Site icon Ullalavani

ಬುರ್ದುಗೋಳಿ ಕಲ್ಲಾಪುವಿನ ಮಣ್ಣುಮನೆಯ ಭಾವನೆ ನೀಡಿದೆ : ವಾರಣಾಸಿ ಕಾಶಿ ಮಠದ ಶ್ರೀ ಶ್ರೀ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ

ಕಲ್ಲಾಪು: ಬುರ್ದುಗೋಳಿ ಕಲ್ಲಾಪುವಿನ ಮಣ್ಣು ನನಗೆ ಮನೆ ಅನ್ನುವ ಭಾವನೆ ನೀಡಿದೆ. ಬೇರೆ ಊರಿಗೆ ಬಂದಿದ್ದೇವೆ ಎಂಬ ಯಾವುದೇ ರೀತಿಯ ಅಂಜಿಕೆ ಇಲ್ಲಿ ಎಷ್ಟೂ ಅನಿಸಿಲ್ಲ. ಸಮಿತಿ ಸದಸ್ಯರ ಪ್ರೀತಿ, ಅಪ್ಯಾಯತೆ, ಆತ್ಮೀಯತೆ ಹಾಗೂ ದೈವದಲ್ಲಿ ಇಟ್ಟ ಅಚಲ ನಂಬಿಕೆ ಇವೆಲ್ಲವೂ ನನಗೆ ಅಜ್ಜನ ಕಾರಣೀಕ ಶಕ್ತಿಯ ಜೀವಂತ ಪ್ರತ್ಯಕ್ಷ ಉದಾಹರಣೆಯಂತೆ ಕಾಣುತ್ತಿವೆ.ನಾವು ದೈವವನ್ನು ಎಷ್ಟು ಗಟ್ಟಿಯಾಗಿ ಹಿಡಿದುಕೊಳ್ಳುತ್ತೇವೋ, ಆಪತ್ತು ಬಂದಾಗ ದೈವಗಳೇ ಕೈಚಾಚಿ ನಮ್ಮನ್ನು ರಕ್ಷಿಸುತ್ತವೆ ಎಂದು ವಾರಣಾಸಿ ಕಾಶಿ ಮಠದ ಶ್ರೀ ಶ್ರೀ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ಕಲ್ಲಾಪು ಬುರ್ದುಗೋಳಿಯ ಗುಳಿಗ ಕೊರಗಜ್ಜ ದೈವಗಳ ಉದ್ಭವಶಿಲೆಯ ಪ್ರಧಾನ ಆದಿಸ್ಥಳ ಸೇವಾ ಟ್ರಸ್ಟ್‌ ಆಶ್ರಯದಲ್ಲಿ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಗುಳಿಗ ಕೊರಗಜ್ಜ ದೈವದ ವರ್ಷಾವಧಿ ಕೋಲದಲ್ಲಿ ಭಾಗವಹಿಸಿ ಮಾತನಾಡಿದರು.ಕಲ್ಲಾಪುವಿನ ಮಣ್ಣಿನಲ್ಲಿ ನಮಗೆ ಏನಾಗಿದೆ ಎಂಬುದೇ ಮುಖ್ಯ. ಜೀವನದ ಪ್ರತಿಯೊಂದು ನಿರ್ಧಾರವೂ ಕೊರಗಜ್ಜನ ಅಪ್ಪಣೆಯಿಲ್ಲದೆ ತೆಗೆದುಕೊಳ್ಳುವುದೇ ಇಲ್ಲ. ಅಜ್ಜ ನಮ್ಮನ್ನು ಇಷ್ಟಪಡುತ್ತಾರಾ, ನಾವು ಅವರನ್ನು ಇಷ್ಟಪಡುತ್ತೇವೋ ಅದು ತಿಳಿಯುವುದಕ್ಕಿಂತ, ಅವರ ಜೊತೆಗಿನ ಅಂತರಂಗದ ಬಂಧವೇ ದೊಡ್ಡದು.ಬೆಳಕಿನ ದೀವಟಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ಅಜ್ಜ ಮುಂದೆ ಸಾಗುತ್ತಾ, ನನ್ನನ್ನು ಹಿಂದೆ ಕರೆದುಕೊಂಡು ಹೋಗುತ್ತಿರುವ ಅನುಭವ,ಅದು ನನ್ನ ಬದುಕಿನ ಅಮೂಲ್ಯ ಕ್ಷಣ. ಅಜ್ಜನಿಂದ ನನಗೆ ಅಪಾರವಾದ ಪ್ರೀತಿ ದೊರೆತಿದೆ. ಎರಡು ವರ್ಷಗಳ ಪರಿಚಯದಲ್ಲಿ ಆಡಳಿತ ಮಂಡಳಿಯವರೊಂದಿಗೆ ಬೆಸೆದ ಆತ್ಮೀಯ ಸಂಬಂಧ, ಅಜ್ಜನ ಮೂಲ ಶಕ್ತಿಯನ್ನು ಇನ್ನಷ್ಟು ಹತ್ತಿರ ಮಾಡಿದೆ. ಯಶವಂತ್ ಶೆಟ್ಟಿ ಅವರಿಂದ ಪರಿಚಯವಾದ ಈ ಕ್ಷೇತ್ರ ನನ್ನ ಬದುಕಿನ ಹಾದಿಗಳನ್ನು ಬದಲಿಸಿದೆ. ಬೇರೆಯವರಿಗೆ ವಿಚಾರ ಹೇಳುವಾಗ ಒಂದೇ ಮಾತು ಹೇಳುತ್ತೇನೆ ಮರ್ಕಟ ಕಿಶೋರ ನ್ಯಾಯದಲ್ಲಿ ದೈವವನ್ನು ನಂಬಲೇಬೇಕು. ದೈವ ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ ಅನ್ನುವುದನ್ನು ತಾನೇ ಸಾಕ್ಷಿ ಎಂದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಮಾತನಾಡಿ ಬುರ್ದುಗೋಳಿ ಕ್ಷೇತ್ರ ಇತಿಹಾಸ ಪಾವಿತ್ರ್ಯತೆಯನ್ನು ಹೊಂದಿರುವ, ಭಕ್ತಿಪೂರಕವಾದ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಸಮರ್ಥವಾಗಿ ಕೊಂಡೊಯ್ಯುತ್ತಿರುವ ಆಡಳಿತ ಸಮಿತಿಯ ಸದಸ್ಯರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಹಿನ್ನೆಲೆ, ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರದಿಂದ ಲಭ್ಯವಾಗುವ ಎಲ್ಲಾ ರೀತಿಯ ಸಹಕಾರವನ್ನು ನೀಡಲು ನಾವು ಬದ್ಧರಾಗಿದ್ದೇವೆ. ಕ್ಷೇತ್ರಕ್ಕೆ ನೀಡುವ ಸಹಕಾರವು ಸಮಾಜಕ್ಕೆ ಪರೋಕ್ಷವಾಗಿ ನೀಡುವ ಸಹಕಾರದಂತೆಯೇ ಎಂಬ ನಂಬಿಕೆ ನಮ್ಮದು. ಈಗಾಗಲೇ ಡ್ರೈನ್ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುವೆವು ಎಂದರು.

ಶ್ರೀ ಕ್ಷೇತ್ರ ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಚಂದ್ರಹಾಸ್‌ ಪಂಡಿತ್‌ ಹೌಸ್ ಮಾತನಾಡಿ, ಸ್ಥಳಾವಕಾಶ ಹಾಗೂ ಮೂಲಸೌಕರ್ಯ ವ್ಯವಸ್ಥೆಯಲ್ಲಿ ಇದ್ದ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ಭೂದಾನ ನಿಧಿ ಹಾಗೂ ಸ್ವರ್ಣ ಭಂಡಾರ ನಿಧಿಗಳನ್ನು ಆರಂಭಿಸಲಾಗಿದೆ. ಕೊರಗಜ್ಜನ ಕಾರಣಿಕ ಶಕ್ತಿಯಿಂದಾಗಿ ಈ ಎಲ್ಲಾ ವ್ಯವಸ್ಥೆಗಳು ನಿಧಾನವಾಗಿ ನಿವಾರಣೆಯಾಗುತ್ತಿದ್ದು, ಕೈಗೊಂಡಿರುವ ಕಾರ್ಯಗಳು ಸೂಸೂತ್ರವಾಗಿ ಮತ್ತು ಯಶಸ್ವಿಯಾಗಿ ನೆರವೇರುತ್ತಿವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ದೈವಾನುಗ್ರಹ ಪಡೆದುಕೊಳ್ಳುತ್ತಿದ್ದಾರೆ ಎಂದರು.ಈ ಸಂದರ್ಭ ಬೆಂಗಳೂರಿನ ಕ್ಷತ್ರಿಯ ಮಹಿಳಾ ಸಂಘದ ಅಧ್ಯಕ್ಷೆ ಮಹಾಲಕ್ಷ್ಮೀ ಮೇಘರಾಜ್‌ , ತಮಿಳುನಾಡು ಪಿಎಂಕೆ ಪಕ್ಷದ ಜಿಲ್ಲಾಧ್ಯಕ್ಷರಾದ ಬಿ.ಮಂಜುನಾಥ್‌ , ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್‌ ಆಳ್ವ ಕುವೆತ್ತಬೈಲ್ ಹಾಗೂ ಕಲ್ಲಾಪು ಬುರ್ದುಗೋಳಿಯ ಗುಳಿಗ ಕೊರಗಜ್ಜ ದೈವಗಳ ಉದ್ಭವಶಿಲೆಯ ಪ್ರಧಾನ ಆದಿಸ್ಥಳ ಸೇವಾ ಟ್ರಸ್ಟ್‌ ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ದೈವಗಳ ಉದ್ಭವಶಿಲೆಯ ಪ್ರಧಾನ ಆದಿಸ್ಥಳದ ಕುರಿತಾದ ʻಸಿಂಗಾರ ಸುಗಿಪುʼ ತುಳು ಭಕ್ತಿಗೀತೆ ವಿಡಿಯೋ ಹಾಡುಗಳ ಬಿಡುಗಡೆಯನ್ನು ಸ್ವಾಮಿಗಳು ನಡೆಸಿಕೊಟ್ಟರು.

Exit mobile version