ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಅನಧಿಕೃತ ಜಾಗದಲ್ಲಿ ವಾಸಿಸುವ ಮಂದಿಗೆ ದಂಡ ವಿಧಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಯ್ದೆ ಸರಕಾರದಲ್ಲಿದ್ದು, ಈ ಮೂಲಕ ಬಡ ಕುಟುಂಬಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಗರಸಭೆ ಸದಸ್ಯರು ಪ್ರಂiÀiತ್ನಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಉಳ್ಳಾಲ ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಉಳ್ಳಾಲ ನಗರಸಭೆಯ ಡೇಟಾ ಎಂಟ್ರಿ ಸಿಬ್ಬಂದಿಗೆ ಐದು ತಿಂಗಳ ವೇತನ ಬಂದಿಲ್ಲ, ಅವರಿಗೆ ಸೂಕ್ತ ವೇತನ ಒದಗಿಸುವ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿಯನ್ನು ಸಲ್ಲಿಸಲಾಗಿದೆ. ಸಿಬ್ಬಂದಿ ಹಿತದೃಷ್ಟಿಯಿಂದ ಸದ್ಯ ಉಳ್ಳಾಲ ನಗರಸಭೆ ಅಕೌಂಟಿನಿಂದ ವೇತನ ಭರಿಸಲಾಗುವುದು ಎಂದರು. ಕಳೆದ ಎರಡು ವರ್ಷಗಳಲ್ಲಿ ಹಲವು ವಾರ್ಡುಗಳಲ್ಲಿ ಕಾಮಗಾರಿಗಳೇ ನಡೆದಿಲ್ಲ. ಇನ್ನು ಕೆಲ ವಾರ್ಡುಗಳಲ್ಲಿ ರೂ.25 ಲಕ್ಷ ವೆಚ್ಚದ ಕಾಮಗಾರಿಗಳು ನಡೆದಿದೆ. ಇಂತಹ ತಾರತಮ್ಯ ನೀತಿಯಿಂದ ಜನ ತೊಂದರೆಗೀಡಾಗಿದ್ದಾರೆ ಅನ್ನುವ ಆರೋಪ ಕೆಲವು ಸದಸ್ಯರಿಂದ ಕೇಳಿಬಂತು. ಕಡತಗಳ ತಿದ್ದುಪಡಿಗೆ ಬೆಂಗಳೂರಿಗೆ ಹೋಗಿ ಆಯಾಯ ಇಲಾಖೆಗಳನ್ನು ಹುಡುಕಿ ಸರಿಪಡಿಸುವ ಕೆಲಸ ತುಂಬಾ ತ್ರಾಸದಾಯಕವಾಗಿದೆ. ಅದಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆಯಲ್ಲೇ ಅಂತಹ ಕೆಲಸಗಳನ್ನು ಸರಿಪಡಿಸುವ ವ್ಯವಸ್ಥೆ ಜಾರಿಯಾಗಬೇಕು, ಬಂಟ್ವಾಳ, ಕಾಪು ಪುರಸಭೆಗಳಿಗೆ ಹೆಚ್ಚು ಅನುದಾನಗಳು ಬಂದರೆ ಉಳ್ಳಾಲ ಉರೂಸಿಗೆ ಬಂದ ರೂ. 4 ಕೋಟಿ ಅನುದಾನವನ್ನು ಅಭಿವೃದ್ಧಿ ಅನುದಾನವೆಂದು ಪರಿಗಣಿಸಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಲ್ಲ. ಸಿಬ್ಬಂದಿ ನೇಮಕ ಹಾಗೂ ಇರುವ ಸಿಬ್ಬಂದಿಗಳ ವೇತನ ಸರಿಯಾಗಬೇಕು, 24 ಗಂಟೆಗಳ ಕುಡಿಯುವ ನೀರಿನ ಯೋಜನೆಯ ಬೇಡಿಕೆಗಳನ್ನು ಸ್ಥಾಯಿ ಸಮಿತಿ ಅಧ್ಯಕ್ಷರು ಮಹಮ್ಮದ್ ಮುಕ್ಕಚ್ಚೇರಿ ಅವರು ವಿಧಾನಪರಿಷತ್ ಸದಸ್ಯರ ಮುಂದಿಟ್ಟರು.
ಈ ಸಂದರ್ಭ ಉಳ್ಳಾಲ ನಗರಸಭೆ ಅಧ್ಯಕ್ಷೆ ಗಿರಿಜಾ.ಎಂ.ಬಾೈ, ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ, ಕಾರ್ಯನಿರ್ವಹಣಾಧಿಕಾರಿ ರೂಪಾ.ಟಿ.ಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.