Site icon Ullalavani

ತಮಿಳುನಾಡಲ್ಲಿ ಧಾರ್ಮಿಕ ಸ್ಥಳಗಳು, ಶಾಲೆಗಳ ಬಳಿ ಇದ್ದ 717 ಮದ್ಯದಂಗಡಿ ಮುಚ್ಚಲು ಸಿಎಂ ವಿಜಯ್‌ ಆದೇಶ

ಚೆನ್ನೈ,ಮೇ. 12 ; ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಳಪತಿ ವಿಜಯ್‌ ಇದೀಗ ಮೊದಲ ಮಹತ್ವದ ನಿರ್ಧಾರವನ್ನೂ ಪ್ರಕಟಿಸಿದ್ದಾರೆ. ರಾಜ್ಯಾದ್ಯಂತ ದೇವಸ್ಥಾನಗಳು, ಶಾಲೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ ಒಟ್ಟು 717 ಸರ್ಕಾರಿ ಸ್ವಾಮ್ಯದ ಟಾಸ್ಮಾಕ್ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಅವರು ಆದೇಶಿಸಿದ್ದಾರೆ.

ಶಾಲೆ, ದೇವಸ್ಥಾನ ಮತ್ತು ಬಸ್ ನಿಲ್ದಾಣದ ಬಳಿಯಿರುವ 717 ಮದ್ಯದ ಅಂಗಡಿಗಳು ಎರಡು ವಾರದಲ್ಲಿ ಬಂದ್. ಕಾಂಗ್ರೆಸ್, ಎಡಪಕ್ಷಗಳು ಮತ್ತು ವಿಸಿಟಿ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಬಳಿಕ ವಿಜಯ್ ಮೊದಲ ನಿರ್ಧಾರ.ತಮಿಳುನಾಡಿನ 234 ಸ್ಥಾನಗಳ ಪೈಕಿ 108 ಸೀಟುಗಳನ್ನು ಗೆದ್ದ ವಿಜಯ್ ಟಿವಿಕೆ ಪಕ್ಷವು ಬಹುಮತಕ್ಕೆ 10 ಸ್ಥಾನಗಳ ಕೊರತೆಯನ್ನು ಎದುರಿಸಿತ್ತು. ಒಂದು ವಾರ ನಡೆದ ರಾಜಕೀಯ ಹಗ್ಗಜಗ್ಗಾಟದ ನಂತರ ಕಾಂಗ್ರೆಸ್, ಎಡಪಕ್ಷಗಳು ಮತ್ತು ವಿಸಿಕೆ ಪಕ್ಷದ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚಿಸಿದರು. ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದಾರೆ.
ಟಾಸ್ಮಾಕ್ ಸದ್ಯ ರಾಜ್ಯಾದ್ಯಂತ 4,765 ಅಂಗಡಿಗಳನ್ನು ನಡೆಸುತ್ತಿದ್ದು, ಅದರಲ್ಲಿ ಮಂದಿರಗಳ ಸಮೀಪವಿರುವ 276, ಶಿಕ್ಷಣ ಸಂಸ್ಥೆಗಳ ಬಳಿಯಿರುವ 186 ಮತ್ತು ಬಸ್ ನಿಲ್ದಾಣಗಳ ಸಮೀಪವಿರುವ 255 ಅಂಗಡಿಗಳನ್ನು ಮುಚ್ಚಲು 2 ವಾರಗಳ ಗಡುವು ನೀಡಲಾಗಿದೆ.ತಮಿಳುನಾಡು ಸರ್ಕಾರಕ್ಕೆ ಟಾಸ್ಮಾಕ್ ಸಾರಾಯಿ ಮಾರಾಟದಿಂದ ದೊಡ್ಡ ಪ್ರಮಾಣದ ಆದಾಯ ಹರಿದುಬರುತ್ತಿದೆ. 2025ರಲ್ಲಿ ರಾಜ್ಯದ ಒಟ್ಟು ಆದಾಯ 48,000 ಕೋಟಿ ರೂಪಾಯಿ ದಾಟಿತ್ತು. ಇಷ್ಟೊಂದು ದೊಡ್ಡ ಮಟ್ಟದ ಆದಾಯವಿದ್ದರೂ ವಿಜಯ್ ಅವರು ಸಾರ್ವಜನಿಕ ಹಿತಾಸಕ್ತಿಗೆ ಒತ್ತು ನೀಡಿದ್ದಾರೆ.

Exit mobile version