ಬೆಂಗಳೂರು, ಅ.30:ರಾಜ್ಯದಲ್ಲೀಗ ಸಿಎಂ ಬದಲಾಗ್ತಾರಾ? ಇಲ್ವಾ? ಅನ್ನೋದೇ ದೊಡ್ಡ ಚರ್ಚೆ. ಸಿದ್ದರಾಮಯ್ಯ ಮುಂದುವರೀತಾರೆ ಅನ್ನೋ ವಾದ ಒಂದು ಕಡೆ ಇದ್ರೆ, ಡಿ.ಕೆ.ಶಿವಕುಮಾರ್ ಸಿಎಂ ಆಗೋದು ಪಕ್ಕಾ ಅನ್ನೋದು ಮತ್ತೊಂದು ವಾದ. ಎರಡು ಕಡೆಯ ಬೆಂಬಲಿಗರಲ್ಲಿ ಇಂತಾದ್ದೊಂದು ಭಾವನೆ ಇದೆ. ಈ ಬೆಳವಣಿಗೆಯನ್ನ ಮತ್ತಷ್ಟು ರೋಚಕ ಮಾಡಿರೋದು ಮತ್ತೊಂದು ವಿಷಯ ಅದೇ ದಲಿತ ಸಿಎಂ ಅಸ್ತ್ರ, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ.ಹೆಚ್.ಸಿ.ಮಹದೇವಪ್ಪ ಪದೇ ಪದೇ ಭೇಟಿ ಮಾಡ್ತಿರೋದು ಚರ್ಚೆ ಮಾಡ್ತಿರೋದು ಗೊತ್ತಿರೋ ವಿಚಾರವೇ.
ಅದರ ನಡುವೆ ಆಹಾರ ಮತ್ತು ನಾಗರೀಕ ಸಚಿವ ಕೆ.ಎಚ್.ಮುನಿಯಪ್ಪ ಅವರೇ ಬೇಕಾದ್ರೆ ಸಿಎಂ ಆಗಲಿ ಅಂತಾ ಗೃಹ ಸಚಿವ ಪರಮೇಶ್ವರ್ ಅವರೂ ಹೇಳಿ ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾದ್ರು.
ಈ ಚರ್ಚೆಗಳೆಲ್ಲಾ ಒಂದು ಕಡೆಯಾದ್ರೆ ಇದುವರೆಗೂ ಕಾಂಗ್ರೆಸ್ನಲ್ಲಿ ಯಾವೆಲ್ಲಾ ಸಮುದಾಯದವರು ಮುಖ್ಯಮಂತ್ರಿಗಳಾಗಿದ್ದಾರೆ ಗೊತ್ತಾ?
ಯಾವ್ಯಾವ ಸಮುದಾಯದವರು ಮುಖ್ಯಮಂತ್ರಿಗಳಾಗಿದ್ರು?
1947 – 1952 ಕೆ.ಸಿ.ರೆಡ್ಡಿ ರೆಡ್ಡಿ ಜನಾಂಗ
1952-1956 ಕೆಂಗಲ್ ಹನುಮಂತಯ್ಯ ಒಕ್ಕಲಿಗ
1956 ಕಡಿದಾಳ್ ಮಂಜಪ್ಪ ಒಕ್ಕಲಿಗ
1956 -1958, 1962-1968 ಎಸ್.ನಿಜಲಿಂಗಪ್ಪ ಲಿಂಗಾಯತ
1958-1962 ಬಿ.ಡಿ ಜತ್ತಿ ಲಿಂಗಾಯತ
1968-1971, 1989-1990 ವೀರೇಂದ್ರ ಪಾಟೀಲ್ ಲಿಂಗಾಯತ
1972-1977, 1978-1980 ದೇವರಾಜ್ ಅರಸ್ ಹಿಂದುಳಿದ ವರ್ಗ
1980-1983 ಆರ್.ಗುಂಡೂರಾವ್ ಬ್ರಾಹ್ಮಣ
1990-1992 ಎಸ್.ಬಂಗಾರಪ್ಪ ಈಡಿಗ
1992-1994 ವೀರಪ್ಪ ಮೋಯ್ಲಿ ಸವಿತ ಸಮಾಜ
1999-2004 ಎಸ್.ಎಂ ಕೃಷ್ಣ ಒಕ್ಕಲಿಗ
2004-2006 ಎನ್.ಧರ್ಮಸಿಂಗ್ ರಜಪೂತ
2013-2018 & 2023 ಸಿದ್ದರಾಮಯ್ಯ ಕುರುಬ
1947ರಲ್ಲಿ ಮೊದಲಬಾರಿಗೆ ರೆಡ್ಡಿ ಸಮುದಾಯದ ಕೆ.ಸಿ. ರೆಡ್ಡಿ ಅಂದ್ರೆ ಕೆ.ಚೆಂಗಲ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ರಾಜ್ಯದಲ್ಲಿ ಆಡಳಿತ ನಡೆಸಿದ್ರು. ನಂತರ ಮುಖ್ಯಮಂತ್ರಿಗಳಾಗಿದ್ದು ಕೆಂಗಲ್ ಹನುಮಂತಯ್ಯ ಅವರು ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸ್ತಿದ್ದರು. ಒಕ್ಕಲಿಗ ಸಮುದಾಯಕ್ಕೆ ಸೇರಿದ್ದ ಕಡಿದಾಳ್ ಮಂಜಪ್ಪನವರು ಕೇವಲ 74 ದಿನಗಳಿಗೆ ಮುಖ್ಯಮಂತ್ರಿಯಾಗಿದ್ದರು. ಇವರ ಬಳಿಕ, ಲಿಂಗಾಯತ ಸಮುದಾದಯಿಂದ ಎಸ್.ನಿಜಲಿಂಗಪ್ಪ, ಬಿಡಿ ಜತ್ತಿ ಹಾಗೂ ವಿರೇಂದ್ರ ಪಾಟೀಲ್ ಅವರು ಸಿಎಂ ಹುದ್ದೆಯನ್ನು ನಿರ್ವಹಿಸಿದ್ದಾರೆ, ಅದೇ ರೀತಿ ಬ್ರಾಹ್ಮಣ ಸಮುದಾಯದಿಂದ ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾರೆ. ಇನ್ನೂ ಹಿಂದುಳಿದ ವರ್ಗಗಳ ಜನಪ್ರಿಯ ನಾಯಕ ಎಂದೇ ಖ್ಯಾತರಾಗಿದ್ದ ಈಡಿಗ ಸಮುದಾಯದ ಎಸ್.ಬಂಗಾರಪ್ಪನವರೂ ಕೂಡ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮತ್ತೊಮ್ಮೆ ಒಕ್ಕಲಿಗ ಸಮುದಾಯದಿಂದ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿ ಸಮರ್ಥ ಆಡಳಿತ ನೀಡಿದ್ದರು. ಸವಿತಾ ಸಮಾಜವನ್ನು ಪ್ರತಿನಿಧಿಸಿದ್ದ ಎಸ್.ವೀರಪ್ಪಮೊಯ್ಲಿ, ರಜಪೂತ ಸಮುದಾಯದ ಎನ್.ಧರ್ಮಸಿಂಗ್ ಸಿಎಂ ಗಳಾಗಿದ್ದಾರೆ. ಹಾಲಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದು, ಅವರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಿ ಸಣ್ಣ ಪುಟ್ಟ ಸಮುದಾಯಗಳಿಂದ ಹಿಡಿದು ಪ್ರಬಲ ಸಮುದಾಯದವರೆಗೂ ಅನೇಕರೂ ಕಾಂಗ್ರೆಸ್ ಪಕ್ಷದಿಂದ ಸಿಎಂ ಗಳಾಗಿ ಕಾರ್ಯನಿರ್ವಹಿಸಿದ್ದಾರೆ. ವಿಶೇಷ ಅಂದ್ರೆ ಕಾಂಗ್ರೆಸ್ನ ಮತಬ್ಯಾಂಕ್ ಎಂದೇ ಪರಿಗಣಿಸಲ್ಪಡುವ ದಲಿತ ಸಮುದಾಯದಿಂದ ಇದುವರೆಗೂ ಒಬ್ಬರೂ ಮುಖ್ಯಮಂತ್ರಿಗಳಾಗಿಲ್ಲ.
ಇನ್ನೂ ರಾಜ್ಯದಲ್ಲಿ ಮುಖ್ಯಮಂತ್ರಿ ಗಾದಿಗೆ ಅರ್ಹ ದಲಿತ ಮುಖಂಡರು ಯಾರಾರು ಇದ್ದಾರೆ ಅನ್ನೋದನ್ನ ನೋಡೋದಾದ್ರೆ,
ಮಲ್ಲಿಕಾರ್ಜುನ ಖರ್ಗೆ: ಹಾಲಿ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸುದೀರ್ಘ 5 ದಶಕಗಳಿಗೂ ಹೆಚ್ಚು ಕಾಲ ಪಕ್ಷವನ್ನು ಕಟ್ಟಿದ್ದಾರೆ. 9 ಭಾರಿ ವಿಧಾನಸಭೆ ಪ್ರವೇಶಿಸಿ ದಾಖಲೆ ಮಾಡಿರುವ ಅವರು ಸಹಕಾರ, ಗೃಹ ಸೇರಿದಂತೆ ಮಹತ್ವದ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಉತ್ತಮ ಆಡಳಿತಗಾರ ಎಂಬ ಹೆಸರನ್ನೂ ಗಳಿಸಿದ್ದಾರೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕರಾಗಿ ಸರ್ಕಾರವನ್ನು ಸಮರ್ಥವಾಗಿ ಎದುರಿಸಿದ ಹೆಗ್ಗಳಿಕೆಯೂ ಅವರಿಗಿದೆ.
ಕೆ.ಹೆಚ್. ಮುನಿಯಪ್ಪ; ಕಾಂಗ್ರೆಸ್ ನ ಹಿರಿಯ ನಾಯಕರಾಗಿರುವ ಮುನಿಯಪ್ಪ ಅವರು 7 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವರಾಗಿಯೂ ಸೇವೆಸಲ್ಲಿಸಿರುವ ಅವರು, ಪ್ರಸ್ತುತ ರಾಜ್ಯದಲ್ಲಿ ಆಹಾರ ಹಾಗೂ ನಾಗರೀಕ ಸೇವಾ ಸಚಿವರಾಗಿದ್ದಾರೆ. ಹಿರಿತನ, ಪಕ್ಷನಿಷ್ಠೆ, ಜವಾಬ್ದಾರಿ ನಿರ್ವಹಣೆಯಲ್ಲಿ ಸಮರ್ಥವಾಗಿರುವ ಮುನಿಯಪ್ಪ ಅವರು ಕೂಡ ದಲಿತ ಸಮುದಾಯದಿಂದ ಸಿಎಂ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂಬ ಅಭಿಪ್ರಾಯವಿದೆ.
ಡಾ.ಜಿ.ಪರಮೇಶ್ವರ್: ಸುದೀರ್ಘ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದ ಖ್ಯಾತಿ ಡಾ.ಜಿ.ಪರಮೇಶ್ವರ್ ಅವರು ಹಾಲಿ ಗೃಹ ಸಚಿವರಾಗಿದ್ದಾರೆ. ಉನ್ನತ ಶಿಕ್ಷಣ, ಕೃಷಿ ಸೇರಿದಂತೆ ಹಲವು ಮಹತ್ವದ ಖಾತೆಗಳ ಜೊತೆಗೆ ಉಪ ಮುಖ್ಯ ಮಂತ್ರಿಯಾಗಿಯೂ ಅನುಭವ ಹೊಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಗೆ ಆತ್ಮೀಯರೂ ಆಗಿರುವ ಪರಮೇಶ್ವರ್ ಕಳೆದ 26 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಸತೀಶ್ ಜಾರಕಿಹೊಳಿ: ವಾಲ್ಮೀಕಿ ಸಮುದಾಯ ಪ್ರಬಲ ನಾಯಕರಾಗಿರೋ ಸತೀಶ್ ಜಾರಕಿಹೊಳಿ, 7 ಬಾರಿ ವಿಧಾನಸಭೆಯನ್ನ ಪ್ರವೇಶಿಸಿದ್ದಾರೆ. 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಲೋಕೋಪಯೋಗಿ ಸಚಿವರಾಗಿ ರಾಜ್ಯದಲ್ಲಿ ತಮ್ಮದೇ ಆದ ಅಭಿಮಾನಿಗಳ ಪಡೆ, ಜೊತೆಗೆ ಅಹಿಂದ ಸಮುದಾಯದ ಬೆಂಬಲ ಸತೀಶ್ ಗಿದ್ದು ಸಹಕಾರ ಕ್ಷೇತ್ರ, ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ತಾವಷ್ಟೇ ಅಲ್ಲದೇ ತಮ್ಮ ಪಕ್ಷದ ಅಭ್ಯರ್ಥಿಗಳೂ ಗೆಲ್ಲುವಂತೆ ನೋಡಿಕೊಂಡಿದ್ದು, ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
ಇವರೆಲ್ಲರೂ ದಲಿತ ಸಮುದಾಯದಿಂದ ಮುಖ್ಯಮಂತ್ರಿ ಹುದ್ದೆಗೆ ಅರ್ಹರಾಗಿದ್ದಾರೆ. ಕೇವಲ ಜಾತಿಯ ಹಿನ್ನಲೆಯಷ್ಟೇ ಅಲ್ಲದೇ, ಪಕ್ಷ ನಿಷ್ಠೆ, ಜವಾಬ್ದಾರಿ ನಿರ್ವಹಣೆ ಹಾಗೂ ಸಮರ್ಥ ಆಡಳಿತಗಾರರೆಂದು ನಿರೂಪಿಸಿದ್ದಾರೆ. ಆದರೆ, ಇವೆಲ್ಲ ಲೆಕ್ಕಕ್ಕೆ ಬರುವುದು ದಲಿತರೊಬ್ಬನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಹೈಕಮಾಂಡ್ ಮನಸು ಮಾಡಿದಾಗ ಮಾತ್ರ. ಅಲ್ಲಿವರೆಗೂ ಇವೆಲ್ಲ ಅವರ ವೈಯಕ್ತಿಕ ಸಾಧನೆ ಅಷ್ಟೆ.