Site icon Ullalavani

ಏ.29 ರಿಂದ ತೊಕ್ಕೊಟ್ಟು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರತಿಷ್ಠಾಪನಾ ಕಲಶೋತ್ಸವ

ಉಳ್ಳಾಲ‌:ತೊಕ್ಕೊಟ್ಟು,ಗಾಂಧಿ‌ನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರು ಮತ್ತು ಪರಿವಾರ ಸಾನಿಧ್ಯಗಳ ಪುನರ್ ಪ್ರತಿಷ್ಠಾಪನಾ ಕಲಶೋತ್ಸವವು ಏ.29ರಿಂದ ಮೇ.3ರವರೆಗೆ ನಡೆಯಲಿದೆಯೆಂದು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಗಿರೀಶ್ ಕುಮಾರ್ ಯು.ಕೆ ತಿಳಿಸಿದರು.


ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು,1982ರಲ್ಲಿ ಚಾಮುಂಡೇಶ್ವರಿಯ ಸಣ್ಣ ಗುಡಿಯೊಂದನ್ನು ನಿರ್ಮಿಸಲಾಗಿದ್ದು,ನಂತರದ ದಿನಗಳಲ್ಲಿ ತಾಯಿಯ ಕಾರಣಿಕದಿಂದಾಗಿ ನಾಲ್ಕು ವರ್ಷಗಳಲ್ಲೇ ಭಕ್ತರು ಗುಡಿಗೆ ದೇವಸ್ಥಾನದ ಸ್ವರೂಪ ನೀಡಿದ್ದರು.ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಜೀರ್ಣೋದ್ಧಾರಕ್ಕೆ ಮುಂದಾಗಿ ಕಳೆದ ವರ್ಷ ಜೂನ್ ನಲ್ಲಿ ಶಂಕುಸ್ಥಾಪನೆ ನಡೆಸಿದಾಗ ಕಲ್ಲು, ಮರಳು ನಿಷೇಧ ಆದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳು ಕೆಲಸ ಸ್ಥಗಿತಗೊಂಡಿತ್ತು.ಭಕ್ತರ ಸಹಕಾರದಿಂದ ಇದೀಗ ಕ್ಷೇತ್ರವು ಜೀರ್ಣೋದ್ಧಾರಗೊಂಡು ಪುನರ್ ಪ್ರತಿಷ್ಠಾ ಕಲಶೋತ್ಸವದ ಸಂಭ್ರಮದಲ್ಲಿದೆಯೆಂದರು.


ಏ.29ರಂದು ಸಂಜೆ 4:30ಕ್ಕೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊರಗಜ್ಜ ಸಾನಿಧ್ಯದಿಂದ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಮಾರ್ಗವಾಗಿ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮರವಣಿಗೆ ನಡೆಯಲಿದ್ದು ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿ ಶ್ರೀ ದೇವು ಮೂಲ್ಯಣ್ಣ ಹಾಗೂ ಕಾಪಿಕಾಡ್ ಶ್ರೀ ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.ಅಂದು ರಾತ್ರಿ 7:30ಕ್ಕೆ ಹಾಗೂ ಏ.30ರಂದು ಸಂಜೆ 7ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಮೇ.1ರಂದು ಸಂಜೆ 7:30ಕ್ಕೆ ವಿದಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ.ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚಂದ್ರಹಾಸ ಅಡ್ಯಂತಾಯ ಕಾರ್ಯಕ್ರಮ ಉದ್ಘಾಟಿಸಲಿದ್ದು,ಧಾರ್ಮಿಕ ಮುಖಂಡ ಶಿವಕೃಪಾ ಕುಂಜತ್ತೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಧಾರ್ಮಿಕ,ರಾಜಕೀಯ,ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.


ಮೇ.1ರಂದು ಬೆಳಗ್ಗೆ 7:12ಕ್ಕೆ ತರವಾಡು ಚಾವಡಿಯ ಗೃಹಪ್ರವೇಶ ನಡೆಯಲಿದೆ.ಬೆಳಿಗ್ಗೆ 10.49 ರ ಮಿಥುನ ಲಗ್ನ ಸುಮೂರ್ಹತದಲ್ಲಿ ಶ್ರೀ ಚಾಮುಂಡೇಶ್ವರಿ ,ಕತ್ತಲೆಕಾನ ಗುಳಿಗ,ಕೊರಗತನಿಯ ಗುಡಿಗಳ ಶಿಖರ ಪ್ರತಿಷ್ಠಾಪನೆ,ಕಲಶಾಭಿಷೇಕ,ಪ್ರಸನ್ನ ಪೂಜೆ ನಡೆಯಲಿದೆಯೆಂದು ಗಿರೀಶ್ ಕುಮಾರ್ ಹೇಳಿದರು.


ಪುನರ್ ಪ್ರತಿಷ್ಠಾಪನಾ ಕಲಶೋತ್ಸವ ಸಮಿತಿಯ ಪದಾಧಿಕಾರಿಗಳಾದ ಚಂದ್ರಶೇಖರ ಉಚ್ಚಿಲ್,ದಿನೇಶ್ ಕಾಜವ,ರಾಘವ ಉಚ್ಚಿಲ್,ಭಾಸ್ಕರ ತೊಕ್ಕೊಟ್ಟು,ಸುರೇಖಾ ಚಂದ್ರಹಾಸ,ಸತೀಶ್ ದೀಪಂ,ರೋಹಿತ್ ಉಳ್ಳಾಲ್,ಆನಂದ ಶೆಟ್ಟಿ ಭಟ್ನಗರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version