Site icon Ullalavani

ಆಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ

ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಮತ್ತು ಕನ್ನಡದ ಲೇಖಕರೂ ಆಗಿರುವ ನಿತ್ಯಾನಂದ ಬಿ ಶೆಟ್ಟಿಯವರು ಒಂದು ಅದ್ಭುತವಾದ ಪುಸ್ತಕ ಬರೆದಿದ್ದಾರೆ.ಆ ಕೃತಿಯ ಹೆಸರು ಆಳವು ಅರಿಯದ ಭಾಷೆ – ಕಲೆ,ಸಮಾಜ, ಇತಿಹಾಸ. ಒಂದು ಕಾದಂಬರಿಯಂತೆ, ಕುತೂಹಲ ಹುಟ್ಟಿಸುತ್ತ ಓದಿಸಿಕೊಂಡು ಹೋಗುವ ಇಂತಹ ಒಂದು ಸಂಶೋಧನಾ ಕೃತಿ ಕನ್ನಡದಲ್ಲಂತೂ ಪ್ರಾಯಶಃ ಇದೇ ಮೊದಲು. ಓದು-ಬರಹ ಬಲ್ಲ ಸಾಮಾನ್ಯರಿಂದ ತೊಡಗಿ, ಮಹಾನ್ ಪಂಡಿತರನ್ನೂ ಏಕಕಾಲಕ್ಕೆ ಆವರಿಸಬಲ್ಲ ಪುಸ್ತಕ ಇದು.‌ ಈ ಪುಸ್ತಕದ ಪ್ರತಿಯೊಂದು ಪದ, ಪ್ರತಿ ಸಾಲು ಓದುಗರನ್ನು ಹೇಗೆ ಹಿಡಿದಿಡುತ್ತದೆಯೆಂದರೆ ಇದನ್ನು ಒಮ್ಮೆ ಓದಲು ತೊಡಗಿದರೆ ನಾವು ಪುಸ್ತಕದ ಗುಂಗಿನಲ್ಲೇ ಇರುತ್ತೇವೆ.

ಒಂದು ಬೃಹತ್ ಕಾದಂಬರಿಯಾಗುವ, ನಾಟಕವೂ ಆಗುವ, ಸಿನಿಮಾವೂ ಆಗಬಲ್ಲ ಸಮೃದ್ಧವಾದ ವಸ್ತುವನ್ನು ಇದು ಹೊಂದಿದೆ.ಕಲೆ, ಸಮಾಜ ಮತ್ತು ಇತಿಹಾಸದ ಎಲ್ಲಾ ಆಯಾಮಗಳನ್ನು ಒಂದೇ ಕೃತಿಯಲ್ಲಿ ಅಳವಡಿಸುವ ಮೂಲಕ ತನ್ನ ಮೇಧಾವಿತನವನ್ನು ಇಲ್ಲಿ ನಿತ್ಯಾನಂದ ಬಿ ಶೆಟ್ಟಿಯವರು ವಿಶಾಲವಾಗಿ ತೆರೆದಿಟ್ಟಿದ್ದಾರೆ. ಯಾವುದರ ಬಗೆಗೂ ತೀರ್ಮಾನ ಕೊಡದೆ, ಓದುಗರೇ ನಿರ್ಧಾರಕ್ಕೆ ಬರುವಂತೆ ಯಕ್ಷಗಾನವೆಂಬ ವಸ್ತುವನ್ನು ಪ್ರಧಾನವಾಗಿ ಮುಂದಿಟ್ಟು ಅದರ ಸುತ್ತಮುತ್ತಲಿನ ವಿಚಾರಗಳು, ಕಳೆದ 150 ವರ್ಷಗಳಿಂದ ಯಕ್ಷಗಾನ ಬೆಳೆದು ಬಂದ ರೀತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿರುವುದು ಅತ್ಯಂತ ರೋಮಾಂಚನಕಾರಿಯಾಗಿದೆ.

ಒಂದು ಕಾಲದಲ್ಲಿ ಬಹಳ ಪ್ರಸಿದ್ಧರಾದ ಕಲಾವಿದರು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದಿಂದಲೂ ಬಂದಿದ್ದರು ಎಂಬುದನ್ನು ಇಲ್ಲಿ ಓದಿ ತಿಳಿದಾಗಲೇ ಬಹಳ ಆಶ್ಚರ್ಯವಾಯಿತು. ಯಾಕೆಂದರೆ ಅದನ್ನು ಇವತ್ತಿನ ಧರ್ಮ ರಾಜಕಾರಣದ ಸಂಕೀರ್ಣತೆಯಲ್ಲಿ ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಯಕ್ಷಗಾನದ ಈಗಿನ ವಾತಾವರಣದಲ್ಲಿ ಇನ್ನೊಬ್ಬ ಜಬ್ಬಾರ್ ಸುಮೋನಂತಹ ಕಲಾವಿದ ಹುಟ್ಟಲು ಸಾಧ್ಯವೇ ಎಂಬ ಪ್ರಶ್ನೆಯೂ ಈ ಪುಸ್ತಕವನ್ನು ಓದುವಾಗ ಹುಟ್ಟಿಕೊಳ್ಳುತ್ತದೆ.

ಇಂದು ಯಕ್ಷಗಾನವನ್ನು ಬಿಜೆಪಿ ಪಕ್ಷದ ಪ್ರಚಾರಕ್ಕೆ ಬಳಸಿಕೊಂಡು, ಕೋಮುವಾದಿ ವಿಚಾರಗಳನ್ನು ಪ್ರಸ್ತಾಪಿಸುತ್ತ, ಅಲ್ಪಸಂಖ್ಯಾತರನ್ನು ಅತ್ಯಂತ ತುಚ್ಛವಾಗಿ ಅವಮಾನಿಸುತ್ತಾ, ಜನರಲ್ಲಿ ಮುಸ್ಲಿಂ ದ್ವೇಷ ಹುಟ್ಟುವಂತೆ ಕೋಮುವಾದಿ ಶಕ್ತಿಗಳು ಹೂಡಿದ ರಣತಂತ್ರಗಳನ್ನು ಈ ಪುಸ್ತಕ ಎಳೆಎಳೆಯಾಗಿ ವಿವರಿಸುತ್ತದೆ. ಸೌಹಾರ್ದತೆಯನ್ನು ಸಾರುವ ಕಲೆಯಾಗಿದ್ದ ಯಕ್ಷಗಾನದಲ್ಲಿ ಕೋಮುವಾದಿ ವಿಚಾರಗಳನ್ನು ಮುಂದಿಟ್ಟು ಕಲೆಗೆ ಕಳಂಕವನ್ನುಂಟು ಮಾಡಿದ ಕುಂಬ್ಳೆ ಸುಂದರರಾಯರ ವ್ಯಕ್ತಿತ್ವ, ಬಳಿಕ ಅವರ ಆತ್ಮಕಥೆಯಲ್ಲಿ ಅವರಾಡಿದ ವಿಷಾದದ ಮಾತುಗಳು, ಸಂಘಪರಿವಾರದ use & throw (ಬಳಸು ಮತ್ತು ಬಿಸಾಕು) ಎಂಬ ಕುತಂತ್ರ ಎಲ್ಲವೂ ಇಲ್ಲಿ ಚರ್ಚೆಗೆ, ವಿಶ್ಲೇಷಣೆಗೆ ಒಳಗಾಗಿದೆ. ಸಂಘಪರಿವಾರ ಪ್ರಜ್ಞಾಪೂರ್ವಕವಾಗಿ ಯಕ್ಷಗಾನದಂತಹ ಕಲೆಯಲ್ಲೂ ತನ್ನ ಗುಪ್ತಾ ಅಜೆಂಡಾವನ್ನು ಪಸರಿಸುವ ಮೂಲಕ ಎಷ್ಟೊಂದು ವ್ಯಾಪಕತೆ ಪಡೆದಿದೆ ಎಂಬುದನ್ನು ಇತ್ತೀಚಿನ ಚುನಾವಣೆಯ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲುರವರು ಆಡಿದ ಮಾತುಗಳನ್ನು ಇಲ್ಲಿ ಲೇಖಕರು ಉಲ್ಲೇಖಿಸಿ ಓದುಗರಿಗೆ ಮನದಟ್ಟು ಮಾಡಿಸುತ್ತಾರೆ.

ಇಂತಹ ಅದ್ಭುತ ಕೃತಿಗೆ ಪೂರಕ ಮಾತುಗಳನ್ನು ಆಡಿದ್ದಲ್ಲದೆ ಇದಕ್ಕೆ ಪ್ರತಿಕ್ರಿಯೆ ಬರೆದ 8 ಮಂದಿ ವಿವಿಧ ಕ್ಷೇತ್ರಗಳ ವಿದ್ವಾಂಸರ ವಿಮರ್ಶಾತ್ಮಕ ಮಾತುಗಳು ಈ ಕೃತಿಗೆ ಮತ್ತಷ್ಟು ಶಕ್ತಿಯನ್ನು ತುಂಬಿದೆ‌.ಅದರಲ್ಲೂ ಕವಿ ಮತ್ತು ರಂಗ ನಿರ್ದೇಶಕರಾದ ರಘುನಂದನರವರ ಸವಿವರವಾದ ಜಾಗತಿಕ ವಿಶ್ಲೇಷಣೆಯು ಹಲವು ಆಯಾಮಗಳನ್ನು ವಿವರಿಸುತ್ತಾ, ಯಕ್ಷಗಾನದೊಳಗೆ ಫ್ಯಾಸಿಸಂ ಇಣುಕುವ ಅಪಾಯ,ಅದೇ ಫ್ಯಾಸಿಸಂ ಜಗತ್ತಿನ ವಿದ್ಯಮಾನವನ್ನು ಅಲ್ಲೋಲ ಕಲ್ಲೋಲ ಮಾಡಿದ ಪ್ರಸಂಗಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧ ಹಾಗೂ ಇಸ್ರೇಲ್ ಪ್ಯಾಲೆಸ್ಟೈನ್ ನ ಮೇಲೆ ನಡೆಸಿರುವ ಭೀಕರ ಧಾಳಿಯ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ.

ಒಟ್ಟಿನಲ್ಲಿ ಯಕ್ಷಗಾನವೆಂಬ ಕಲೆ ಈ ಕೃತಿಯ ಪ್ರಧಾನ ವಸ್ತುವಾಗಿದ್ದರೂ, ಅದರಾಚೆಗಿರುವ ಹತ್ತು ಹಲವು ವಿಚಾರಗಳನ್ನು ತರುವ ಮೂಲಕ ಇಡೀ ಪುಸ್ತಕವನ್ನು ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಓದುವಂತೆ ಲೇಖಕರು ಮಾಡಿದ್ದಾರೆ. ಓದುಗರನ್ನು ಆಳವಾಗಿ ಯೋಚಿಸುವಂತೆ ಮಾಡುವ, ಆತ್ಮಾವಲೋಕನ ಮಾಡುವಂತೆ ಪ್ರಚೋದಿಸುವ ಈ ಪುಸ್ತಕದ ಬರಹದ ಶೈಲಿ ಅಪೂರ್ವವಾದುದು.‌ಈ ಪುಸ್ತಕವನ್ನು ಓದಿ ಮುಗಿಸಿದಾಗ ಓದುಗರಲ್ಲಿ ಹುಟ್ಟುವ ಭಾವನೆಗಳನ್ನು ವಿವರಿಸಲು ಸಾಧ್ಯವೇ ಇಲ್ಲ. ಹಾಗೆಯೇ, ಇಲ್ಲಿನ ಹೋರಾಟಗಾರರು ತಾವು ಸಾಗಿಬಂದ ದಾರಿಯನ್ನು ಮತ್ತೊಂದು ಸಲ ಪರಿಶೀಲಿಸುವಂತೆ ಮಾಡಿದ ಒತ್ತಾಯವೂ ಅರ್ಥವಾಗುತ್ತದೆ. ಇಂತಹ ಎಲ್ಲವೂ ಈ ಪುಸ್ತಕದಲ್ಲಿದೆ.ಕರಾವಳಿಯ ಹೆಮ್ಮೆಯ ಚಿಂತಕರೂ ಮತ್ತು ಬರಹಗಾರರೂ ಆದ ನಿತ್ಯಾನಂದ ಬಿ ಶೆಟ್ಟಿಯವರ ಈ ಪರಿಶ್ರಮವನ್ನು ಇಡೀ ಕರ್ನಾಟಕದ ಜನತೆ ಅಭಿನಂದಿಸಬೇಕಾಗಿದೆ.‌

ಸುನಿಲ್ ಕುಮಾರ್ ಬಜಾಲ್

Exit mobile version