Site icon Ullalavani

ಕಿನ್ಯಾಜೆ- ಕುರ್ನಾಡು ಬೆಟ್ಟು ಸಂಪರ್ಕ ರಸ್ತೆ ಮೇಲೆ ಅತಿಕ್ರಮಣ; ಸಂಚಾರಕ್ಕೆ ಅಡಚಣೆ; ಪ್ರತಿಭಟನೆ ಎಚ್ಚರಿಕೆ

ಕುರ್ನಾಡು : ಕುರ್ನಾಡು ಗ್ರಾಮದ ಕಿನ್ಯಾಜೆಯಿಂದ ಕುರ್ನಾಡು ಬೆಟ್ಟುವನ್ನು ಸಂಪರ್ಕಿಸುವ ಸಾರ್ವಜನಿಕ ರಸ್ತೆಯ ಮೇಲೆ ಅತಿಕ್ರಮಣ ನಡೆಯುತ್ತಿದ್ದು, ಇದರಿಂದ ಸುಮಾರು 12 ಕುಟುಂಬಗಳ ದೈನಂದಿನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಆದ್ದರಿಂದ ಕೂಡಲೇ ರಸ್ತೆಗೆ ಅಡ್ಡಲಾಗಿ ಹಾಕಿರುವ ಅಡಿಕೆ ಮರದ ತುಂಡುಗಳು ಹಾಗೂ ಕಲ್ಲಿನ ರಾಶಿಗಳನ್ನು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ರಸ್ತೆ ವಂಚಿತರು ಹಾಗೂ ಊರಿನ ಪ್ರಮುಖರು ಸಂಘಟನೆಯ ಮುಂದಾಳ್ವತದಲ್ಲಿ ಫೆಬ್ರವರಿ 9ರ ಸೋಮವಾರದಂದು ಪ್ರತಿಭಟನೆ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಎಚ್ಚರಿಕೆ ನೀಡಿದ್ದಾರೆ.



ಅವರು ಶುಕ್ರವಾರ ತೊಕ್ಕೊಟ್ಟು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ರಸ್ತೆಯನ್ನು ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಹಾಗೂ ಅನಾರೋಗ್ಯ ಪೀಡಿತರು ಪ್ರತಿದಿನ ಬಳಸುತ್ತಿದ್ದು, ರಸ್ತೆ ಇಕ್ಕೆಲೆಗಳಲ್ಲಿ ಸಂತೋಷ್ ಡಿಸೋಜ ಎಂಬವರು ಅಡಿಕೆ ಮರದ ತುಂಡುಗಳು ಹಾಗೂ ಕಲ್ಲುಗಳನ್ನು ರಾಶಿ ಹಾಕಿರುವುದರಿಂದ ವಾಹನ ಹಾಗೂ ಕಾಲ್ನಡಿಗೆ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದರು.
ಈ ರಸ್ತೆಯನ್ನು ಬಳಸುತ್ತಿರುವ 12 ಕುಟುಂಬಗಳಲ್ಲಿ 4 ಕುಟುಂಬಗಳು ದಲಿತ ಸಮುದಾಯಕ್ಕೆ ಸೇರಿದ್ದು, ಇತರ ವರ್ಗದ ಜನರೂ ಸಹ ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಕಳೆದ 30 ವರ್ಷಗಳಿಂದ ಸಾರ್ವಜನಿಕರು ಈ ರಸ್ತೆಯನ್ನು ಉಪಯೋಗಿಸುತ್ತಾ ಬಂದಿದ್ದು, ಇದೀಗ ಏಕಾಏಕಿ ಸಂಚಾರಕ್ಕೆ ತಡೆ ಸೃಷ್ಟಿಸಿರುವುದು ಸರಿಯಲ್ಲ ಎಂದು ಅವರು ಹೇಳಿದರು.


ಈ ಕುರಿತು ಪಂಚಾಯತ್ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರೂ, ರಸ್ತೆಗೆ ಅಡ್ಡಲಾಗಿ ಇಡಲಾಗಿರುವ ಅಡಿಕೆ ಮರದ ತುಂಡುಗಳು ಹಾಗೂ ಕಲ್ಲಿನ ರಾಶಿಗಳನ್ನು ಇನ್ನೂ ತೆರವುಗೊಳಿಸಿಲ್ಲ. ಪಂಚಾಯತ್ ಕೂಡ ಈ ರಸ್ತೆ ಸಾರ್ವಜನಿಕ ರಸ್ತೆ ಎಂದು ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.


ದೇವಕಿ ಎಂಬವರ ಮಗ ನಿಧನರಾದ ಸಂದರ್ಭದಲ್ಲಿ ಮೃತದೇಹವನ್ನು ಸಾಗಿಸಲು ಅಪಾರ ಕಷ್ಟ ಅನುಭವಿಸಬೇಕಾಯಿತು. ರಸ್ತೆಯ ಅತಿಕ್ರಮಣದಿಂದ ವಾಹನಗಳು ಪ್ರವೇಶಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಸ್ಥರು ಮೃತದೇಹವನ್ನು ಹೊತ್ತುಕೊಂಡು ಸಾಗಬೇಕಾದ ದುಸ್ಥಿತಿ ಎದುರಾಯಿತು. ಅನಾರೋಗ್ಯದ ಸಂದರ್ಭದಲ್ಲೂ ಸಾರ್ವಜನಿಕರಿಗೆ ಭಾರೀ ತೊಂದರೆ ಎದುರಾಗುತ್ತಿದೆ ಎಂದು ಅವರು ಆರೋಪಿಸಿದರು.
ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದ್ದು, ಇದುವರೆಗೆ ಶಾಸಕರ ಗಮನಕ್ಕೆ ತರುವಂತೆ ಯಾವುದೇ ಲಿಖಿತ ದೂರು ನೀಡಲಾಗಿಲ್ಲ ಎಂದರು.


ಸಂತೋಷ್ ಡಿಸೋಜ ಅವರು ಈ ವಿಚಾರವಾಗಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ರಸ್ತೆಯಲ್ಲಿ ಯಾವುದೇ ಅಭಿವೃದ್ಧಿ ಮಾಡಬಾರದು ಎಂದು ತಿಳಿಸಿದ್ದಾರೆ. ಆದರೆ ನಮಗೆ ಯಾವುದೇ ಅಭಿವೃದ್ಧಿ ಬೇಡ, ಕೇವಲ ರಸ್ತೆಗೆ ಅಡ್ಡಲಾಗಿ ಹಾಕಿರುವ ಅಡಿಕೆ ಮರದ ತುಂಡುಗಳು ಹಾಗೂ ಕಲ್ಲಿನ ರಾಶಿಗಳನ್ನು ತೆರವುಗೊಳಿಸಿದರೆ ಸಾಕು ಎಂದು ಅವರು ಸ್ಪಷ್ಟಪಡಿಸಿದರು.


ರಸ್ತೆ ವಂಚಿತರಾದ ಚಂದ್ರಶೇಖರ್ ಆಚಾರ್ಯ ಮಾತನಾಡಿ, “ನನಗೆ ಲೋ ಬಿಪಿ ಆಗಿ ಮನೆಯಲ್ಲಿ ಬಿದ್ದಿದ್ದಾಗ ಸ್ಥಳೀಯ ಯುವಕರು ಬೆಂಚಿನ ಮೂಲಕ ಹೊತ್ತುಕೊಂಡು ಹೋಗಬೇಕಾಯಿತು. ಮತ್ತೊಮ್ಮೆ ಕಾಲು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲೂ ಆಟೋ ರಿಕ್ಷಾ ಬರಲು ಅವಕಾಶ ನೀಡುವಂತೆ ವಿನಂತಿಸಿದರೂ ಸಂತೋಷ್ ಡಿಸೋಜ ಅವರು ಒಪ್ಪಲಿಲ್ಲ” ಎಂದು ಆರೋಪಿಸಿದರು.


ತಾತ್ಕಾಲಿಕ ಪರ್ಯಾಯ ರಸ್ತೆ ನೀಡಲಾಗಿದ್ದರೂ, ಮಳೆಗಾಲದಲ್ಲಿ ಆ ರಸ್ತೆ ಸಂಪೂರ್ಣವಾಗಿ ಉಪಯೋಗಕ್ಕೆ ಅಸಾಧ್ಯವಾಗಿದ್ದು ಜನರಿಗೆ ತೀವ್ರ ತೊಂದರೆ ಉಂಟಾಗಿದೆ. ಆದ್ದರಿಂದ ಕೂಡಲೇ ರಸ್ತೆ ಮೇಲಿನ ಅಡಿಕೆ ಮರದ ತುಂಡುಗಳು ಹಾಗೂ ಕಲ್ಲಿನ ರಾಶಿಗಳನ್ನು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಪ್ರಸಾದ್ ಬೊಳ್ಯಾರು, ತಾಲೂಕು ಸಂಚಾಲಕ ಜಗದೀಶ್ ಮಂಜನಾಡಿ, ರಸ್ತೆ ವಂಚಿತರಾದ ಭವಾನಿ, ರತ್ನ, ನಾರಾಯಣ ಆಚಾರ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version