Site icon Ullalavani

ಡಿಕೆಶಿ ಮುಖ್ಯಮಂತ್ರಿ ಆಗಲೆಂದು ಸಿಎಂ ತವರು ಜಿಲ್ಲೆಯಲ್ಲೇ ವಿಶೇಷ ಪೂಜೆ!

ಮೈಸೂರು, ನ. 24 ರಾಜ್ಯ ರಾಜಕೀಯದಲ್ಲಿ ಸಿಎಂ ಹುದ್ದೆ ಕುರಿತು ಚರ್ಚೆಗಳು ತೀವ್ರಗೊಂಡಿರುವ ವೇಳೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಹಾರೈಕೆಗಾಗಿ ಮೈಸೂರು ಜಿಲ್ಲೆಯಲ್ಲೇ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಈ ವಿಶೇಷ ಪೂಜೆಯನ್ನು ಶಬರಿಮಲಾ ಯಾತ್ರಿಕರು ನೆರವೇರಿಸಿದ್ದಾರೆ.

ಸುಮಾರು 20ಕ್ಕೂ ಹೆಚ್ಚು ಶಬರಿಮಲಾ ಯಾತ್ರಿಗಳು ಡಿಕೆ ಶಿವಕುಮಾರ್ ಅವರ ಫೋಟೋ ಹಿಡಿದು, ‘‘ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ’’ ಎಂದು ಘೋಷಣೆ ಕೂಗುತ್ತಾ ದೇವರ ಕೃಪೆಯನ್ನು ಬೇಡಿಕೊಂಡರು. ಯಾತ್ರಿಕರು ಕೈಯಲ್ಲಿ ಇಟ್ಟಿದ್ದ ಚಿತ್ರ ಮತ್ತು ಘೋಷಣೆಗಳು ದೇವಾಲಯದ ವಾತಾವರಣದಲ್ಲೇ ರಾಜಕೀಯ ಚರ್ಚೆಗಳನ್ನು ಮರುಜ್ವಲಿಸುತ್ತಿತ್ತು.ಈ ಘಟನೆ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ನಡೆದಿರುವುದು ಮತ್ತಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದೊಳಗೆ ನಾಯಕತ್ವ ಬದಲಾವಣೆ ಬಗ್ಗೆ ಊಹಾಪೋಹಗಳು ಜೋರಾಗಿರುವ ಸಂದರ್ಭದಲ್ಲಿ ನಡೆದಿರುವ ಈ ವಿಶೇಷ ಪೂಜೆ ಗಮನ ಸೆಳೆಯುತ್ತಿದೆ.ಜಿಲ್ಲೆಯಲ್ಲಿನ ರಾಜಕೀಯ ಚರ್ಚೆಗಳ ನಡುವೆ, ಡಿಕೆ ಶಿವಕುಮಾರ್ ಬೆಂಬಲಿಗರ ಈ ಹಾರೈಕೆ ಮತ್ತು ಪ್ರದರ್ಶನ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯ ಯಾವ ದಿಕ್ಕಿಗೆ ತಿರುಗುತ್ತದೆ ಎಂಬುದರ ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ.

Exit mobile version