Site icon Ullalavani

ಬೈಕ್ ಕಳ್ಳತನಕ್ಕೆ ಯತ್ನ ಆರೋಪ: ಇಬ್ಬರಿಗೆ ಥಳಿಸಿ ಮರಕ್ಕೆ ಕಟ್ಟಿ ಹಾಕಿ ವೇಣೂರು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಬೆಳ್ತಂಗಡಿ : ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿರುವ ಆರೋಪದ ಮೇರೆಗೆ ಸಾರ್ವಜನಿಕರು ಸೇರಿ ಇಬ್ಬರು ಆರೋಪಿಗಳನ್ನು ಹಿಡಿದು ಥಳಿಸಿ, ಮರಕ್ಕೆ ಕಟ್ಟಿ ಹಾಕಿ ಬಳಿಕ ವೇಣೂರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಜನವರಿ 20 ರಂದು ಬೆಳಗಿನ ಜಾವ 2.10 ರಿಂದ 2.30 ರ ನಡುವೆ ಈ ಘಟನೆ ನಡೆದಿದೆ. ಆರೋಪಿಗಳನ್ನು ಮಂಗಳೂರು ನಗರದ ಕೂಳೂರು ನಿವಾಸಿಗಳಾದ ಮೊಯಿದ್ದೀನ್ ನಾಸಿರ್ ಮತ್ತು ಅಬ್ದುಲ್ ಸಮದ್ ಎಂದು ಗುರುತಿಸಲಾಗಿದೆ.ದೂರಿನ ಪ್ರಕಾರ, ಈ ಜೋಡಿ ದೇವಿಪ್ರಸಾದ್ ಅವರ ಮನೆಯ ಬಳಿ ಕಾಣಿಸಿಕೊಂಡಿತ್ತು. ಆ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದ ನೆರೆಹೊರೆಯವರು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.ಸಮೀಪದ ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೇವಿಪ್ರಸಾದ್ ಇತರರೊಂದಿಗೆ ಮನೆಗೆ ಧಾವಿಸಿ ಬಂದಾಗ ಆರೋಪಿ KA-19-W-407 ನೋಂದಣಿ ಸಂಖ್ಯೆಯ ಬೈಕ್‌ ಕದ್ದು ಪರಾರಿಯಾಗುತ್ತಿರುವುದನ್ನು ಕಂಡಿದ್ದಾರೆ ಎಂದು ಹೇಳಲಾಗಿದೆ. ಅವರನ್ನು ಬೆನ್ನಟ್ಟಿ ತಡೆದಾಗ, ಆರೋಪಿ ದೇವಿಪ್ರಸಾದ್ ಮೇಲೆ ಹಲ್ಲೆ ನಡೆಸಿ ಬೈಕ್‌ನೊಂದಿಗೆ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಮಾಹಿತಿ ಪಡೆದ ಸುಮಾರು 25 ರಿಂದ 30 ಸ್ಥಳೀಯರ ಗುಂಪು ಸ್ಥಳದಲ್ಲಿ ಜಮಾಯಿಸಿ, ಇಬ್ಬರನ್ನು ಬಲವಂತವಾಗಿ ಹಿಡಿದು ಪೊಲೀಸರು ಬರುವವರೆಗೂ ತಡೆದಿದ್ದಾರೆ.ದೇವಿಪ್ರಸಾದ್ ನೀಡಿದ ದೂರಿನ ಆಧಾರದ ಮೇಲೆ, ವೇಣೂರು ಪೊಲೀಸರು ಅಬ್ದುಲ್ ಸಮದ್ ಮತ್ತು ಮೊಯಿದ್ದೀನ್ ನಾಸಿರ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), 2023 ರ ಸೆಕ್ಷನ್ 303(2) ಮತ್ತು 307 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.ಘಟನೆಗೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಎಂದು ವರದಿಯಾಗಿದೆ.

Exit mobile version