ಬೆಂಗಳೂರು, ಏ. 28: ಸರ್ಕಾರ ಗುಂಡಿ ಮುಚ್ಚಿದ ಹಣವನ್ನು ಗುಂಡಿಗೆ ಹಾಕಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಗುಂಡಿ ಮುಚ್ಚಲು ಕೋಟಿ ಕೋಟಿ ಹಣ ಖರ್ಚು ಮಾಡಿದ ವಿಚಾರವಾಗಿ ಮಾತನಾಡಿದ ಅವರು, “ಗುಂಡಿ ಮುಚ್ಚಿದ ಹಣ ಗುಂಡಿಗೆ ಹೋಗಿದೆ. ಗುಂಡಿ ಮುಚ್ಚೋಕೆ ಎಲ್ಲಾದ್ರೂ ಒಂದು ಲಕ್ಷ ಖರ್ಚಾಗುತ್ತದೆಯಾ? ಬೆಂಗಳೂರು ಜನ ಶಾಪ ಹಾಕುತ್ತಿದ್ದಾರೆ. ಎಲ್ಲಾ ಬೆಲೆ ಜಾಸ್ತಿ ಮಾಡಿದ್ದಾರೆ. ಗುಂಡಿ ಮುಚ್ಚೋದ್ರಲ್ಲಿ ಹೇಗೆ ಹಣ ಮಾಡಬೇಕು ಎಂದು ಕಾಂಗ್ರೆಸ್ ಅವರನ್ನ ಕೇಳಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇಷ್ಟು ಹಣ ಖರ್ಚು ಮಾಡಿರೋದು ಬೋಗಸ್. ಈ ಅಕ್ರಮದ ಬಗ್ಗೆ ತನಿಖೆ ಆಗಬೇಕು. ಸದನದ ಸಮಿತಿ ರಚನೆ ಮಾಡಿ ತನಿಖೆ ಆಗಲಿ. ನಾವು ಅವರಿಗೆ ಲೆಕ್ಕ ಕೊಡ್ತೀವಿ. ಮುಚ್ಚಿರುವ ಗುಂಡಿಗಳು ಮತ್ತೆ ಓಪನ್ ಆಗಿವೆ. ಇವರ ಬೋಗಸ್ ಗುಂಡಿ ಲೆಕ್ಕ ನಾವು ಕೊಡ್ತೀವಿ” ಎಂದು ಹೇಳಿದ್ದಾರೆ.