Site icon Ullalavani

ತಲಪಾಡಿ ಕ್ಷೇತ್ರ ಮಹಾತ್ಮೆ,ತುಳುನಾಡ ದೈವಾರಾಧನೆ ಕೃತಿ‌ ಲೋಕಾರ್ಪಣೆತುಳುನಾಡಿನ ಸಂಸ್ಕೃತಿ,‌ ಆರಾಧನೆ ಮುಂದಿನ ಪೀಳಿಗೆಗೂ ವಿಸ್ತರಿಸಲಿ: ಒಡಿಯೂ‌ರು‌ ಶ್ರೀ


ಕೊಣಾಜೆ: ನಮ್ಮ ತುಳುನಾಡಿನ ಸಂಸ್ಕೃತಿಯು ವಿಭಿನ್ನವಾದುದು ಹಾಗೂ ಶ್ರೇಷ್ಠವಾದುದು. ನಮ್ಮ ತುಳುನಾಡು, ಸಂಸ್ಕೃತಿ , ಆರಾಧನೆ, ಆಚರಣೆಯಂತಹ ಅನೇಕ ಮಹತ್ವದ ಸಂಗತಿಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ತಲಪಾಡಿ ಕ್ಷೇತ್ರ ಮಹಾತ್ಮೆ ಹಾಗೂ ತುಳುನಾಡ ದೈವಾರಾಧನೆ ಕೃತಿಯ ಮೂಲಕ ನಮ್ಮ ನೆಲದ ಇತಿಹಾಸವನ್ನು ದಾಖಲಿಸುವ ಪ್ರಯತ್ನ ನಡೆದಿರುವುದು ಶ್ಲಾಘನೀಯವಾಗಿದೆ ಎಂದು ಶ್ರೀ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.


ಅವರು ಕೊಣಾಜೆ ಕೆಳಗಿನ ಮನೆಯ ಶ್ರೀ ನಾಗಬ್ರಹ್ಮ‌ ಸನ್ನಿಧಿಯಲ್ಲಿ ಗುರುನಿತ್ಯಾನಂದ ಸೇವಾವೃಂದ ಇದರ ವತಿಯಿಂದ ಆಯೋಜಿಸಲಾದ ತಲಪಾಡಿ ಕ್ಷೇತ್ರ ಮಹಾತ್ಮೆ ಹಾಗೂ ತುಳುನಾಡ ದೈವಾರಾಧನೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ತುಳು ಸಂಸ್ಕೃತಿಯ ರಕ್ಷಣೆಗೆ ಹಾಗೂ ತುಳುನಾಡಿಗೆ ನಾವೇನು ಕೊಡುಗೆ ಕೊಡಬಹುದು ಎಂಬ ಚಿಂತನೆಯೊಂದಿಗೆ ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡೋಣ ಎಂದರು.
ಹಿರಿಯರಾದ ಭಾಗಿ ನೀರ್ ದೀಪಿಕಲ್ ತಲಪಾಡಿ ಕ್ಷೇತ್ರ ಮಹಾತ್ಮೆ ಹಾಗೂ ತುಳುನಾಡ ದೈವಾರಾಧನೆ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ವಾಗ್ಮಿ ತಮ್ಮಣ್ಣ ಶೆಟ್ಟಿ ಅವರು ಮಾತನಾಡಿ, ತುಳುನಾಡಿನ ದೈವಾರಾಧನೆಯು ಕೇವಲ 800 ವರ್ಷದಲ್ಲ, ಅದು ಎಷ್ಟೋ‌ ಶತಮಾನಗಳ ಹಿಂದೆಯದ್ದು. ತುಳುನಾಡಿನ ಸೃಷ್ಟಿಕರ್ತ ಬೆಮ್ಮೆರ್. ಇಂದು ದೈವಾರಾಧನೆ ಹಾಗೂ ಇಲ್ಲಿಯ ಆಚರಣೆ, ಆರಾಧನೆ ಗಳಿಗೆ ಮೌಢ್ಯದ ದಾಳಿಯಾಗಿರುವುದನ್ನು‌‌ ಕಾಣಬಹುದು. ಪ್ರಕೃತಿಯ ಮರ ಗಿಡಗಳ‌ ನಡುವೆ ಕುಳಿತ್ತಿದ್ದ ದೈವಗಳನ್ನು ನಾವು ಬೆಳಕಿಲ್ಲದ ಕಟ್ಟಡಗಳಿಗೆ ಕೊಂಡೊಯದ್ದಿದ್ದೇವೆ. ಇಂತಹ ಅನೇಕ ಮೌಢ್ಯಗಳನ್ನು ಇಂತಹ ಪುಸ್ತಕಗಳ ಮೂಲಕ ದೂರಗೊಳಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಲಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ಗಣೇಶ್ ಭಟ್ ಪಂಜಾಳ, ದೇವಿಪುರ ಪವಿತ್ರವಾಣಿ ಕ್ಷೇತ್ರದ ಸುರೇಶ್ ಶಿಥಿಲ್ಲಾಯ, ಕೃತಿಯ ಸಂಪಾದಕ ಕಿಶೋರ್ ಚೌಟ, ಲೇಖಕರಾದ ರಿತೇಶ್ ತಲಪಾಡಿ, ಹಿರಿಯರಾದ ಮಾಲಾಡಿಗುತ್ತುವಿನ ರಾಮ ಪೂಂಜ, ನವೀನ್ ಆಳ್ವ ಪಿಲಿಕೂರು, ಕೆಳಗಿನಮನೆ ನಾಗಬ್ರಹ್ಮ ಕ್ಷೇತ್ರದ ಅಧ್ಯಕ್ಷರಾದ ಸೀತಾರಾಮ ಗಟ್ಟಿ, ಧಾರ್ಮಿಕ ಮುಖಂಡರಾದ‌ ಬಾಬು ಶಾಸ್ತ ಕಿನ್ಯಾ, ಮಂಜುನಾಥ ಭಟ್ ದೇವಿನಗರ,‌ ಸೂರ್ಯನಾರಾಯಣ ಹೊಳ್ಳ ,ಕೊಣಾಜೆ‌ ಪಂಚಾಯತ್ ಅಧ್ಯಕ್ಷರಾದ ಗೀತಾ ದಾಮೋದರ್ ಕುಂದರ್, ಆನಂದ‌ ಬೆಳ್ಚಾಡ ಬೊಳ್ಳೆಕುಮೇರು, ರಾಜಾರಾಂ ರೈ ಕಲ್ಲಿಮಾರ್, ಕೇಶವ ಶೆಟ್ಡಿ ಮುಲಾರಗುತ್ತು, ರಾಜೇಶೆ ಕೆವಿ, ಮೋಹನ್ ದಾಸ್ ಆಳ್ವ ತಿರುವಾಜೆಗುತ್ತು, ಬಾಲಕೃಷ್ಣ ಶೆಟ್ಟಿ, ಸೀತಾರಾಮ ಗಟ್ಡಿ, ಭಾಗೀ ಗಟ್ಟಿ, ಭವಾನಿ ಪೂಜಾರಿ ಬೊಳ್ಳಕುಮೇರು ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ಅಚ್ಯುತಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕ ರಿತೇಶ್ ಅವರು ಪುಸ್ತಕದ ಪರಿಚಯ ಮಾಡಿದರು. ರಚನಾ ಪ್ರಾರ್ಥಿಸಿದರು. ಸುಶ್ಮಿತಾ ಸಾಲಿಯಾನ್ ನಿರೂಪಿಸಿದರು.

Exit mobile version