ಮಂಗಳೂರು : ಸಲಿಂಗಕಾಮದ ವಿಡಿಯೋ ಮುಂದಿಟ್ಟು ಮಂಗಳೂರಿನ ಹೆಸರಾಂತ ಉದ್ಯಮಿಗೆ ಬ್ಲಾಕ್ಮೇಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಝಾಮ್ನನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಾಗೂ ಯುವ ಕಾಂಗ್ರೆಸ್ ಪ್ರಾರ್ಥಮಿಕ ಸದಸ್ಯತ್ವದಿಂದ ಅಮಾನತು ಮಾಡಿ ಆದೇಶವನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್ ಹೊರಡಿಸಿದ್ದಾರೆ.
ನಗರದ ಖ್ಯಾತ ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್ ನಡೆಸಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ ಆರೋಪದ ಮೇರೆಗೆ ಇಂಡಿಯನ್ ಯೂಥ್ ಕಾಂಗ್ರೆಸ್ ಗೆ ಸಂಬಂಧ ಹೊಂದಿರುವ ಸ್ಥಳೀಯ ಮುಖಂಡನೊಬ್ಬ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿತ್ತು.
ಉದ್ಯಮಿ ನೀಡಿದ ದೂರಿನ ಪ್ರಕಾರ, 2024ರಲ್ಲಿ ಜಿತೇಶ್ ಎಂಬಾತ ಉದ್ಯಮಿಯ ಖಾಸಗಿ ಫೋಟೋ ಹಾಗೂ ವಿಡಿಯೊಗಳನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಆರಂಭಿಸಿದ್ದಾನೆ ಎನ್ನಲಾಗಿದೆ. ಪತ್ನಿಗೆ ವಿಡಿಯೊ ತೋರಿಸುವುದಾಗಿ ಬೆದರಿಕೆ ಹಾಕಿ ಮೊದಲು ₹35 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಈ ವಿಚಾರವನ್ನು ಯುವ ಕಾಂಗ್ರೆಸ್ ಮುಖಂಡ ನಿಝಾಮ್ಗೆ ತಿಳಿಸಿದರೂ, ಆತ ಕೂಡ ಜಿತೇಶ್ ಜೊತೆ ಸೇರಿ ಮತ್ತಷ್ಟು ಹಣಕ್ಕಾಗಿ ಒತ್ತಡ ಹೇರಿದ್ದಾನೆ ಎಂದು ಉದ್ಯಮಿ ಆರೋಪಿಸಿದ್ದಾರೆ. ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಕಥೆ ಸೃಷ್ಟಿಸಿ, ಡೆತ್ ನೋಟ್ನಲ್ಲಿ ಉದ್ಯಮಿಯ ಹೆಸರು ಇದೆ ಎಂದು ಹೇಳಿ ಭಯ ಹುಟ್ಟಿಸಿ ಹಣ ವಸೂಲಿ ಮಾಡಲಾಗಿದೆ ಎನ್ನಲಾಗಿದೆ.
ದೂರಿನ ಪ್ರಕಾರ, 2024ರಿಂದ 2026ರವರೆಗೆ ವಿವಿಧ ಹಂತಗಳಲ್ಲಿ ಒಟ್ಟು ₹2.77 ಕೋಟಿ ಹಣವನ್ನು ಉದ್ಯಮಿಯಿಂದ ಪಡೆದುಕೊಳ್ಳಲಾಗಿದೆ. ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಂಬಿದ್ದ ಉದ್ಯಮಿಗೆ, 2026ರ ಜೂನ್ ತಿಂಗಳಲ್ಲಿ ಜಿತೇಶ್ ಜೀವಂತವಾಗಿ ಕಾಣಿಸಿಕೊಂಡಾಗ ಅನುಮಾನ ಮೂಡಿದೆ.
ಈ ಹಿನ್ನೆಲೆಯಲ್ಲಿ ಉದ್ಯಮಿ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ನಿಝಾಮ್ ಮತ್ತು ಜಿತೇಶ್ ಅವರನ್ನು ಬಂಧಿಸಿದ್ದರು.