Site icon Ullalavani

ಯಕ್ಷಧ್ರುವ ಪಟ್ಲ ಫೌಂಡೇಶನ್: ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಇತ್ತೀಚೆಗೆ ನಡೆಯಿತು.


ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಅರುಣ್ ಐತಾಳ್ ಅವರು ಮಾತನಾಡಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಕಲಾವಿದರಿಗೆ ಗಣನೀಯ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಫೌಂಡೇಶನ್ ಆಶ್ರಯದಲ್ಲಿ ವಿವಿಧ ದಾನಿಗಳ ನೆರವಿನಿಂದ ಯಕ್ಷಗಾನ ಕಲಾವಿದರಿಗಾಗಿ ವೈವಿಧ್ಯಮಯ ಸೇವಾಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕದ್ರಿಯ ಮೊಕ್ತೇಸರ ದಿಲ್ ರಾಜ್ ಆಳ್ವ ಅವರಿಗೆ ಯಕ್ಷಧ್ರುವ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಪಾವಂಜೆ ಮೇಳದ ಯುವ ಭಾಗವತ ಭರತ್ ರಾಜ್ ಶೆಟ್ಟಿ ಹಾಗೂ ಹಾಸ್ಯಗಾರ ಸಂದೇಶ್ ಮಂದಾರ ಅವರಿಗೆ ಯಕ್ಷ ಗೌರವ ನೀಡಿ ಸನ್ಮಾನಿಸಲಾಯಿತು.
ಅತಿಥಿಗಳಾಗಿ ಉದ್ಯಮಿಗಳಾದ ರಮೇಶ್ ಶೆಟ್ಟಿ ಕಲ್ಕಾರ್, ಸಂತೋಷ್ ಪೂಂಜ, ಶ್ರೀನಿವಾಸ ಪೂಜಾರಿ ಮೆಲ್ಕಾರ್, ಸಂತೋಷ್ ಶೆಟ್ಟಿ ಬೋಳಾರ್, ಜಯಶೀಲ ಅಡ್ಯಂತಾಯ, ಟ್ರಸ್ಟಿಗಳಾದ ಆರತಿ ಆಳ್ವ, ಅನಿತಾ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ಘಟಕದ ಕೋಶಾಧಿಕಾರಿ ಗೋಪಿನಾಥ್ ಶೆಟ್ಟಿ ಮತ್ತು ಸುಬ್ರಹ್ಮಣ್ಯ ಭಟ್ ಇವರು ಸನ್ಮಾನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಎ. ಕೃಷ್ಣ ಶೆಟ್ಟಿ ತಾರೆಮಾರ್ ಸ್ವಾಗತಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳಿಕ ಶ್ರೀ ಪಾವಂಜೆ ಮೇಳದವರಿಂದ “ಶ್ರೀ ತುಳಸಿ” ಯಕ್ಷಗಾನ ಬಯಲಾಟ ಜರಗಿತು.

Exit mobile version