Site icon Ullalavani

ಕುಂಟಿಕಾನ ಲಿಫ್ಟ್ ದುರಂತ: ಮೂರು ದಿನವಾದರೂ ತನಿಖೆ ಎಲ್ಲಿದೆ? ಹೊಣೆ ಯಾರದು?

ಮಂಗಳೂರಿನ ಕುಂಟಿಕಾನದಲ್ಲಿರುವ ಮಾರ್ಟ್‌ವೊಂದರಲ್ಲಿ ಸಂಭವಿಸಿದ ಲಿಫ್ಟ್ ಅವಘಡದಲ್ಲಿ ಬೆಳಾಲು ಗ್ರಾಮದ ಪೂಂಜಕೆರೆ ನಿವಾಸಿ ನೌಫಾಲ್ (28) ಮೃತಪಟ್ಟ ಘಟನೆ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಕೆಲಸದಲ್ಲಿ ನಿರತರಾಗಿದ್ದ ಯುವಕನೊಬ್ಬ ಲಿಫ್ಟ್ ಅವಘಡದಲ್ಲಿ ಪ್ರಾಣ ಕಳೆದುಕೊಳ್ಳುವುದು ಕೇವಲ ಅಪಘಾತವಲ್ಲ, ಇದು ಸಾರ್ವಜನಿಕ ಸುರಕ್ಷತೆ ವ್ಯವಸ್ಥೆಯ ವೈಫಲ್ಯ ಎನ್ನುವ ಪ್ರಶ್ನೆ ಈಗ ಜನರ ಮನಸ್ಸಿನಲ್ಲಿ ಮೂಡುತ್ತಿದೆ.

ಘಟನೆ ನಡೆದಿದ್ದು ಶನಿವಾರ ಸಂಜೆ. ಸಹೋದ್ಯೋಗಿಗಳು ನೌಫಾಲ್ ಅವರನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಪ್ರಕರಣ ಉರ್ವ ಠಾಣೆಯಲ್ಲಿ ದಾಖಲಾಗಿದ್ದರೂ, ಮೂರು ದಿನ ಕಳೆದರೂ ತನಿಖೆಯ ಪ್ರಗತಿ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಲಿಫ್ಟ್‌ಗೆ ಮಾನ್ಯ ಸುರಕ್ಷತಾ ಪ್ರಮಾಣಪತ್ರ ಇದೆಯೇ? ನಿಯಮಿತ ತಪಾಸಣೆ ನಡೆದಿತ್ತೇ? ಕಟ್ಟಡಕ್ಕೆ ಅಗ್ನಿಶಾಮಕ ಮತ್ತು ಸುರಕ್ಷತಾ ಅನುಮತಿಗಳು ಸರಿಯಾಗಿದ್ದವೆಯೇ? ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಒಬ್ಬ ಯುವಕ ಪ್ರಾಣ ಕಳೆದುಕೊಂಡಿದ್ದರೂ ಜಿಲ್ಲಾಡಳಿತದ ಮೌನ ಜನರಲ್ಲಿ ಅನುಮಾನ ಹುಟ್ಟಿಸುತ್ತಿದೆ. ಜಿಲ್ಲಾಧಿಕಾರಿಗಳು ಯಾಕೆ ಸಾರ್ವಜನಿಕವಾಗಿ ಮಾಹಿತಿ ನೀಡುತ್ತಿಲ್ಲ? ಮಹಾನಗರ ಪಾಲಿಕೆಯ ಕಟ್ಟಡ ಮತ್ತು ಸುರಕ್ಷತಾ ವಿಭಾಗದ ಅಧಿಕಾರಿಗಳ ವಿರುದ್ಧ ತನಿಖೆ ಆರಂಭವಾಗಿದೆಯೇ? ತಪ್ಪಿತಸ್ಥರ ವಿರುದ್ಧ ಅಮಾನತು ಕ್ರಮ ಯಾಕೆ ಕೈಗೊಳ್ಳಲಾಗಿಲ್ಲ? ಜನಪ್ರತಿನಿಧಿಗಳಾದ ಶಾಸಕರು, ಸಂಸದರು ಹಾಗೂ ಉಸ್ತುವಾರಿ ಸಚಿವರು ಈ ವಿಷಯದಲ್ಲಿ ಮೌನವಾಗಿರುವುದು ಯಾಕೆ?

ನಗರದಲ್ಲಿ ಎತ್ತರದ ಕಟ್ಟಡಗಳು, ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು ವೇಗವಾಗಿ ಹೆಚ್ಚುತ್ತಿವೆ. ಆದರೆ ಸುರಕ್ಷತಾ ನಿಯಮಗಳ ಅನುಷ್ಠಾನ ಎಷ್ಟು ಗಂಭೀರವಾಗಿ ನಡೆಯುತ್ತಿದೆ ಎಂಬುದನ್ನು ಈ ದುರಂತ ಪ್ರಶ್ನಿಸಿದೆ. ಲಿಫ್ಟ್‌ಗಳ ನಿರ್ವಹಣೆ ಮತ್ತು ತಾಂತ್ರಿಕ ಪರಿಶೀಲನೆ ಕೇವಲ ದಾಖಲೆಗಳಿಗೆ ಸೀಮಿತವಾಗಿದೆಯೇ ಎಂಬ ಅನುಮಾನ ಜನರಲ್ಲಿ ಮೂಡಿದೆ.

ಪ್ರತಿ ಬಾರಿ ಇಂತಹ ದುರಂತ ಸಂಭವಿಸಿದಾಗ ಕೆಲವು ದಿನ ಚರ್ಚೆ ನಡೆಯುತ್ತದೆ. ನಂತರ ಪ್ರಕರಣ ಮೌನದಲ್ಲಿ ಮರೆಯಾಗುತ್ತದೆ. ಮೃತ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡುವುದರಿಂದ ಮಾತ್ರ ನ್ಯಾಯ ಸಿಗುವುದಿಲ್ಲ. ಜೀವ ಕಳೆದುಕೊಂಡ ಯುವಕನ ಸಾವಿಗೆ ನಿಜವಾದ ಕಾರಣವೇನು? ಯಾರು ಹೊಣೆ? ಯಾವ ಅಧಿಕಾರಿಯ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿತು? ಎಂಬುದನ್ನು ಬಹಿರಂಗಪಡಿಸುವುದು ಸರ್ಕಾರದ ಕರ್ತವ್ಯ.

ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಚರ್ಚೆ ಮಾಡುವ ಯುವಕರು, ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಈಗ ಎಲ್ಲಿವೆ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಸಾಮಾನ್ಯ ನಾಗರಿಕರ ಜೀವ ಭದ್ರತೆ ವಿಷಯದಲ್ಲಿ ಎಲ್ಲಾ ಪಕ್ಷಗಳೂ ಒಂದೇ ಧ್ವನಿಯಲ್ಲಿ ಮಾತನಾಡಬೇಕಾದ ಅಗತ್ಯ ಇದೆ.

ನೌಫಾಲ್ ಸಾವಿನ ಪ್ರಕರಣವನ್ನು ಕೇವಲ ಪೊಲೀಸ್ ದಾಖಲೆಯಾಗಿ ಉಳಿಸದೇ, ನ್ಯಾಯಾಂಗ ಅಥವಾ ಉನ್ನತ ಮಟ್ಟದ ತಾಂತ್ರಿಕ ತನಿಖೆಗೆ ಒಪ್ಪಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಇಲ್ಲವಾದರೆ ನಾಳೆ ಮತ್ತೊಂದು ಕಟ್ಟಡ, ಮತ್ತೊಂದು ಲಿಫ್ಟ್ ಮತ್ತು ಮತ್ತೊಂದು ಕುಟುಂಬ ಇದೇ ನೋವನ್ನು ಅನುಭವಿಸಬೇಕಾಗಬಹುದು.

Exit mobile version