ಮಂಗಳೂರು: ರಸ್ತೆ ಬದಿಯಲ್ಲಿ ಶೇಖರಣೆಯಾದ ಜಲ್ಲಿಕಲ್ಲುಗಳ ಮಧ್ಯೆ ಕಾಲಿನ ಬೆರಳುಗಳು ಸಿಲುಕಿ ಇಬ್ಬರು ಮಕ್ಕಳ ಜತೆಗಿದ್ದ ತಾಯಿ ಕೆಳಗೆ ಬಿದ್ದು, ಬೆರಳಿಗೆ ಗಾಯಗೊಂಡಿದ್ದು, ಆಕೆಯ ಶುಶ್ರೂಷೆ ನಡೆಸಿ ಪಂಪ್ವೆಲ್ ರಿಕ್ಷಾ ಪಾರ್ಕಿನ ರಿಕ್ಷಾ ಚಾಲಕರು ಹಾಗೂ ಟೈಂ ಕೀಪರ್ ಮಾನವೀಯತೆ ಮೆರೆದಿರುವ ಪ್ರಸಂಗ ಪಂಪ್ವೆಲ್ ನಲ್ಲಿ ಮಾ.೧೪ರ ೭.೩೦ರ ಸುಮಾರಿಗೆ ಸಂಭವಿಸಿದೆ.
ತಾಯಿ ತನ್ನಿಬ್ಬರು ಮಕ್ಕಳನ್ನು ತೋಳಿನಲ್ಲಿ ಮತ್ತು ಕೈಯಲ್ಲಿ ಹಿಡಿದುಕೊಂಡು ಬರುವಾಗ ಪಂಪ್ವೆಲ್ ರಸ್ತೆಬದಿಯಲ್ಲಿ ಸೇರಿರುವ ಜಲ್ಲಿಕಲ್ಲಿಗೆ ಕಾಲ ಬೆರಳುಗಳು ಸಿಲುಕಿ ಮಗು ಸಹಿತ ಕೆಳಗೆಬಿದ್ದಿದ್ದಾರೆ. ತೊಕ್ಕೊಟ್ಟು ಕಡೆಗೆ ಸಂಚರಿಸುವ ಬಸ್ಸುಗಳು ನಿಲ್ಲುವ ಸ್ಥಳದಲ್ಲೇ ಮಹಿಳೆ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ರಿಕ್ಷಾ ಚಾಲಕರು ತಾಯಿ ಮಗು ಇಬ್ಬರನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ತಾಯಿಯ ಕಾಲು ಬೆರಳಿಗೆ ಆದ ಗಂಭೀರ ಗಾಯಕ್ಕೆ ಪ್ರಾಥಮಿಕ ಚಿಕಿತ್ಸೆ ಮಾಡಿ, ರಿಕ್ಷಾದಲ್ಲೇ ಕುಳ್ಳಿರಿಸಿ ಬ್ಯಾಂಡೇಜ್ ಸುತ್ತಿ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ. ರಾತ್ರಿ ೯ ಗಂಟೆಯಾಗುತ್ತಿರುವಂತೆ ಒನ್ ಆಂಡ್ ಹಾಫ್ ಹೆಸರಿನಲ್ಲಿ ಅಧಿಕ ಬಾಡಿಗೆ ಪಡೆಯುವ ನಗರದ ಕೆಲ ರಿಕ್ಷಾ ಚಾಲಕರ ನಡುವೆ ಇಂತಹ ಚಾಲಕರ ಮಾನವೀಯ ಗುಣ ಪ್ರಶಂಸೆಗೆ ಪಾತ್ರವಾಗಿದೆ. ಪಂಪ್ವೆಲ್ ಸಮೀಪ ಸರ್ವಿಸ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರುವ ಜಂಕ್ಷನ್ನಿನಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಾಮಗಾರಿ ನಡೆಸಬೇಕಾಗಿದೆ ಅನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ರಿಕ್ಷಾ ಚಾಲಕರುಗಳಾದ ರಮಾನಂದ, ನಿತಿನ್, ಚರಣ್, ಬಸ್ ಟೈಮ್ ಕೀಪರ್ ಶರಣ್ ಮಾನವೀಯತೆಯ ಕಾರ್ಯದಲ್ಲಿ ಇದ್ದರು.