Site icon Ullalavani

ಉಳ್ಳಾಲದಲ್ಲಿ ಗಾಣಿಗರ ಸಂಗಮ: ಸಂಘಟನೆ ಬಲಪಡಿಸಲು ಯುವಜನರ ಪಾತ್ರ ಮುಖ್ಯ

ಉಳ್ಳಾಲ: ಗಾಣಿಗ ಸಮುದಾಯದಲ್ಲಿ ಯುವಜನರ ಸಹಕಾರ ಪಡೆದು ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಅಗತ್ಯವಿದೆ ಎಂದು ಮುಂಬೈ ಸಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಪಲ್ಯ ಅಭಿಪ್ರಾಯಪಟ್ಟರು.

ಉಳ್ಳಾಲ ಗಾಣಿಗರ ಸಮುದಾಯ ಭವನದಲ್ಲಿ ಉಳ್ಳಾಲ ಗಾಣಿಗರ ಸಂಘ ಹಾಗೂ ಗಾಣಿಗರ ಸಮುದಾಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ಉಳ್ಳಾಲ ತಾಲೂಕಿನ 14 ಗ್ರಾಮಗಳ ಸ್ವಜಾತಿ ಬಾಂಧವರಿಗಾಗಿ ಆಯೋಜಿಸಿದ್ದ “ಗಾಣಿಗರ ಸಂಗಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಕಿರೀಟ ಹೊತ್ತವನಿಗೆ ಕಿರುಕುಳ ತಪ್ಪದು ಎಂಬ ಮಾತಿನಂತೆ, ಸಮುದಾಯದ ಅಭಿವೃದ್ಧಿಗೆ ಶ್ರಮಿಸುವವರಿಗೆ ಅಡಚಣೆಗಳು ಸಹಜ. ಸಂಘಟನೆ ಕಟ್ಟುವುದರೊಂದಿಗೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವುದು ಬಹಳ ಮುಖ್ಯ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಾಧ್ಯ,” ಎಂದು ಹೇಳಿದರು.

ಸಂಘಟನೆಯ ಚಿಂತನೆ ಬದಲಾಗಬೇಕು. ಕೇವಲ ಸಂಪತ್ತು, ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಪದವಿಗೆ ಮಹತ್ವ ನೀಡುವುದರಿಂದ ಯುವಕರ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಸಮುದಾಯ ಭವನಗಳನ್ನು ನಿರ್ಮಿಸಿ, ಅದರಿಂದ ಬರುವ ಆದಾಯವನ್ನು ಸಮಾಜದ ಹಾಗೂ ಆರ್ಥಿಕವಾಗಿ ಹಿಂದುಳಿದವರ ಕಲ್ಯಾಣಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.

ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ದೀಪ ಪ್ರಜ್ವಲನಗೈದು ಆಶೀರ್ವಚನ ನೀಡಿದರು. ಸಮುದಾಯದ ಅಭಿವೃದ್ಧಿಗೆ ದಾನಿಗಳ ಕೊಡುಗೆ ಮಹತ್ತರವಾಗಿದ್ದು, ಅವರ ಸಹಕಾರದಿಂದ ಸಮುದಾಯ ಭವನ ನಿರ್ಮಾಣ ಕಾರ್ಯ ಮುಂದುವರಿದಿದೆ ಎಂದರು.

ಉಳ್ಳಾಲ ಗಾಣಿಗರ ಸಂಘದ ಅಧ್ಯಕ್ಷ ಎಚ್. ಪ್ರಕಾಶ್ ಕೊಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗಾಣಿಗ ಸಮಾಜ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಹರ್ಷ ಬಿಲ್ಡರ್ಸ್ ಆಡಳಿತ ನಿರ್ದೇಶಕ ಹರೀಶ್ ಕುತ್ತಾರು, ಬಂಟ್ವಾಳ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಸುನಿಲ್ ಕುಮಾರ್ ತೊಕ್ಕೊಟ್ಟು, ನವೀನ್ ಕುಮಾರ್ ಮುಗೋಡಿ, ಲಕ್ಷ್ಮೀಪ್ರಸಾದ್ ಬೆಟ್ಟ, ಜ್ಯೋತಿ ಯಲಬುರ್ಗಿ, ರಾಜೇಶ್ ಯು., ರಾಮ ಮುಗೋಡಿ, ಹರಿಶ್ಚಂದ್ರ ಮಂಜೇಶ್ವರ, ನವೀನ್ ಮುದೋಳ್, ಎ.ಎಸ್. ವೆಂಕಟೇಶ್, ಟಿ. ಸುಂದರ ಅಮೀನ್ ತೊಕ್ಕೊಟ್ಟು, ವಸಂತ್ ಜಿ. ಸಫಲ್ಯ ಮುಂಬೈ, ಭಾಸ್ಕರ್ ಎಡಪದವು, ಭರತ್ ಕುಮಾರ್ ತೊಕ್ಕೊಟ್ಟು, ಕೃಷ್ಣ ಸಫಲ್ಯ ಬೆಳ್ತಂಗಡಿ, ಕಿರಣ್ ಕುಮಾರ್ ಸಫಲ್ಯ, ದಯಾನಂದ ಬಂಗೇರ ಮಂಜೇಶ್ವರ, ಭಾಸ್ಕರ್ ಸಾಲ್ಯಾನ್ ಮುಂಬೈ, ಭಾಸ್ಕರ್ ಅಮೀನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಂಟು ವಿಶ್ವದಾಖಲೆ ಬರೆದ ಪರೀಕ್ಷಿತ್ ಗಾಣಿಗ ಅವರು ಚಿತ್ರ ರಚಿಸಿ ಗಮನ ಸೆಳೆದರು.

ಯು.ಎಸ್. ಪ್ರಕಾಶ್ ಉಳಿಯ ಪ್ರಾಸ್ತಾವಿಕ ನುಡಿದರು. ತ್ರಿವೇಣಿ ಕಿರಣ್ ಹಾಗೂ ವಸಂತ್ ಪಜೀರು ಕಾರ್ಯಕ್ರಮ ನಿರೂಪಣೆಗೈದರೆ, ರವಿಶಂಕರ್ ಸೋಮೇಶ್ವರ್ ವಂದಿಸಿದರು.

Exit mobile version