Site icon Ullalavani

ಕುಂಪಲದಲ್ಲಿ ‘ಚಿಗುರು–2026’ ಬೇಸಿಗೆ ಶಿಬಿರಕ್ಕೆ ಚಾಲನೆ

ಕುಂಪಲ: ಕೇಸರಿ ಮಿತ್ರ ವೃಂದಾ ಸೇವಾ ಟ್ರಸ್ಟ್ (ರಿ), ವ್ಯಾಸನಗರ ಕುಂಪಲ, ರೋಟರಿ ಕ್ಲಬ್ ಮಂಗಳೂರು, ರೋಟರಿ ಸಮುದಾಯ ದಳ ಕುಂಪಲ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಪಲ ಇವರ ಸಹಭಾಗಿತ್ವದಲ್ಲಿ, ಚಿತ್ತಾರ ಪ್ರತಿಷ್ಠಾನ ಪಿಲಾರು ಇವರ ಸಹಯೋಗದೊಂದಿಗೆ ‘ಚಿಗುರು–2026’ ಬೇಸಿಗೆ ಶಿಬಿರವು ಕುಂಪಲ ಶಾಲೆಯಲ್ಲಿ ಶುಭಾರಂಭಗೊಂಡಿತು.

ಕಾರ್ಯಕ್ರಮವನ್ನು ಮಂಗಳೂರು ರೋಟರಿ ಕ್ಲಬ್ ಆರ್‌ಸಿಸಿ ಚೇರ್ಮನ್ ರೋ. ಮಾಧವ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿವಿಧ ಶಾಲೆಗಳ ಮಕ್ಕಳು ಒಟ್ಟಾಗಿ ಸೇರಿ ಹಲವು ಚಟುವಟಿಕೆಗಳಲ್ಲಿ ಭಾಗವಹಿಸುವುದು ಅವರ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಅವಕಾಶವಾಗಿದ್ದು, ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಿಂದ ಮಕ್ಕಳ ಪ್ರತಿಭೆಗಳು ಹೊರಹೊಮ್ಮಲು ಇದು ವೇದಿಕೆಯಾಗಲಿದೆ ಎಂದರು.

ಸಭೆಗೆ ಮಾಜಿ ಸೈನಿಕರು ಹಾಗೂ ಸೇವಾ ಟ್ರಸ್ಟ್ ಅಧ್ಯಕ್ಷರೂ, ಆರ್‌ಸಿಸಿ ಅಧ್ಯಕ್ಷರೂ ಆದ ಸುಧಾಕರ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಸ್ಥಾಪಕಾಧ್ಯಕ್ಷರಾದ ನಾರಾಯಣ ಕುಂಪಲ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಮತ್ತು ಮುಖ್ಯೋಪಾಧ್ಯಾಯಿನಿ ಚಂದ್ರಕಲಾ ಶಿಬಿರಕ್ಕೆ ಶುಭ ಹಾರೈಸಿದರು. ಚಿತ್ತಾರ ಪ್ರತಿಷ್ಠಾನದ ಸಂಚಾಲಕರಾದ ನವೀನ್ ಪಿಲಾರ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಕುಂಪಲ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು.

Exit mobile version