಕನ್ ಸಿಸ್ಟರ್ಸ್‌ನ ಸುಪೀರಿಯರ್ ಜನರಲ್ ಸಿ. ಮಿಲ್ಲಿ ಫೆರ್ನಾಂಡಿಸ್ ಮಾತನಾಡಿ, ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ವಿದ್ಯಾರ್ಥಿಗಳ ಉಳಿತಾಯದ ಅಭ್ಯಾಸ ಬೆಳೆಸುವುದು, ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯಗಳನ್ನು ಸುಲಭವಾಗಿ ಒದಗಿಸುವುದು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಲ ಹಾಗೂ ಉಳಿತಾಯ ಯೋಜನೆಗಳ ಮೂಲಕ ಬೆಂಬಲ ನೀಡುವುದು ಬ್ಯಾಂಕ್‌ಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದರು. 

ಎಟಿಎಂ ಕೇಂದ್ರವನ್ನು ಉದ್ಘಾಟಿಸಿದ ಫಾದರ್ ಮುಲ್ಲರ್ ಹೋಮಿಯೊಪತಿಕ್ ಕಾಲೇಜಿನ ಆಡಳಿತದಾರ ಫಾ. ನೀಲೆಶ್ ಕ್ರಾಸ್ತಾ ಮಾತನಾಡಿ, ಒಂದೂವರೆ ಶತಮಾನದ ಇತಿಹಾಸ ಹೊಂದಿರುವ ಫಾದರ್ ಮುಲ್ಲರ್ಸ್ ಸಂಸ್ಥೆ ಹಾಗೂ 114 ವರ್ಷಗಳ ಪರಂಪರೆ ಹೊಂದಿರುವ ಎಂಸಿಸಿ ಬ್ಯಾಂಕ್ ಎರಡೂ ಸಂಸ್ಥೆಗಳ ಮೂಲ ಧ್ಯೇಯವೇ ಸೇವೆ, ವಿಶ್ವಾಸ ಮತ್ತು ಮಾನವೀಯತೆ. ಸಮಾಜದ ಒಳಿತಿಗಾಗಿ ಈ ಎರಡೂ ಸಂಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಇಂದಿನ ದಿನಗಳಲ್ಲಿ ವ್ಯಕ್ತಿಯ ಅನಾರೋಗ್ಯಕ್ಕೆ ವೈದ್ಯಕೀಯ ಕಾರಣಗಳಷ್ಟೇ ಅಲ್ಲ, ಆರ್ಥಿಕ ಅಸ್ಥಿರತೆಯೂ ಪ್ರಮುಖ ಕಾರಣವಾಗಿದೆ. ಆರ್ಥಿಕ ಭದ್ರತೆ ಉತ್ತಮವಾಗಿದ್ದರೆ ಕುಟುಂಬದ ಆರೋಗ್ಯ ಮತ್ತು ನೆಮ್ಮದಿಯೂ ಉತ್ತಮವಾಗಿರುತ್ತದೆ. ಆದ್ದರಿಂದ ಬ್ಯಾಂಕಿಂಗ್ ಸೇವೆಗಳ ಮೂಲಕ ಜನರಲ್ಲಿ ಆರ್ಥಿಕ ಸದೃಢತೆ ಮೂಡಿಸುವುದು ಸಮಾಜದ ಸಮಗ್ರ ಆರೋಗ್ಯ ವೃದ್ಧಿಗೆ ಭದ್ರ ಅಡಿಪಾಯವಾಗಲಿದೆ ಎಂದರು. 

ಕೋಟೆಕಾರು ಪಟ್ಟಣ ಪಂಚಾಯತ್‌ ಅಧ್ಯಕ್ಷೆ ದಿವ್ಯಾ ಎಸ್‌ ಶೆಟ್ಟಿ ಮಾತನಾಡಿ, ಎಂ.ಸಿ.ಸಿ. ಬ್ಯಾಂಕ್ ಕೇವಲ ಬ್ಯಾಂಕಿಂಗ್ ವ್ಯವಹಾರಕ್ಕೆ ಸೀಮಿತವಾಗದೆ, ಸಮಾಜಮುಖಿ ಸೇವೆಗಳ ಮೂಲಕ ಜನರ ವಿಶ್ವಾಸವನ್ನು ಗಳಿಸಿರುವ ಸಂಸ್ಥೆಯಾಗಿದೆ. ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರನ್ನು ಗುರುತಿಸಿ ಗೌರವಿಸುವ ಹಾಗೂ ಅವರ ಸೇವೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಕಾರ್ಯವನ್ನು ಬ್ಯಾಂಕ್ ಮಾಡುತ್ತಿರುವುದು ಶ್ಲಾಘನೀಯ. ದೇರಳಕಟ್ಟೆಯಲ್ಲಿ ಹೊಸ ಶಾಖೆ ಆರಂಭವಾಗಿರುವುದರಿಂದ ಈ ಭಾಗದ ಜನರಿಗೆ ಗುಣಮಟ್ಟದ ಹಾಗೂ ವಿಶ್ವಾಸಾರ್ಹ ಬ್ಯಾಂಕಿಂಗ್ ಸೇವೆ ಇನ್ನಷ್ಟು ಸುಲಭವಾಗಿ ದೊರೆಯಲಿದೆ ಎಂದರು.

ಈ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,  ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿ, ಸಾಮಾಜಿಕ ಸಂಸ್ಥೆಗಳಿಗೆ ಒಟ್ಟು ರೂ. 5 ಲಕ್ಷ  ಸಹಾಯಧನ ಹಾಗೂ  ದೇರಳಕಟ್ಟೆ ಪಾನೀರು ಪರಿಸರದಲ್ಲಿ ಸಮಾಜಸೇವೆಯನ್ನು ನಡೆಸುತ್ತಾ ಬಂದಿರುವ ಸಾಮಾಜಿಕ ಕಾರ್ಯಕರ್ತರನ್ನು ಅಭಿನಂದಿಸಲಾಯಿತು. 

ಕಾರ್ಯಕ್ರಮದಲ್ಲಿ ಬ್ಯಾಂಕಿನ  ಉಪಾಧ್ಯಕ್ಷರು, ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Exit mobile version