Site icon Ullalavani

ಸಮಾಜದಲ್ಲಿ ವಿದ್ಯಾರ್ಥಿಗಳನ್ನು ಬಲಿಷ್ಠಗೊಳಿಸುವುದು ಅಗತ್ಯ : ವಿಧಾನಸಭಾಧ್ಯಕ್ಷ ಯು.ಟಿ.ಖಾದರ್

ಉಳ್ಳಾಲ : ಸಮಾಜದಲ್ಲಿ ವಿದ್ಯಾರ್ಥಿಗಳನ್ನು ಬಲಿಷ್ಠಗೊಳಿಸುವುದು ಅಗತ್ಯ, ಶಿಕ್ಷಕ ವರ್ಗ ದಾನಿಗಳ ನೆರವಿನಿಂದ ಶಾಲೆಗೆ ಬೇಕಾದ ವ್ಯವಸ್ಥೆ ಮಾಡಿ ಶಿಕ್ಷಣಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಾಜ ಮತ್ತು ದೇಶಕ್ಕೆ ಕೊಡುವ ಅತ್ಯುತ್ತಮ ಕೊಡುಗೆ‌ ನೀಡಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಬಬ್ಬುಕಟ್ಟೆ ಸರ್ಕಾರಿ ಪ್ರೌಢಶಾಲಾ ಅಂಗಳಕ್ಕೆ ದಾನಿಗಳ ನೆರವಿನಿಂದ ಅಳವಡಿಸಲಾದ ಇಂಟರ್ ಲಾಕ್ ಸಹಿತ ವಿವಿಧ ಕಾಮಗಾರಿಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.


ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯ ಉಳಿವು, ಈ ನಿಟ್ಟಿನಲ್ಲಿ ಎರಡೂ ಶಾಲೆಗಳ ಶಿಕ್ಷಕರು, ಹಳೆವಿದ್ಯಾರ್ಥಿಗಳು ಭೇದವಿಲ್ಲದೆ ಪ್ರಾಥಮಿಕ ಶಾಲೆಯ ಬಗ್ಗೆಯೂ ಮುತುವರ್ಜಿ ವಹಿಸಬೇಕು. ದಾನಿಗಳ ನೆರವು ಪಡೆದು ಶಿಕ್ಷಣಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವ ಮೂಲಕ ಶಿಕ್ಷಕ ವರ್ಗ ಅತ್ಯುತ್ತಮ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.


ದಾನಿಗಳಾದ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ನಿವೃತ್ತ ಶಿಕ್ಷಕಿ ಶಕೀಲಾ ಹಾಗೂ ಸಮಾಜ ಸೇವಕಿ ಸುಹಾಸಿನಿ ಬಬ್ಬುಕಟ್ಟೆ, ಕೆಲಸ ನಿರ್ವಹಿಸಿದ ರೋನಿ ಮತ್ತು ಇಮ್ತಿಯಾಝ್ ಇವರನ್ನು ಸನ್ಮಾನಿಸಲಾಯಿತು. ವಾಲಿಬಾಲ್ ಹೋಬಳಿ ಮಟ್ಟದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಬಾಲಕಿಯರ ತಂಡ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಕುಲಾಲ್ ಅವರನ್ನು ಅಭಿನಂದಿಸಲಾಯಿತು.


ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿವೇಕಾನಂದ ಎಲ್.ಸನಿಲ್, ಉಳ್ಳಾಲ‌ ಮೆಸ್ಕಾಂ ಶಾಖಾಧಿಕಾರಿ ನಿತೇಶ್ ಹೊಸಗದ್ದೆ, ನಿವೃತ್ತ ಶಿಕ್ಷಕಿ ಶಕಿಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯ್ಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಖೈರುನ್ನಿಸಾ, ಮಾಜಿ ಅಧ್ಯಕ್ಷರುಗಳಾದ ಅಬ್ಬಾಸ್ ಪಿಲಾರ್, ಅಬ್ದುಲ್ ರಹಿಮಾನ್, ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶಾರದಾ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಸವಿತಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ದುರ್ಗಲತಾ ಅವರು ಸನ್ಮಾನಿತರ ಹೆಸರು ವಾಚಿಸಿದರು. ಜಯಲಕ್ಷ್ಮಿ ವಂದಿಸಿದರು. ಶಾಂತಾ ಕಾರ್ಯಕ್ರಮ ನಿರೂಪಿಸಿದರು.

Exit mobile version