ಮಂಗಳೂರು, ಎ.20: ಮುಡಿಪು ಉತ್ಸವ ಸಮಿತಿ, ಕೃಷಿಕ ಸಮಾಜ ಉಳ್ಳಾಲ ತಾಲೂಕು ಹಾಗೂ ಯು.ಟಿ. ಫರೀದ್ ಫೌಂಡೇಶನ್ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಕೃಷಿ ಮೇಳ ಹಾಗೂ ಮುಡಿಪು ಉತ್ಸವ ಎ.24, 25, 26 ರಂದು ಶ್ರೀ ಕೃಷ್ಣ ಧ್ಯಾನ ಮಂದಿರ, ಮುಡಿಪುವಿನಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ತಿಳಿಸಿದ್ದಾರೆ.
ಅವರು ಸೋಮವಾರ ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಎ.24ರಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಕೃಷಿ ಸಚಿವ ಚೆಲುವರಾಯ ಸ್ವಾಮಿ ಕೃಷಿ ಮೇಳವನ್ನು ಹಾಗೂ ಸಂಸದ ಬ್ರಿಜೇಶ್ ಚೌಟ ಆಹಾರ ಮೇಳವನ್ನು ಉದ್ಘಾಟಿಸಲಿದ್ದಾರೆ. ಈ ಉತ್ಸವದಲ್ಲಿ ಹಿರಿಯ ಸಮಾಜಸೇವಕ ಡಾ. ಮದನ್ ಮೋಹನ್ ನಾಯ್ಕ ಅವರಿಗೆ ಸೇವಾ ಧುರಂದರ ಪ್ರಶಸ್ತಿ ನೀಡಲಾಗುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ಹಲವು ಗಣ್ಯರಿಗೆ ಗೌರವಾಭಿನಂದನೆ ಸಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೃಷಿಯ ಬಗ್ಗೆ ವಸ್ತು ಪ್ರದರ್ಶನ ಹಾಗೂ ಉಪಯುಕ್ತ ಮಾಹಿತಿ ನೀಡುವ ಗುರಿ ಇದೆ. ಗುಡ್ಡಗಾಡು ಓಟ, ಸ್ವಚ್ಛತಾ ಅಭಿಯಾನ, ಆಹಾರ ಮೇಳ, ಗಾಳಿಪಟ ಉತ್ಸವ, ಮಹಿಳೆಯರಿಗೆ ಸ್ಪರ್ಧೆಗಳು, ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ಸೇರಿದಂತೆ ಐತಿಹಾಸಿಕ ಕಾರ್ಯಕ್ರಮ ರೂಪಿಸುವ ಗುರಿ ಇದೆ ಎಂದು ಕಾರ್ಯಾಧ್ಯಕ್ಷ ದೇವದಾಸ್ ಭಂಡಾರಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಉತ್ಸವದ ಆಮಂತ್ರಣ ಪತ್ರವನ್ನು ಅವರು ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮುಡಿಪು ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಮದನ್ ಮೋಹನ್ ನಾಯ್ಕ ಕೋಶಾಧಿಕಾರಿ ರಾಧಾಕೃಷ್ಣ ರೈ ಉಮಿಯ, ಸಂಚಾಲಕ ಅಬ್ದುಲ್ ಜಲೀಲ್, ಮಾಜಿ ಮನಪಾ ಸದಸ್ಯೆ ಅಪ್ಪಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮೊದಲಾದವರು ಉಪಸ್ಥಿತರಿದ್ದರು.