Site icon Ullalavani

ಖಾಸಗಿ ಬಸ್ಸುಗಳಲ್ಲಿ ಬಾಗಿಲು ಕಡ್ಡಾಯ : ರಾಮಲಿಂಗ ರೆಡ್ಡಿ ಸೂಚನೆ ಉಳ್ಳಾಲಬೈಲ್ ನಿವಾಸಿ ವಿದ್ಯಾರ್ಥಿ ಯಶರಾಜ್ ಪ್ರಕರಣ ಉಲ್ಲೇಖಸಿ 2022 ರಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದ ಉಳ್ಳಾಲವಾಣಿ

ಮಂಗಳೂರು : ಖಾಸಗಿ ಬಸ್‌ಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಓಡಾಡುವ ಬಸ್‌ಗಳಲ್ಲಿ ಬಾಗಿಲು ಕಡ್ಡಾಯವಾಗಿ ಇರುವುದನ್ನು ಖಾತರಿಪಡಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ ಮಲ್ಲಾಡ್ ಅವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದರು.

ಮುಡಿಪುವಿನಲ್ಲಿ ವಾಹನ ಚಾಲನಾ ಪರೀಕ್ಷಾ ಕೇಂದ್ರವನ್ನು ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಗಿಲುಗಳಿಲ್ಲದೇ ರಸ್ತೆಗೆ ಇಳಿಯುವ ಬಸ್‌ಗಳಿಗೆ ಎಫ್‌ಸಿ (ಫಿಟ್‌ನೆಸ್ ಸರ್ಟಿಫಿಕೆಟ್) ನೀಡಬೇಡಿ ಎಂದು ಹೇಳಿದರು. ‘ಇ ಬಸ್‌ಗಳಿಗೆ ಬೇಡಿಕೆ ಸಲ್ಲಿಸಿದ್ದು ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಲಿರುವ ಬಸ್‌ಗಳ ಖರೀದಿಗಾಗಿ ಟೆಂಡರ್ ಕರೆಯಬೇಕಾಗಿದೆ. ಇದಕ್ಕೆ ಕನಿಷ್ಟ ಆರು ತಿಂಗಳ ಸಮಯ ಬೇಕಾದೀತು. ಬಸ್‌ಗಳನ್ನು ಒದಗಿಸಿದರೆ ಮಂಗಳೂರಿಗೂ ಹಂಚಲಾಗುವುದು’ ಎಂದು ಅವರು ತಿಳಿಸಿದರು.

‘ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ನವರು ಹೆಚ್ಚುವರಿ ದರ ಪಡೆಯುವುದನ್ನು ತಡೆಯಲು 2300 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರಸ್ತೆ ಇಳಿಸಲಾಗುವುದು. ಗಣೇಶ ಹಬ್ಬದ ಸಂದರ್ಭದಲ್ಲಿ 1200 ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.

2022 ರ ಸೆ.7 ರಂದು ಮಂಗಳೂರು ಕಾಲೇಜಿಗೆ ತೆರೆಳುತ್ತಿದ್ದ ಉಳ್ಳಾಲ ನಿವಾಸಿ ಯಶ್ ರಾಜ್ ಅನ್ನುವ ವಿದ್ಯಾರ್ಥಿ ಬಾಗಿಲಿನಿಂದ ಹೊರಗೆಸೆಯಲ್ಪಟ್ಟು, ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಕೋಮ ತಲುಪಿ ನಂತರ ಸೆ.13 ರಂದು ಮೃತಪಟ್ಟಿದ್ದರು. ವಿದ್ಯಾರ್ಥಿ ಅಂಗಾಂಗ ದಾನ ನಡೆಸುವ ಮೂಲಕ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದರು. ಈ ಪ್ರಕರಣದ ಬೆನ್ನಲ್ಲೇ ನಂತೂರು ಸಮೀಪ ಕರ್ತವ್ಯ ನಿರತ ನಿರ್ವಾಹಕ ರಸ್ತೆಗೆಸೆಯಲ್ಪಟ್ಟು ಮೃತಪಟ್ಟಿದ್ದರು.

ಈ ಪ್ರಕರಣದ ಬೆನ್ನಲ್ಲೇ ಉಳ್ಳಾಲವಾಣಿ ಸಾವಿನಲ್ಲಿ ಸಾರ್ಥಕತೆ ಮೆರೆದ ವಿದ್ಯಾರ್ಥಿ ಯಶರಾಜ್ ಹೆಸರಲ್ಲಿ ಆದರೂ ಮಂಗಳೂರಿನ ಖಾಸಗಿ ಬಸ್ಸುಗಳಿಗೆ ಬಾಗಿಲು ಕಡ್ಡಾಯಗೊಳಿಸಬೇಕು ಅನ್ನುವ ಮನವಿಯನ್ನು ಅಂದಿನ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇoದ್ರ ಕೈಯಲ್ಲಿ ನೀಡಿತ್ತು. ಆದರೆ ಕೆಲ ದಿನಗಳ ಬಳಿಕ ಕೆಡಿಪಿ ಸಭೆಯಲ್ಲಿ ಕಡ್ಡಾಯಗೊಳಿಸಬೇಕು ಅನ್ನುವ ಹೇಳಿಕೆ ಜಿಲ್ಲಾಧಿಕಾರಿ ನೀಡಿದರೂ ಬಾಗಿಲುಗಳು ಮುಚ್ಚಲೇ ಇಲ್ಲ. ಇದೀಗ ಸಾರಿಗೆ ಸಚಿವರ ಹೇಳಿಕೆ, ಆದೇಶಕ್ಕಾದರೂ ಬಸ್ಸು ಮಾಲೀಕರು ಬೆಲೆ ಕೊಡುವರೇ, ಸಾರಿಗೆ ಅಧಿಕಾರಿಗಳು ಕರ್ತವ್ಯ ಪಾಲಿಸುವರೇ ಅನ್ನುವುದನ್ನು ಕಾದುನೋಡಬೇಕಿದೆ.

Exit mobile version