Site icon Ullalavani

ದೇರಳಕಟ್ಟೆ: ಅಪಘಾತವಾದ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ ಸಚಿವ ಖಾದರ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ಸ್ಕೂಟರ್ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ ಸಚಿವ ಖಾದರ್ ಅವರ ಚಿಕಿತ್ಸಾ ವೆಚ್ಚವನ್ನು ಭರಿಸಿ ಮತ್ತೊಮ್ಮೆ ಎಲ್ಲಾ ಜನಪ್ರತಿನಿಧಿಗಳಿಗೆ ಮಾದರಿಯಾದ ಪ್ರಸಂಗ ದೇರಳಕಟ್ಟೆಯಲ್ಲಿ ಗುರುವಾರ ಮಧ್ಯಾಹ್ನದ ವೇಳೆ ನಡೆಯಿತು.

ಅಸೈಗೋಳಿ ನಿವಾಸಿಗಳಾದ ಜೇಮ್ಸ್ (50) ಮತ್ತು ಪತ್ನಿ ಸೂಝಾನ್ (45) ದಂಪತಿ ತೊಕ್ಕೊಟ್ಟಿನಿಂದ ಅಸೈಗೋಳಿ ಮನೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ದೇರಳಕಟ್ಟೆ ಸಮೀಪ ಆಯತಪ್ಪಿ ಸ್ಕೂಟರ್ ರಸ್ತೆಗೆ ಉರುಳಿಬಿದ್ದಿತ್ತು., ಪರಿಣಾಮ ಕಾಲಿಗೆ ಮತ್ತು ತಲೆಗೆ ಗಂಭೀರ ಗಾಯಗೊಂಡಿದ್ದ ದಂಪತಿ ರಸ್ತೆಯಲ್ಲೇ ಬಿದ್ದಿದ್ದು, ಸ್ಥಳೀಯರು ಯಾರೂ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನವನ್ನು ಮಾಡಿರಲಿಲ್ಲ. ಅಷ್ಟರಲ್ಲಿ ನರಿಂಗಾನದಲ್ಲಿ ನಡೆಯುವ ಪ್ರಥಮ ವರ್ಷದ ಗಣೇಶೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಂಗಳೂರಿಗೆ ಹಿಂತಿರುಗುತ್ತಿದ್ದ ಸಚಿವ ಖಾದರ್ ಅವರು ಅಪಘಾತ ನಡೆದ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ ಹಿಂದೆ ಮುಂದೆ ನೋಡದೆ ಕಾರಿನಲ್ಲಿದ್ದ ಕಾರ್ಯಕರ್ತರ ಸಹಕಾರದೊಂದಿಗೆ ಗಾಯಾಳು ದಂಪತಿಯನ್ನು ತಮ್ಮ ವಾಹನದೊಳಗೆ ಹಾಕಿ ಕೂಡಲೇ ದೇರಳಕಟ್ಟೆಯ ನಿಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದರು. ಅಲ್ಲದೆ ಮುಂಗಡ ಪಾವತಿ ಹಣವನ್ನು ಅವರೇ ಖುದ್ದು ಭರಿಸಿದರು.

ಬಿಸಿಲು ತಡೆಯಲಾರದೆ ತಲೆತಿರುಗಿ ಪತ್ನಿ ಸಮೇತ ರಸ್ತೆಗೆ ಎಸೆಯಲ್ಪಟ್ಟೆವು. ಮತ್ತೆ ಏನೂ ಕಾಣುತ್ತಿರಲಿಲ್ಲ. ಎಚ್ಚರಗೊಂಡಾಗ ಆಸ್ಪತ್ರೆಯಲ್ಲಿ ಹಾಸಿಗೆಯಲ್ಲಿ ಮಲಗಿದ್ದೆ. ಸಚಿವರು ಆಸ್ಪತ್ರೆಗೆ ದಾಖಲಿಸಿರುವುದು ಗೊತ್ತಾಯಿತು. ಅವರಿಗೆ ಕೃತಜ್ಞತೆಯನ್ನು ದಂಪತಿ ಸಲ್ಲಿಸಿದ್ದಾರೆ.

Exit mobile version