Site icon Ullalavani

ಮಕ್ಕಳಲ್ಲಿ ಸೂಕ್ಷ್ಮ ಪ್ರವೃತ್ತಿಯನ್ನು ಬೆಳೆಸುವ ಮಹತ್ವದ ಕಾರ್ಯಕ್ರಮವೇ ಸಾಹಿತ್ಯೋತ್ಸವ : ಪ್ರೊ. ಚಿನ್ನಪ್ಪ ಗೌಡ

ಉಳ್ಳಾಲ: ಮಕ್ಕಳು ಮಾತನಾಡುವ ಪ್ರತಿಯೊಂದು ಮಾತೂ ಕೇವಲ ಪದಗಳಲ್ಲ, ಆ ಮಾತಿನ ಹಿಂದೆ ಅವರ ಆಂತರಿಕ ಸಂವೇದನೆ, ಅನುಭವ ಮತ್ತು ಮನಸ್ಥಿತಿ ಅಡಗಿರುತ್ತದೆ. ಮಕ್ಕಳಲ್ಲಿ ಸೂಕ್ಷ್ಮ ಪ್ರವೃತ್ತಿಯನ್ನು ಬೆಳೆಸುವ ಮಹತ್ವದ ಕಾರ್ಯಕ್ರಮವೇ ಸಾಹಿತ್ಯೋತ್ಸವ. ಕಳೆದ 25 ವರ್ಷಗಳಲ್ಲಿ ಮಕ್ಕಳ ಪಂಚೇಂದ್ರಿಯಗಳನ್ನು ಹರಿತಗೊಳಿಸುವ ಕಾರ್ಯವನ್ನು ರತ್ನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಿದೆ. ವರ್ಷಕ್ಕೆ ಕೇವಲ ಎರಡು ಬಾರಿ ನಡೆದರೂ ಸಹ, ಇದರ ಪರಿಣಾಮ ಮಕ್ಕಳ ಮನಸ್ಸಿನ ಮೇಲೆ ಆಳವಾಗಿ ಬೀರುತ್ತದೆ ಎಂದು ಜನಪದ ವಿದ್ವಾಂಸ ಹಾಗೂ ಜನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ.ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.


ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ದೇರಳಕಟ್ಟೆ ಗ್ರೀನ್‌ ಗ್ರೌಂಡ್‌ ನ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್‌ ವೇದಿಕೆ, ಡಾ.ವಾಮನ ನಂದಾವರ ಸಭಾಂಗಣದ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್‌ ವೇದಿಕೆಯಲ್ಲಿ ಜರಗಿದ ಕರಾವಳಿ ಕರ್ನಾಟಕದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನ ನಾಡು ನುಡಿ ವೈಭವದ ರತ್ನೋತ್ಸವ ೨೦೨೫ ಅನ್ನು ಉದ್ಘಾಟಿಸಿ ಮಾತನಾಡಿದರು.


ಶಾಲೆಯ ಸಾಂಸ್ಕೃತಿಕ ನೀತಿ ಅತ್ಯಂತ ಮಹತ್ವದ್ದಾಗಿದೆ. ಯಾವ ರೀತಿಯ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತದೆ ಎಂಬುದೇ ಮಕ್ಕಳ ವ್ಯಕ್ತಿತ್ವ, ಸಂವೇದನೆ ಮತ್ತು ಚಿಂತನೆಗಳ ದಿಕ್ಕನ್ನು ನಿರ್ಧರಿಸುತ್ತದೆ. ಇಂದು ಆಂಗ್ಲ ಮಾಧ್ಯಮ ಶಾಲೆಯಲ್ಲಿಯೂ ಸಾಂಸ್ಕೃತಿಕ ಶಿಕ್ಷಣ ದೊರಕುತ್ತಿರುವುದು ಅತ್ಯಂತ ಹರ್ಷಕರ ಸಂಗತಿ. ಇಂದು ಕಿವಿ, ನಾಲಗೆ ಮತ್ತು ಸೂಕ್ಷ್ಮತೆಯನ್ನು ಕ್ರಮೇಣ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿದ್ದೇವೆ. ಕಣ್ಣು ಇದ್ದರೂ ನೋಡಬೇಕಾದುದನ್ನು ನೋಡದಂತೆ, ಕೇಳಬೇಕಾದುದನ್ನು ಕೇಳದಂತೆ ಮಕ್ಕಳು ಬೆಳೆಯುತ್ತಿರುವುದು ಆತಂಕಕಾರಿ. ಏನನ್ನು ನೋಡಬೇಕು, ಏನನ್ನು ಕೇಳಬೇಕು, ಯಾವುದು ಸರಿಯಾದುದು ಎಂಬ ವಿವೇಕ ಮಕ್ಕಳಲ್ಲಿ ಬೆಳೆಸುವುದು ಅತ್ಯವಶ್ಯಕ. ಇಂದು ಮನೆಗಳನ್ನು ದೊಡ್ಡದಾಗಿ ಕಟ್ಟಿದರೂ, ಅಲ್ಲಿ ನಾಲ್ಕು ಪುಸ್ತಕಗಳನ್ನು ಇಡುವ ಪ್ರವೃತ್ತಿಯೇ ಕಡಿಮೆಯಾಗುತ್ತಿರುವುದು ದುರಂತ. ಪೋಷಕರೇ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಕನಿಷ್ಠ ಶಿಕ್ಷಣ ಸಂಸ್ಥೆಗಳಾದರೂ ಆ ಮೌಲ್ಯಗಳನ್ನು ಉತ್ತೇಜಿಸುವ ಕಾರ್ಯ ಕೈಗೊಂಡರೆ, ಅದರ ಪರಿಣಾಮ ದೀರ್ಘಕಾಲೀನ ಹಾಗೂ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷರು ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ ರತ್ನೋತ್ಸವದಂತಹ ನಿರಂತರವಾಗಿ ಸಾಹಿತ್ಯಕ್ಕೆ ಕೊಡುಗೆಯನ್ನು ನೀಡುವ ಕಾರ್ಯಕ್ರಮಗಳನ್ನು ಸಂಘಟಿಸುವುದು ಸುಲಭದ ಕೆಲಸವಲ್ಲ. ಇಂತಹ ಸಾರ್ಥಕ ಮತ್ತು ಸಮಾಜಮುಖಿ ಪ್ರಯತ್ನಗಳ ಹಿಂದೆ ಸಂಘಟಕರ ಅಚಲ ನಿಷ್ಠೆ, ಪರಿಶ್ರಮ ಹಾಗೂ ಸಾಹಿತ್ಯದ ಮೇಲಿನ ಪ್ರೀತಿ ಅಡಗಿದೆ. ಆದ್ದರಿಂದ ಈ ಮಹತ್ವದ ಕಾರ್ಯಕ್ಕೆ ಸಮಾಜದ ಎಲ್ಲ ವರ್ಗಗಳಿಂದ ಸಹಕಾರ, ಪ್ರೋತ್ಸಾಹ ಮತ್ತು ಬೆಂಬಲ ಅಗತ್ಯವಾಗಿದೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಇವರ ಮಾತೃಶ್ರೀಯವರ ಸ್ಮರಣಾರ್ಥವಾಗಿ ನಡೆಯುತ್ತಿರುವ ಈ ಸಂಸ್ಥೆ ಸಾಹಿತ್ಯ, ಸಂಸ್ಕೃತಿ ಹಾಗೂ ಮೌಲ್ಯಾಧಾರಿತ ಚಿಂತನೆಗಳಿಗೆ ಶಾಶ್ವತ ವೇದಿಕೆಯಾಗಲಿ. ಹೊಸ ಲೇಖಕರು, ಕವಿಗಳು ಹಾಗೂ ಚಿಂತಕರಿಗೆ ಪ್ರೇರಣೆಯಾಗುವ ಕೇಂದ್ರವಾಗಿ ಬೆಳೆಯಲಿ. ಇಂತಹ ಕಾರ್ಯಕ್ರಮಗಳ ಮೂಲಕ ಸಾಹಿತ್ಯ ಲೋಕಕ್ಕೆ ಅಮೂಲ್ಯ ರತ್ನಗಳನ್ನು ನೀಡುತ್ತಾ, ಸಂಸ್ಥೆ ಇನ್ನಷ್ಟು ಎತ್ತರಕ್ಕೇರಲಿ ಎಂಬುದು ಎಲ್ಲರ ಹಾರೈಕೆ ಎಂದರು.


ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಸದಾಶಿವ ಉಳ್ಳಾಲ್ ಮಾತನಾಡಿ, ಬಡವರ ಮಕ್ಕಳೂ ಗುಣಮಟ್ಟದ ಶಿಕ್ಷಣ ಪಡೆದು ಸಮಾಜದಲ್ಲಿ ಮುನ್ನಡೆಯಬೇಕು, ವಿಶೇಷವಾಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುವ ಅವಕಾಶ ಅವರಿಗೆ ದೊರಕಬೇಕು ಎಂಬ ಉದಾತ್ತ ಉದ್ದೇಶದೊಂದಿಗೆ ಉಚ್ಚಿಲದ ಭಗವತಿ ಶಾಲೆಯ ಜೊತೆಗೆ ವಿದ್ಯಾರತ್ನ ಶಾಲೆಯನ್ನು ೨೫ ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಸೀಮಿತ ಸೌಲಭ್ಯಗಳು, ಅನೇಕ ಸವಾಲುಗಳ ನಡುವೆಯೂ ಆರಂಭವಾದ ಈ ಶಿಕ್ಷಣ ಸಂಸ್ಥೆಗಳು ಇಂದು ಶಿಸ್ತಿನ ಆಡಳಿತ, ನಿಷ್ಠಾವಂತ ಶಿಕ್ಷಕ ವೃಂದ ಮತ್ತು ಪೋಷಕರ ಸಹಕಾರದೊಂದಿಗೆ ಉತ್ತರೋತ್ತರ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿವೆ. ಇಂದು ಈ ಶಾಲೆಗಳು ಕೇವಲ ಪಠ್ಯಬೋಧನೆಗೆ ಮಾತ್ರ ಸೀಮಿತವಾಗದೆ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಿವೆ. ಶೈಕ್ಷಣಿಕ ಸಾಧನೆ, ಶಿಸ್ತು, ಸಂಸ್ಕಾರ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮೌಲ್ಯಾಧಾರಿತ ಶಿಕ್ಷಣದ ಮೂಲಕ ನೂರಾರು ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರಗಳಾಗಿ ಬೆಳೆದಿವೆ. ಬಡ ಹಾಗೂ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಆಶಾಕಿರಣವಾಗಿರುವ ಈ ಶಾಲೆಗಳು, ಶಿಕ್ಷಣದ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎಂಬುದನ್ನು ಇಂದು ಸ್ಪಷ್ಟವಾಗಿ ಸಾಬೀತುಪಡಿಸುತ್ತಿವೆ ಎಂದರು.


ಸಮ್ಮೇಳನಾಧ್ಯಕ್ಷ ಲೇಖಕ ಡಾ.ನರೇಂದ್ರ ರೈ ದೇರ್ಲ ಮಾತನಾಡಿ ಗೋಡೆಶಾಲೆಯ ಶಿಕ್ಷಣ ಪಡೆಯುವವರಿಗೆ ಲೋಕಶಾಲೆಯ ಶಿಕ್ಷಣ ದೊರಕುವಂತಾಗಲಿ ಆಕಾರಕೇಂದ್ರಿತ, ಅಂಕಕೇಂದ್ರಿತ, ಯಂತ್ರಕೇಂದ್ರಿತ ಶಿಕ್ಷಣ ಇಂದು ಸಂವೇದನಾ ಶೂನ್ಯ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ನಮ್ಮ ನಾಡು, ನುಡಿ ಸಂಸ್ಕ್ರತಿ ಪರಂಪರೆಯನ್ನು ಯನ್ನು ಪರಿಚಯಿಸುವ ಮನದ ಮಾಲಿನ್ಯವನ್ನು ನೀಗುವ ಶಿಕ್ಷಣ ಮಕ್ಕಳಿಗೆ ದೊರಕಲಿ. ಕೇರಳದ ಭಾಷಾಪ್ರೀತಿ ವಿಶೇಷವಾದುದು.ಜಾಗತೀಕರಣ, ನವಮಾಧ್ಯಮ ಅವರನ್ನು ವಿಚಲಿತಗೊಳಿಸಿಲ್ಲ. ನಮಗೆ ಮಾತ್ರ ಯಾಕೆ ಹೀಗೆ? ಎಂದು ಪ್ರಶ್ನಿಸಿದ ಅವರು ಓದುವ ಆಸಕ್ತಿ ಬೆಳೆಸಿ ಮಕ್ಜಳಲ್ಲಿ ಭಾಷಾ ಪ್ರೀತಿಯನ್ನು ಉಂಟು ಮಾಡಬೇಕು ಎಂದರು.
ಸಮ್ಮೇಳನಾಧ್ಯಕ್ಷ ವಿಶ್ರಾಂತ ಪ್ರಾಧ್ಯಾಪಕರು, ಸಾಹಿತಿಗಳು ಡಾ. ನರೇಂದ್ರ ರೈ ದೇರ್ಲ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ರೈ ಕಲ್ಲಿಮಾರು ಅಧ್ಯಕ್ಷರು, ಬಂಟರ ಸಂಘ ಉಳ್ಳಾಲ ವಲಯ ಮೆರವಣಿಗೆಗೆ ಚಾಲನೆ ನೀಡಿದರು. ದೇರಳಕಟ್ಟೆ ರತ್ನ ಎಜ್ಯುಕೇಶನ್ ಟ್ರಸ್ಟ್ ನ ಕೋಶಾಧಿಕಾರಿ ರತ್ನಾವತಿ ಕೆ. ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ,


ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ. ಪಿ. ಶ್ರೀನಾಥ್, ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಅಧ್ಯಕ್ಷ ಡಾ. ಧನಂಜಯ ಕುಂಬಳೆ, ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಕಾರ್ಯದರ್ಶಿ ಸೂಡಿ ಸುರೇಶ್ ಬೆಂಗಳೂರು ಉಪಸ್ಥಿತರಿದ್ದರು.


ಕಾರ್ಯಕ್ರಮದ ಪ್ರಯುಕ್ತ ದೇರಳಕಟ್ಟೆ ಬೆಳ್ಮ ಪಂಚಾಯತ್ ವಠಾರ, ಶ್ರೀ ಅಯ್ಯಪ್ಪ ದೇವಸ್ಥಾನದಿಂದ ಪೂರ್ಣ ಕುಂಭ ಕಲಶ, ಚೆಂಡೆವಾದನ, ಕೊಂಬುಕಹಳೆ, ಕಂಸಾಲೆ, ಹಾಲಕ್ಕಿ, ವೀರಗಾಸೆ, ಹುಲಿವೇಷ, ಪೂಜಾ ಕುಣಿತ, ಬಣ್ಣದ ಕೊಡೆಗಳು ಹಾಗೂ ಸೈಟ್ಸ್-ಗೈಡ್ಸ್ ವಿದ್ಯಾರ್ಥಿಗಳ ಜೊತೆಗೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಅದ್ಧೂರಿಯಾಗಿ ಜರಗಿತು.
ರತ್ನ ಎಜ್ಯುಕೇಷನ್‌ ಟ್ರಸ್ಟ್‌ ಉಪಾಧ್ಯಕ್ಷ ಮೋಹನ್‌ ದಾಸ್‌ ಶೆಟ್ಟಿ ಉಳಿದೊಟ್ಟು, ಕಾರ್ಯದರ್ಶಿ ಸೌಮ್ಯ ಆರ್.‌ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ನಯೀಮಾ ಹಮೀದ್‌, ಶಾಲಾ ವಿದ್ಯಾರ್ಥಿ ನಾಯಕ ಭವಿತ್‌ ಸುವರ್ಣ ಉಪಸ್ಥಿತರಿದ್ದರು.
ನವನೀತ್ ಶೆಟ್ಟಿ ಕದ್ರಿ ನಿರೂಪಿಸಿದರು.

Exit mobile version