Site icon Ullalavani

ಮಂಗಳೂರು: ಜೂ. 26ರಂದು ಬಾಳೇಪುಣಿ ದತ್ತಿನಿಧಿ ಪ್ರತಿಭಾ ಪುರಸ್ಕಾರ ವಿತರಣೆ

ಮಂಗಳೂರು,ಜೂ. 24 :   ಎಜುಕಾರುಣ್ಯ ಎಜುಕೇಶನಲ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ ಮಂಗಳೂರು ವತಿಯಿಂದ ಹಿರಿಯ ಪತ್ರಕರ್ತ ಗುರುವಪ್ಪ ಎನ್‌.ಟಿ. ಬಾಳೇಪುಣಿಯವರ ಸ್ಮರಣಾರ್ಥ ದತ್ತಿನಿಧಿ ಹಸ್ತಾಂತರ ಕಾರ್ಯಕ್ರಮ ಜೂ.26ರಂದು ಪೂರ್ವಾಹ್ನ 11 ಗಂಟೆಗೆ ಮಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ನ‌ ಅಧ್ಯಕ್ಷ ಮೋಹನ್ ದಾಸ್ ಮರಕಡ, ಕಳೆದ ವರ್ಷ ಮಂಗಳೂರಿನ ತ್ರಿಷಾ ಕಾಲೇಜಿನ ಧೃತಿ ಕುಂಜತ್ತಬೈಲ್‌ ಹಾಗೂ ಕೆನರಾ ಕಾಲೇಜಿನ ಮೇಘಾ ಸಜಿಪ ಅವರಿಗೆ ದತ್ತಿನಿಧಿ ನೀಡಲಾಗಿದೆ. ಈ ಬಾರಿ ಈ ಇಬ್ಬರಿಗೆ ಮುಂದುವರಿಸುವ ಜೊತೆಗೆ ಸಂತ ಅಲೋಷಿಯಸ್ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ತ್ರಿಷಾ ಪಚ್ಚನಾಡಿ, ಕೆನರಾ ಕಾಲೇಜಿನ ಶ್ರೀಜಾ ಶೆಟ್ಟಿ, ಬಿ.ಸಿ.ರೋಡಿನ ಶೋಭಿತಾ, ದಡ್ಡಲಕಾಡು ಶಾಲೆಯ ಪ್ರಾಪ್ತಿ, ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನ ಶ್ರೇಯಾ ಮತ್ತು ವಾಮದಪದವು ಸರ್ಕಾರಿ ಪದವಿಪೂರ್ವ ಕಾಲೇಜಿನ ರಶ್ಮಿತ್‌ ಅವರಿಗೆ ನೀಡಲಾಗುವುದು. ಒಟ್ಟು 1.50 ಲಕ್ಷ ರೂ. ಮೊತ್ತದ ದತ್ತಿನಿಧಿ ನೀಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್‌ , ಉದ್ಯಮಿ ರಾಧಾಕೃಷ್ಣ ಉಮಿಯ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್‌, ನರಿಂಗಾನ ಕಂಬಳೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್‌ ಕಾಜವ, ಉದ್ಯಮಿ ನಿಶಿತ್‌ ಪೂಜಾರಿ ಕಾವೂರು, ವಾರ್ತಾಧಿಕಾರಿ ಬಿ.ಎ ಖಾದರ್‌ ಶಾ, ಮಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ ಹರೀಶ್‌ ರೈ, ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ಅನ್ನು ಮಂಗಳೂರು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್‌ ಬಿ.ಎನ್‌ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಬಾಳೆಪುಣಿ ದತ್ತಿನಿಧಿ ಆರಂಭಿಸಿದಾಗಿನಿಂದ ನನ್ನ ಆಪ್ತ ಸ್ನೇಹಿತರಾದ ನವೀನ್‌ ಎಲ್‌.ಆರ್‌ ಗಾಂಧಿನಗರ ಕಾವೂರು, ಗುರುಪ್ರಸಾದ್‌ ಬಂಗೇರ ಗಾಂಧಿನಗರ ಕಾವೂರ ಕೈಜೋಡಿಸಿದ್ದರು. ಕಳೆದ ವರ್ಷ ಉದ್ಯಮಿ ರಾಧಾಕೃಷ್ಣ ಉಮಿಯ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್‌ ಅವರು ಆರ್ಥಿಕ ಸಹಕಾರ ನೀಡಿದ್ದರು. ಇದರ ಜೊತೆಗೆ ಹಲವಾರು ಪತ್ರಕರ್ತ ಮಿತ್ರರು ಜೋಡಿಸಿಕೊಂಡಿದ್ದರು. ಇವರೆಲ್ಲರ ಸಹಕಾರದಿಂದ ದೊಡ್ಡ ಮೊತ್ತವನ್ನು ತಲುಪಿಸಲು ಸಾಧ್ಯವಾಗುತ್ತಿದೆ. ಬಾಳೇಪುಣಿ ದತ್ತಿನಿಧಿಗೆ ಸಹಕಾರ ನೀಡಬಯಸುವವರು 9901319694 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದವರು ಹೇಳಿದರು.
ಆರ್ಥಿಕ‌ ಸಮಸ್ಯೆಯಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಓದು ಸ್ಥಗಿತವಾಗಬಾರದು ಎಂಬ ಉದ್ದೇಶದಿಂದ ಕಳೆದ ಐದು ವರ್ಷಗಳ ಹಿಂದೆ ಎಜು ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಆರಂಭಿಸಲಾಗಿತ್ತು.
ಉನ್ನತ ಶಿಕ್ಷಣದ ಅಸೆಯಿದ್ದು ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಕಷ್ಟದಲ್ಲಿದ್ದ 30ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಹೊಸ ಆಶಾವಾದ ಮೂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ಯೋಜನೆಯ ಮೂಲಕ ಕಲಿಸಲಾಗುತ್ತಿದೆ. ಎಜುಕಾರುಣ್ಯ ಯೋಜನೆಯಲ್ಲಿ ಆರನೇ ತರಗತಿಯಿಂದ ತೊಡಗಿ ಪದವಿ ತನಕದ ವಿದ್ಯಾರ್ಥಿಗಳು ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ವಾರ್ಷಿಕ ಸುಮಾರು ಎಂಟು ಲಕ್ಷ ರೂ. ವಿದ್ಯಾರ್ಥಿಗಳ ಕಲಿಕೆಗಾಗಿಯೇ ವ್ಯಯಿಸಲಾಗುತ್ತಿದೆ. ಪೂರ್ಣ ಶೈಕ್ಷಣಿಕ ದತ್ತು ಯೋಜನೆಯಲ್ಲಿ ಶುಲ್ಕ ಪಾವತಿಯಿಂದ ಹಿಡಿದು ಸಮವಸ್ತ್ರ, ಪುಸ್ತಕಗಳು, ಕೆಲವು ಮಕ್ಕಳ ಬಸ್‌ಚಾರ್ಜ್ ಕೂಡ ಭರಿಸಲಾಗುತ್ತಿದೆ. ಹಲವು ಸಂದರ್ಭಗಳಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಸನ್ಮಿತ್ರ ದಾನಿಗಳ ಸಹಕಾರದಿಂದ ತುರ್ತು ನೆರವನ್ನೂ ನೀಡಲಾಗಿದೆ ಎಂದವರು ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಜುಕಾರುಣ್ಯ ಎಜುಕೇಶನಲ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರಮೇಶ್‌ ಶೆಟ್ಟಿ ವಿವೇಕನಗರ, ಟ್ರಸ್ಟಿಗಳಾದ ಪ್ರಶಾಂತ್‌ ಅಬ್ಬೆಟ್ಟು, ದಿನೇಶ್‌ ನಾಯ್ಕ
ಬಾಳೇಪುಣಿಯವರ ಆಪ್ತರಾದ ನವೀನ್ ಗಾಂಧಿನಗರ, ವಿದ್ಯಾರ್ಥಿಗಳಾದ ಶ್ರೀಶಾ ಶೆಟ್ಟಿ ಅಬ್ಬೆಟ್ಟು ಮೇಘಾ ಸಜಿಪ ಉಪಸ್ಥಿತರಿದ್ದರು.

Exit mobile version