Site icon Ullalavani

ಉಡುಪಿ ಬೀಚ್​ನಲ್ಲಿ ಪವಾಡ! ಕಡಲಲ್ಲಿ ತೇಲಿಬಂತೇ ಕೃಷ್ಣನ ವಿಗ್ರಹ? ಅಸಲಿಯತ್ತು ಇಲ್ಲಿದೆ…

ಉಡುಪಿ, ಡಿ.23: ಕೆಲವೊಂದನ್ನು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು ಎಂಬ ಮಾತಿದೆ. ನೋಡಿದ ತಕ್ಷಣ ಅದನ್ನು ನಿರ್ಧಾರಿಸುವುದಲ್ಲ. ಅದರ ಬಗ್ಗೆ ವಿಚಾರ ಮಾಡಬೇಕು. ಅದರಲ್ಲೂ ಈ ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲ ವಿಷಯಗಳನ್ನು ನಂಬಬಾರದು. ಕೆಲವೊಂದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಯಾಕೆಂದರೆ ಅದರಲ್ಲಿ ಎಲ್ಲವೂ ಸತ್ಯವಾಗಿರುವುದಿಲ್ಲ. ಇದೀಗ ಇಲ್ಲೊಂದು ಅಂತಹದೇ ಘಟನೆಯೊಂದು ನಡೆದಿದೆ. 

ಇತ್ತೀಚಿಗೆ ಉಡುಪಿಗೆ ಸಂಬಂಧಿಸಿದ  ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿತ್ತು. ಆದರೆ ಈ ವೈರಲ್​​ ಆಗಿರುವ ವಿಡಿಯೋದಲ್ಲಿರುವ ಸತ್ಯವೇ ಬೇರೆ. ಅಷ್ಟಕ್ಕೂ ವೈರಲ್​​​ ಆಗಿರುವ ವಿಡಿಯೋ ಯಾವುದು? ಅದರಲ್ಲಿ ಇರುವ ನಿಜವಾದ ಅಂಶವೇನು? ಎಂಬುದನ್ನು ಇಲ್ಲಿ ತಿಳಿಸಿದ್ದೇವೆ ನೋಡಿ. ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಇತ್ತಿಚಿಗೆ ವಿಗ್ರಹವೊಂದು ತೇಲಿ ಬಂದಿತ್ತು. ಇದು ದೇವರ ಪವಾಡ ಎಂದು ಜನ ನಂಬಿದ್ದರು. ಆದರೆ ಇದರ ಹಿಂದೆ ಇರುವ ಅಸಲಿ ಸತ್ಯ ಬೇರೆಯೇ.

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್​​ ಆಗಿರುವ ಈ ವಿಡಿಯೋದಲ್ಲಿ ಉಡುಪಿಯ ಮಲ್ಪೆ ಬೀಚ್​​ನಲ್ಲಿ ಕೃಷ್ಣನ ವಿಗ್ರಹವೊಂದು ತೇಲಿ ಬಂದಿದೆ. ಇದು ಕೃಷ್ಣನ ಪವಾಡ ಎಂದು ನಂಬಿದ್ದರು. ಸೋಶಿಯಲ್​​ ಮೀಡಿಯಾದಲ್ಲಿ ಇಸ್ಕಾನ್ ಭಕ್ತರು ಮಲ್ಪೆ ಬೀಚ್​​​ನಲ್ಲಿ ಕೃಷ್ಣನ ವಿಗ್ರಹ ಹಿಡಿದು ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದು ಕೃಷ್ಣನ ಮಹಿಮೆ ಎಂದು ಹೇಳಿದ್ದರು. ಈ ಹಿಂದೆಯೂ ಕೂಡ ಇಂತಹ ಪವಾಡ ನಡೆದಿದೆ. ಇದೀಗ ಮತ್ತೆ ಇದು ಮರುಕಳಿಸಿದೆ ಎಂದು ಹೇಳಿದ್ದರು.  ಈ ವಿಗ್ರಹವನ್ನು ನೋಡಲು 18 ಬಸ್ ಗಳಲ್ಲಿ ಮಲ್ಪೆ ಬೀಚ್​​ಗೆ ಬಂದಿದ್ದರು. ಅವರು ಈ  ಕಪ್ಪು ವಿಗ್ರಹವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಇದು ಕಲಿಯುಗದಲ್ಲಿ ನಡೆದ ಪವಾಡ ಎಂದು ಹೇಳಿದ್ದಾರೆ. ಆದರೆ ಇದರ ಹಿಂದೆ ಬೇರೆಯೇ ಕಥೆ ಇದೆ. ನಿಜಕ್ಕೂ ಇದು ಯಾವುದರ ವಿಗ್ರಹ, ಅದು ಕಡಲಿನಲ್ಲಿ ಪತ್ತೆಯಾಗಿದ್ದು ಹೇಗೆ? ಎಂಬುದಕ್ಕೆ ಇಲ್ಲಿದೆ ಉತ್ತರ.

ವಾಸ್ತವಾಂಶ ಏನು?:

ಕಡಲಲ್ಲಿ ತೇಲಿ ಬಂದಿರುವುದು ಕೃಷ್ಣನ ವಿಗ್ರಹ ಅಲ್ಲ ಎಂದು ಹೇಳಲಾಗಿದೆ. ಇದು ಜಯ- ವಿಜಯ ವಿಗ್ರಹ ಎಂದು ಹೇಳಲಾಗಿದೆ. ದೇವಾಲಯದ ಗರ್ಭಗುಡಿಯ ಮುಂದೆ ಇರುವ ದ್ವಾರಪಾಲಕರು ಜಯ ವಿಜಯರ ವಿಗ್ರಹ ಎಂದು ಇದೀಗ ಸತ್ಯಾಂಶ ಹೊರಬಂದಿದೆ. ಹಿಂದೂ ಸಂಪ್ರಾದಾಯದ ಪ್ರಕಾರ ಒಂದು ವಿಗ್ರಹ ಭಗ್ನಗೊಂಡ ನಂತರ ಅದನ್ನು ಸಮುದ್ರಕ್ಕೆ ಹಾಕುತ್ತಾರೆ. ಇದೀಗ ಇಲ್ಲಿ ನಡೆದಿರುವುದು ಕೂಡ ಅದೇ, ಭಗ್ನಗೊಂಡ ವಿಗ್ರಹವನ್ನು ಸಮುದ್ರಕ್ಕೆ ಹಾಕಿದ್ದಾರೆ. ಅದು ತೇಲಿ ಬಂದು ಉಡುಪಿಯ ಮಲ್ಪೆ ಬೀಚ್​​​ನಲ್ಲಿ ಪತ್ತೆಯಾಗಿದೆ. ಈ ಜಯ ವಿಜಯರ ವಿಗ್ರಹವನ್ನೇ ಕೃಷ್ಣನ ವಿಗ್ರಹವೆಂದು ಭಾವಿಸಿ ತೆಗೆದುಕೊಂಡು ಹೋಗಿದ್ದಾರೆ. ಇದು ಯಾವುದೇ ಪರಂಪರಾಗತ ಪ್ರಾಚೀನ ಶೈಲಿಯ ವಿಗ್ರಹ ಅಲ್ಲ ಎಂದು ಹೇಳಲಾಗಿದೆ.

Exit mobile version