Site icon Ullalavani

ಅಮೇರಿಕ ಇಸ್ರೇಲ್ ಯುದ್ಧನೀತಿಗಳು ಜಗತ್ತಿಗೆ ಮಾರಕ: ಸುಕುಮಾರ್ ತೊಕ್ಕೊಟ್ಟು

ತೊಕ್ಕೊಟ್ಟು: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೇರಿಕಾ ನಡೆಸುತ್ತಿರುವ ಜಂಟಿ ದಾಳಿ ನಡೆಸುತ್ತಿರುವುದನ್ನು ಖಂಡಿಸಿ ಜನಪರ ಸಂಘಟನೆಗಳ ನೇತೃತ್ವದಲ್ಲಿ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ತೊಕ್ಕೊಟ್ಟು , ಕೆಲವು ತಿಂಗಳ ಹಿಂದೆ ಅಮೇರಿಕಾ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನಲ್ಲಿಯೇ ಅತೀ ಹೆಚ್ಚು ತೈಲ ಸಂಪತ್ತು ಹೊಂದಿರುವಂತಹ ವೆನಿಝುವೆಲಾ ದೇಶದ ಅಧ್ಯಕ್ಷ ಹಾಗೂ ಅವರ ಪತ್ನಿಯನ್ನು ಅಪಹರಣ ಮಾಡಿ ಆ ದೇಶವನ್ನು ತನ್ನ ಕಪಿ ಮುಷ್ಟಿಯಲ್ಲಿ ಇಡಲು ಪ್ರಯತ್ನಿಸುತ್ತಾರೆ.

ಇದೀಗ ಇರಾನ್ ಮೇಲೆ ಹಿಡಿತ ಸಾಧಿಸಲು ಇಸ್ರೇಲ್ ನೊಂದಿಗೆ ಕೈಜೋಡಿಸಿ ಇರಾನ್ ಮೇಲೆ ಯುದ್ಧ ಸಾರಿದ್ದಾರೆ.ಜಗತ್ತಿನ ತೈಲ ಸಂಪತ್ತು ತನ್ನ ನಿಯಂತ್ರಣದಲ್ಲಿ ಇರಬೇಕು ಎಂಬ ದುರಾಸೆ ಅಮೇರಿಕಾ ದೇಶಕ್ಕಿದೆ.. ಈ ಯುದ್ಧವು ಜಾಗತಿಕವಾಗಿ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುವಂತಿದೆ. ಇರಾನಿನ ಸರ್ವೋಚ್ಚ ನಾಯಕ ಆಯತೋಲ್ಲಾಹ್ ಖಾಮಿನಿ ಯನ್ನು ಹತ್ಯೆಗೈದರೆ ಇರಾನ್ ದೇಶ ಸುಮ್ಮನಾಗುತ್ತದೆ ಎಂಬ ಭ್ರಮೆಯೊಂದಿಗೆ ಯುದ್ಧ ಸಾರಿದ ಅಮೇರಿಕಾ ದೇಶ ಸದ್ಯ ಇರಾನಿನ ಶಕ್ತಿ ಸಾಮರ್ಥ್ಯ ಕಂಡು ಜಗತ್ತಿನ ಬಲಿಷ್ಠ ರಾಷ್ಟ್ರಗಳ ಬೆಂಬಲವನ್ನು ಕೇಳುತ್ತಿದೆ.. ಈ ಯುದ್ಧದಿಂದ ಭಾರತದಲ್ಲಿ ಸಾಮಾನ್ಯ ಜನರ ಬದುಕಿಗೆ ಪೆಟ್ಟು ಬೀಳಲಿದೆ. ಈಗಾಗಲೇ ಅಡುಗೆ ಅನಿಲ ದ ಕೊರತೆಯಿಂದ ಹೋಟೆಲ್ ಉದ್ಯಮ ಕುಂಟಿತವಾಗಿದ್ದು ಯುದ್ಧ ಹೀಗೆಯೇ ಮುಂದುವರಿದರೆ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಗಳಿಗೆ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಬಹುದು. ಯುದ್ಧ ಜಗತ್ತಿಗೆ ಮಾರಕ. ಯುದ್ಧ ನಿಂತು ಶಾಂತಿ ಸ್ಥಾಪನೆಯಾಗಬೇಕೆಂದರು.

ಪ್ರಗತಿಪರ ಚಿಂತಕರಾದ ರಮೇಶ್ ಉಳ್ಳಾಲ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಜಯಂತ್ ನಾಯ್ಕ್, ಇಬ್ರಾಹಿಂ ಮದಕ, ಶೇಖರ್ ಕುಂದರ್, ಚಂದ್ರಹಾಸ್ ಕುತ್ತಾರ್,ಜನಾರ್ಧನ ಕುತ್ತಾರ್, ಸುಂದರ ಕುಂಪಲ,ಮಹಿಳಾ ಸಂಘಟನೆ ಮುಖಂಡರಾದ ಪದ್ಮಾವತಿ ಶೆಟ್ಟಿ, ವಿಲಾಸಿನಿ ತೊಕ್ಕೊಟ್ಟು, ಪ್ರಮೋದಿನಿ ಕಲ್ಲಾಪು,ರೈತ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಡಿವೈಎಫ್ಐ ಮುಖಂಡರಾದ ನಿತಿನ್ ಕುತ್ತಾರ್, ರಝಕ್ ಮುಡಿಪು, ವಿಕಾಸ್ ಕುತ್ತಾರ್, ದಿವ್ಯರಾಜ್ ಕುತ್ತಾರ್, ಮಿಥುನ್ ರಾಜ್, ಉಪಸ್ಥಿತರಿದ್ದರು.

ಸಿಐಟಿಯು ಉಳ್ಳಾಲ ತಾಲೂಕು ಕಾರ್ಯದರ್ಶಿ ರೋಹಿದಾಸ್ ಭಟ್ನಗರ ಕಾರ್ಯಕ್ರಮ ನಿರೂಪಿಸಿದರು. ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ವಂದಿಸಿದರು.

Exit mobile version