Site icon Ullalavani

ಹಾಲಿ ಸ್ಪೀಕರ್ ಯು.ಟಿ.ಖಾದರ್ Vs  ಮಾಜಿ ಸ್ಪೀಕರ್ ನಡುವಿನ ಸಮರ ಜೋರು..!!?

ರಾಜ್ಯ ವಿಧಾನಸಭೆಯ ಹಾಲಿ ಸ್ಪೀಕರ್‌ ಯು.ಟಿ.ಖಾದರ್ ವಿರುದ್ಧ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ನಡೆದ ಪುಸ್ತಕ ಮೇಳದಲ್ಲಿ ಭ್ರಷ್ಟಾಚಾರ ಎಸಗಲಾಗಿದೆ. ಬೆಂಗಳೂರಿನ ಶಾಸಕರ ಭವನದ ರೂಮುಗಳಿಗೆ ಕೇವಲ 11 ಸಾವಿರ ರೂಪಾಯಿ ಸ್ಮಾರ್ಟ್ ಲಾಕ್ ಹಾಕಿದ್ದು, ಅದರ ಮೂರು ಪಟ್ಟು ಬಿಲ್ ಮಾಡಿ ಹಣ ಪಡೆದಿದ್ದಾರೆ. ಅಧಿವೇಶನದ ವೇಳೆ ಶಾಸಕರಿಗೆ ಅಗತ್ಯ ಇಲ್ಲದಿದ್ದರೂ ಊಟ, ತಿಂಡಿ ವ್ಯವಸ್ಥೆ, ರೀಕ್ಲೇನರ್ ಚೇರ್ ವ್ಯವಸ್ಥೆ ಮಾಡಿ ಹಣ ಪೋಲು ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 


ಮಂಗಳೂರು ಕಡೆಯವರಿಗೆ, ತಮ್ಮ ಆಪ್ತರಿಗೆ  ಬಹಳಷ್ಟು ಗುತ್ತಿಗೆಗಳನ್ನು ನೀಡಿ ಸ್ವಜನ ಪಕ್ಷಪಾತ ಎಸಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಎಲ್ಲ ಆರೋಪಗಳಿಗೆ ವಿದೇಶದಿಂದ ಬಂದ ಸ್ಪೀಕರ್ ಯು.ಟಿ. ಖಾದರ್ ಉತ್ತರ ನೀಡಿದ್ದಾರೆ. ಆರೋಪಗಳನ್ನು ನಿರಾಕರಿಸಿದ್ದಾರೆ. ಹಾಲಿ  ಸಂಸದರಾಗಿರುವ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಪತ್ರ ಬರೆದರೇ, ಉತ್ತರ ನೀಡುವುದಾಗಿ ಹೇಳಿದ್ದಾರೆ. 


ಇದರ ಬೆನ್ನಲ್ಲೇ ಈ ಹಿಂದೆ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧವೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.  ಇದು ಈಗ ಹಾಲಿ ಸ್ಪೀಕರ್ Vs  ಮಾಜಿ ಸ್ಪೀಕರ್ ನಡುವಿನ ಸಮರ ಎಂಬಂತಾಗಿದೆ.

 ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ.
  ಈಗಾಗಲೇ   ಸಿಎಂ ಕಚೇರಿಗೆ ವಿಶ್ವೇಶ್ವರ ಹೆಗಡೆ  ಕಾಗೇರಿ ಸ್ಪೀಕರ್ ಆಗಿದ್ದ ಸಮಯದ ಆಕ್ರಮದ ಫೈಲ್  ರವಾನೆಯಾಗಿದೆ. ಕಾಗೇರಿ ಸ್ಪೀಕರ್‌ ಆಗಿದ್ದ ಕಾಲದ ಅಕ್ರಮದ ತನಿಖೆಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ.

ಆರೋಪ-1
ವಿಧಾನಸೌಧದಲ್ಲಿ ವೈಫೈಗೆ  ಸಂಬಂಧಿಸಿದಂತೆ ಖಾಸಗಿ ಕಂಪೆನಿಗೆ 5 ಕೋಟಿ ರೂಪಾಯಿಗೆ ವಿಶ್ವೇಶ್ವರ್ ಹೆಗಡೆ ಕಾಗೇರಿ  ಟೆಂಡರ್ ನೀಡಿದ್ದರು.  ವೈಫೈ  ಅಳವಡಿಕೆ  ಮಾಡುವ ಮೊದಲೇ ಕಂಪೆನಿಗೆ ಟೆಂಡರ್ ನೀಡಿಕೆ.  ಇಲ್ಲಿಯವರಿಗೂ ವೈಫೈ ಸರಿಯಾಗಿ ಬಾರದ ಕುರಿತು ಸಿಎಂಗೆ ಹಲವು ಶಾಸಕರು ದೂರು ಸಲ್ಲಿಸಿದ್ದಾರೆ. 

ಆರೋಪ-2. 
ಶಾಸಕರ ಭವನದಲ್ಲಿ ಶಾಸಕರ ಓಡಾಟಕ್ಕಾಗಿ ಇನ್ನೋವಾ ಕ್ರಿಸ್ಟಾ  ಕಾರ್ ಖರೀದಿಗೆ ಟಾಟಾ ಮೋಟಾರ್ಸ್ ಕಂಪನಿಗೆ  ಗುತ್ತಿಗೆ ನೀಡಲಾಗಿತ್ತು.  ಶಾಸಕರ ಕಂಫರ್ಟ್ ಗಾಗಿ  ಮೊದಲಿನಿಂದಲೂ ಶಾಸಕರ ಭವನ, ವಿಧಾನಸೌಧ, ಶಿಷ್ಟಾಚಾರ ವಿಭಾಗದಿಂದ   ಇನ್ನೋವಾ ಕ್ರಿಸ್ಟಾ ಕಾರ್ ಗಳನ್ನೇ  ಖರೀದಿ ಮಾಡಲಾಗುತ್ತಿತ್ತು. ಆದರೆ ವಿಶ್ವೇಶ್ವರ ಹೆಗಡೆ  ಕಾಗೇರಿ ಸ್ಪೀಕರ್‌ ಆಗಿದ್ದ ಕಾಲದಲ್ಲಿ ಧಾರವಾಡದ ಬಿಜೆಪಿ ಶಾಸಕರ ಒಡೆತನದ ಟಾಟಾ  ಕಂಪನಿಯ ಷೋರೂಮುಗೆ   ನೆಕ್ಸಾನ್ ಕಾರ್  ಖರೀದಿಗೆ ಕೋಟ್ಯಂತರ ರುಪಾಯಿಯ ಟೆಂಡರ್  ನೀಡಲಾಗಿದೆ.  ಆದರೇ, ಶಾಸಕರಾರು ನೆಕ್ಸಾನ್ ಕಾರ್ ಗಳನ್ನೇ ಬಳಸುತ್ತಿಲ್ಲ. ಬಳಕೆಯಾಗದೇ ಇರುವುದರಿಂದ ಇಲ್ಲಿ ಹಗರಣ ನಡೆದಿರುವ ವಾಸನೆ ಬಂದಿದೆ. ಹೀಗಾಗಿ ಇನ್ನೋವಾ ಕ್ರಿಸ್ಟಾ ಕಾರ್ ಬಿಟ್ಟು ನೆಕ್ಸಾನ್ ಕಾರ್ ಖರೀದಿಸಿದ್ದು ಏಕೆ? ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.

ಆರೋಪ-3 
ವಾರ್ತಾ ಇಲಾಖೆಯಿಂದ ಉಚಿತವಾಗಿ ಸರ್ಕಾರಿ ಕಾರ್ಯಕ್ರಮ ಹಾಗೂ ವಿಧಾನ ಮಂಡಲದ ಅಧಿವೇಶನದ ಲೈವ್‌  ಮಾಡುವ ಅವಕಾಶವಿದ್ದರೂ  ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪೀಕರ್ ಆಗಿದ್ದ ಕಾಲದಲ್ಲಿ ಸರ್ಕಾರಿ ಸ್ವಾಮ್ಯದ  ಚಾನೆಲ್ ಒಂದಕ್ಕೆ ವರ್ಷಕ್ಕೆ 3 ಕೋಟಿ ರೂಪಾಯಿ ಪ್ರಸಾರದ ಟೆಂಡರ್ ನೀಡಲಾಗಿದೆ.  ಇದೀಗ  ಈ ಬಗ್ಗೆಯೂ ತನಿಖೆಗೆ ಸರ್ಕಾರ ಚಿಂತನೆ ನಡೆಸಿದೆ. 

ಈ ಭ್ರಷ್ಟಾಚಾರದ  ಆರೋಪಗಳಿಗೆ ಹಾಲಿ ಲೋಕಸಭಾ ಸದಸ್ಯರೂ ಆದ ವಿಶ್ವೇಶ್ವರ ಹೆಗಡೆ ಕಾಗೇರಿ ಏನು ಉತ್ತರ ನೀಡುತ್ತಾರೆ ಎಂಬ ಕುತೂಹಲ ಇದೆ.  ಹಾಲಿ ಮತ್ತು ಮಾಜಿ ಸ್ಪೀಕರ್ ಗಳಿಬ್ಬರೂ ಪರಸ್ಪರರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. 
ಈಗ ನೇರವಾಗಿ ಹಾಲಿ ಸ್ಪೀಕರ್ ಯು.ಟಿ.ಖಾದರ್ , ಮಾಜಿ ಸ್ಪೀಕರ್ ಕಾಗೇರಿ ವಿರುದ್ಧ ಆರೋಪ ಮಾಡಿಲ್ಲ. ಆದರೇ, ರಾಜ್ಯದ ಕಾಂಗ್ರೆಸ್ ಸರ್ಕಾರವು ಮಾಜಿ ಸ್ಪೀಕರ್ ಕಾಗೇರಿ ವಿರುದ್ಧ ತನಿಖೆ ನಡೆಸಲು ಗಂಭೀರ ಚಿಂತನೆ ನಡೆಸಿದೆ. 

Exit mobile version