ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುನ್ನೂರು: ಸಿಲಿಂಡರ್ನಲ್ಲಿ ಬೆಂಕಿ ಕಾಣಿಸಿಕೊಂಡು ಮನೆಮಾಲೀಕ ಪವಾಡಸದೃಶವಾಗಿ ಪಾರಾದ ಘಟನೆ ಸುಭಾಷನಗರದ ಪಲ್ಕೆ ಎಂಬಲ್ಲಿ ಗುರುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಮುನ್ನೂರು ಪಂಚಾಯಿತಿ ವ್ಯಾಪ್ತಿಯ ಸುಭಾಷನಗರದ ಪಲ್ಕೆ ನಿವಾಸಿ ಮಹಮ್ಮದ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ಪತ್ನಿ ಆಯೇಷಾ ಬೀಬಿ ಮತ್ತು ಒಂಭತ್ತು ತಿಂಗಳ ಮಗು ಫಾತಿಮತ್ ಮುಫೀರಾ ಮದುವೆ ಸಮಾರಂಭಕ್ಕೆ ತೆರಳಿದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಮಹಮ್ಮದ್ ಅವರ ನೂತನ ಮನೆಯ ಕೆಲಸ ನಡೆಯುತ್ತಿದ್ದು, ಅಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಚಹಾ ಇಡಲೆಂದು ಮಹಮ್ಮದ್ ಗ್ಯಾಸ್ ಸ್ಟವ್ ಅನ್ನು ಉರಿಸಿ ಹೊರ ನಡೆದಿದ್ದರು. ಸ್ವಲ್ಪ ಹೊತ್ತಿನಲ್ಲೇ ಸ್ಟವ್ ನ ರೆಗ್ಯುಲೇಟರ್ ಮತ್ತು ಪೈಪಿನಲ್ಲಿ ಬೆಂಕಿ ಉಂಟಾಗಿ, ಮನೆಯ ಸೋಫಾ, ಫ್ರಿಡ್ಜ್ ಹಾಗೂ ಇನ್ನಿತರ ಸಾಮಗ್ರಿಗಳು ಹೊತ್ತಿ ಉರಿದಿವೆ. ಕೂಡಲೇ ನೀರೆರಚಿ ಬೆಂಕಿಯನ್ನು ನಂದಿಸುವ ಯತ್ನ ಮಾಡಿದ್ದರಿಂದಾಗಿ ಮನೆ ಸುಟ್ಟು ಹೋಗುವುದು ತಪ್ಪಿದಂತಾಗಿದೆ. ಘಟನೆಯಿಂದಾಗಿ ರೂ.20,000 ನಷ್ಟ ಸಂಭವಿಸಿದೆ.
20 ದಿನಗಳ ಹಿಂದೆ ಖರೀದಿಸಿದ್ದರು.
ಸೀಮೆಎಣ್ಣೆ ಸ್ಟವ್ನಲ್ಲಿ ಅಡುಗೆ ಮಾಡುತ್ತಿದ್ದ ಮಹಮ್ಮದ್ ಅವರು ಸೆ.19 ರಂದು ಬೆಂದೂರ್ ವೆಲ್ ನ ಕರ್ನಾಟಕ ಗ್ಯಾಸ್ಕೋ ಗ್ಯಾಸ್ ಸರ್ವಿಸ್ನಿಂದ ಗ್ಯಾಸ್ ಸ್ಟವ್ ಅನ್ನು ಖರೀದಿಸಿದ್ದರು. ಅದರಲ್ಲೇ ಅಡುಗೆ ನಿರ್ವಹಿಸುತ್ತಿದ್ದರು. ನೂತನ ಖರೀದಿಸಿದ ರೆಗ್ಯುಲೇಟರ್ ಕಳಪೆ ಮಟ್ಟದ್ದಾಗಿದ್ದರಿಂದಾಗಿ ಇಂತಹ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.