ಮಂಗಳೂರು; ದ.ಕ ಜಿಲ್ಲೆ ಮಂಗಳೂರು ತಾಲೂಕಿನ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತು ಘಟಕಕ್ಕೆ ಸರಕಾರದ ವತಿಯಿಂದ ಗುರುಪುರದ ವಾಮಂಜೂರಿನ ತಿರುವೆಲ್ ಗ್ರಾಮದಲ್ಲಿ ಅರ್ಧ ಎಕರೆ ಕನ್ನಡ ಭವನ ನಿರ್ಮಾಣಕ್ಕಾಗಿ ಜಾಗ ಮಂಜೂರಾಗಿದ್ದು, ಶೀಘ್ರದಲ್ಲೇ ಶಂಕು ನೆರೆವೇರಲಿದೆ ಎಂದು ಕಸಪಾ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರು ಡಾ.ಮಂಜುನಾಥ್ ಎಸ್ ರೇವಣಕರ್ ತಿಳಿಸಿದ್ದಾರೆ.
ಇವರು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಭವನವು ಮುಂದಿನ ದಿನಗಳಲ್ಲಿ ಕರಾವಳಿ ಭಾಗದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ರಾರಾಜಿಸಲಿದೆ ಎಂದು ಹೇಳಿದ್ದಾರೆ.
ಅಧ್ಯಕ್ಷರಾದ ಡಾ.ಮಂಜುನಾಥ ಎಸ್ ರೇವಣಕರ್ ಅವರ ಕಳೆದ ನಾಲ್ಕು ವರ್ಷಗಳ ನಿರಂತರ ಪರಿಶ್ರಮ ಮತ್ತು ಮುಂದಾಳತ್ವದಲ್ಲಿ ಈ ಜಾಗ ಮಂಜೂರಾಗಿದೆ. ತಾಲೂಕು ಮಟ್ಟದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಭವನವೊಂದರ ಅಗತ್ಯತೆಯನ್ನು ಮನಗಂಡು ಸರ್ಕಾರದ ಮಟ್ಟದಲ್ಲಿ ಸತತ ಹೋರಾಟವನ್ನು ನಡೆಸಿದ್ದರು. ಅದರ ಫಲವಾಗಿ ಇಂದು ಜಾಗ ಮಂಜೂರಾಗಿದೆ ಎಂದರೆ ತಪ್ಪಗಲಾರದು.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಇದರ ಅಧ್ಯಕ್ಷರಾದ ಎಂ.ಪಿ ಶ್ರೀನಾಥ್ ಉಜಿರೆ, ಧರ್ಮದರ್ಶಿಯಾದ
ಹರಿಕೃಷ್ಣ ಪುನರೂರು, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಗೌರವ ಕಾರ್ಯದರ್ಶಿಯಾದ ಮುರಳಿ ಮೋಹನ್ ಚೂಂತಾರು, ಗಣೇಶ್ ಪ್ರಸಾದ್ ಜಿ, ಕಾರ್ಯದರ್ಶಿ ಸುಭ್ರಾಯ ಭಟ್, ತಾಲೂಕು ಘಟಕದ ಪದಾಧಿಕಾರಿ ಮೀನಾಕ್ಷಿ ಉಪಸ್ಥಿತರಿದ್ದರು.
