Site icon Ullalavani

ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಸಾಧ್ಯತೆ ಹೆಚ್ಚಿದೆ: ಶ್ರೀ ರಾಜಶೇಖರಾನಂದ ಸ್ವಾಮೀಜಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಹಿಂದೂ ಸಮಾಜ ಬಾಂಧವರ ಆಧುನಿಕ ಶೈಲಿಯ ಬದುಕು, ಸುಖಮಯ ಜೀವನದ ಕನಸು, ಸಮಾಜದ ಕೆಲವೊಂದು ಕಟ್ಟುಪಾಡುಗಳಿಂದಾಗಿ ಈ ದೇಶದಲ್ಲಿ ಹಿಂದೂ ಬಲ ಕುಸಿಯುತ್ತಿದ್ದು ಅಂಕಿಅಂಶಗಳು ತಿಳಿಸುವಂತೆ ಬಹುಸಂಖ್ಯಾತ ಹಿಂದೂ ಸಮಾಜ 2061ರ ಹೊತ್ತಿಗೆ ಅಲ್ಪಸಂಖ್ಯಾತ ಸಮಾಜವಾಗುವ ಆತಂಕವಿದೆ. ಆ ದಿಸೆಯಲ್ಲಿ ಸಮಾಜ ಬಾಂಧವರು ಎಚ್ಚೆತ್ತುಕೊಳ್ಳಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಅವರು ಸಾಮರಸ್ಯ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ತೊಕ್ಕೊಟ್ಟು ಅಂಬಿಕಾರೋಡಿನ ಗಟ್ಟಿ ಸಮಾಜಭವನದಲ್ಲಿ ಭಾನುವಾರ ನಡೆದ ಸದ್ಭಾವನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಕೆಲವು ಸಮುದಾಯದ ಜನರು ತಮ್ಮ ಮಕ್ಕಳನ್ನು ಕೆಲವು ಕಟ್ಟುಪಾಡುಗಳ ಮಧ್ಯೆಯೂ ಹೇಗಾದರೂ ಸಾಕುತ್ತಾರೆ. ಅವರು ಹೇಗಾದರೂ ಬದುಕುತ್ತಾರೆ. ಅಂತಹ ಸಮಾಜದ ಮಹಿಳೆಯರಿಗೆ ಇರುವ ಸ್ಥೈರ್ಯ ಹಿಂದು ಸಮಾಜದ ಮಹಿಳೆಯರಿಗೆ ಏಕಿಲ್ಲ ಎಂಬುದನ್ನು ಯೋಚಿಸಬೇಕಿದೆ ಎಂದರು.

ಕರ್ನಾಟಕ ಸಾಮರಸ್ಯ ವೇದಿಕೆ ಸಂಯೋಜಕ ವಾದಿರಾಜ್ ಅವರು 2011ರ ಜನಗಣತಿ, ಏರುಪೇರು ಚಿತ್ರಣ, ಪರಿಣಾಮ ಕುರಿತು ವಿವರಿಸಿ 1951ರ ಜನಗಣತಿಯಲ್ಲಿ ಭಾರತದಲ್ಲಿ ಹಿಂದೂ ಮತಪಂಥಗಳು ಸೇರಿ ಒಟ್ಟು ಸಂಖ್ಯೆ 87ಶೇ. ರಷ್ಟಿದ್ದು 2011ರಲ್ಲಿ ಆ ಸಂಖ್ಯೆ 82.59ಕ್ಕೆ ಕುಸಿದಿದೆ. ಅದರಲ್ಲಿಯೂ ಕನಿಷ್ಠ 7ಶೇ. ಹಿಂದೂಗಳು ಕ್ರೈಸ್ತ ಮತಾವಲಂಬಿಗಳಾಗಿದ್ದರೂ ಅವರು ದಾಖಲೆಗಳಲ್ಲಿ ಹಿಂದೂಗಳೇ ಆಗಿರುವುದು ಹಿಂದು ಜನಸಂಖ್ಯೆ ದೊಡ್ಡ ಪ್ರಮಾಣ ತೋರಿಸಿದೆಯಷ್ಟೆ. ಆ ದಿಸೆಯಲ್ಲಿ ನೋಡಿದಾಗ ಹಿಂದೂಗಳ ಸಂಖ್ಯೆ 75ಶೇ. ಕ್ಕೆ ಇಳಿದಿದೆ ಎಂದರು.

ಮುಸ್ಲಿಂ ಜನಸಂಖ್ಯೆ 2011ರಲ್ಲಿ 14.23ಶೇ. ಆಗಿದ್ದು 1951ರಲ್ಲಿ 10.43ಶೇ. ರಷ್ಟಿದ್ದು ಭಾರತದ ಒಟ್ಟು ಜನಸಂಖ್ಯೆಯತ್ತ ಗಮನ ಹರಿಸಿದಾಗ 17ಕೋಟಿ ಮುಸ್ಲಿಮರು ಭಾರತದಲ್ಲಿದ್ದಾರೆ. ಪ್ರಪಂಚದ ಇತರ ಸಣ್ಣಪುಟ್ಟ ರಾಷ್ಟ್ರಗಳು ಮುಸ್ಲಿಂ ರಾಷ್ಟ್ರಗಳಾಗಿಯೇ ಗುರುತಿಸಿಕೊಂಡರೂ ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇರುವ ರಾಷ್ಟ ್ರವಾಗಿ ಭಾರತ ಹೊರಹೊಮ್ಮಿದೆ. ಕ್ರಿಶ್ಚಿಯನ್ನರು 1951 ಹಾಗೂ 2011ರಲ್ಲಿಯೂ ಅದೇ ಅಂತರ ಕಾಪಾಡಿಕೊಂಡು ಬಂದಿದ್ದಾರೆ ಎಂದು ಅಂಕಿಅಂಶಗಳು ಹೇಳಿದೆಯಾದರೂ 6ಶೇ. ಹಿಂದೂಗಳು ಕ್ರಿಶ್ಚಿಯನ್‍ಗಳಾಗಿ ಅವಲಂಬಿಸಿದ್ದಾರೆ ಎಂದು ತಿಳಿಸಿದರು.

ಭಾರತದಲ್ಲಿ ಜನಸಂಖ್ಯೆ ಪ್ರಮಾಣ ಹೀಗೆಯೇ ಮುಂದುವರಿದರೆ 2061ರ ಹೊತ್ತಿಗೆ ಹಿಂದೂಗಳು ಅಲ್ಪಸಂಖ್ಯಾತರಾಗುವ ಸಾಧ್ಯತೆ ಅಲ್ಲಗಳೆಯುವ ಹಾಗಿಲ್ಲ. ಬಾಂಗ್ಲಾದಲ್ಲಿ 1951ರಲ್ಲಿ 22.79ಶೇ. ಹಿಂದೂಗಳಿದ್ದರೂ 2011ರ ಹೊತ್ತಿಗೆ ಆ ಸಂಖ್ಯೆ 10ಶೇ. ಕ್ಕೆ ಇಳಿದಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿಯೂ ಹಿಂದೂಗಳ ಸಂಖ್ಯೆ ಕ್ಷೀಣಿಸಿದೆ. ಕಳೆದ 30ವರುಷಗಳಲ್ಲಿ ಹಿಂದುಗಳ ಸಂಖ್ಯೆ ಕುಸಿಯುತ್ತಿದ್ದು ಮುಸ್ಲಿಂ ಜನಸಂಖ್ಯೆ ವೃದ್ಧಿಸುತ್ತಿದೆ. ದೇಶದಲ್ಲಿ ಜಮ್ಮ ಮತ್ತು ಕಾಶ್ಮೀರ, ಪಂಜಾಬ್, ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ ಸೇರಿದಂತೆ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಚಂದ್ರಹಾಸ್ ಉಳ್ಳಾಲ್, ಕೆ. ಚಂದ್ರಹಾಸ್ ಅಡ್ಯಂತಾಯ, ಚಂದ್ರಶೇಖರ್ ಉಚ್ಚಿಲ್, ಸಂಜೀವ ಶೆಟ್ಟಿ ಅಂಬ್ಲಮೊಗರು, ಯಶವಂತ ಅಮೀನ್, ಹರೀಶ್ ಅಂಬ್ಲಮೊಗರು, ಹರೀಶ್ ಕುತ್ತಾರು, ವಿನಯ ನಾೈಕ್, ಅಶೋಕ್ ಕೊಣಾಜೆ ಉಪಸ್ಥಿತರಿದ್ದರು.

ಕಿಶೋರ್ ಪೆರ್ಲ ಸಾಮರಸ್ಯ ಗೀತೆ ಹಾಡಿದರು. ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಗ್ರಾಮಾಂತರ ಜಿಲ್ಲೆ ಸಾಮರಸ್ಯ ವೇದಿಕೆ ಅಧ್ಯಕ್ಷ ಕೆ.ಟಿ. ಸುವರ್ಣ ಸ್ವಾಗತಿಸಿದರು.

Exit mobile version