Site icon Ullalavani

ಉಡುಪಿ : ಮೂವರು ಸ್ನೇಹಿತರಿಂದ ವ್ಯಕ್ತಿಯೋರ್ವ ಹತ್ಯೆ

ಉಡುಪಿ : ವ್ಯಕ್ತಿಯೋರ್ವನನ್ನು ಮೂವರು ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಉಡುಪಿಯ ಪುತ್ತೂರಿನ ಸುಬ್ರಹ್ಮಣ್ಯ ನಗರದ ಲಿಂಗೋಟ್ಟುಗುಡ್ಡೆಯಲ್ಲಿ ಆಗಸ್ಟ್ 12ರಂದು ರಾತ್ರಿ ನಡೆದಿದೆ.

ಮೃತ ವ್ಯಕ್ತಿಯನ್ನು ವಿನಯ್ ದೇವಡಿಗ (35) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದರು.

ಮೃತ ವ್ಯಕ್ತಿ ವಿನಯ್ ದೇವಡಿಗ

ಆರೋಪಿಗಳಾದ ಅಜಿತ್, ಅಕ್ಷೇಂದ್ರ , ಪ್ರದೀಪ್

ಪೊಲೀಸರ ಪ್ರಕಾರ, ಆಗಸ್ಟ್ 12 ರಂದು ವಿನಯ್ ವೈಯಕ್ತಿಕ ಕೆಲಸಕ್ಕಾಗಿ ಉಡುಪಿಗೆ ತೆರಳಿದ್ದು, ಸಂಜೆ 6 ಗಂಟೆಗೆ ಮನೆಗೆ ಹಿಂದಿರುಗಿದ್ದರು. ನಂತರ ಊಟ ಮಾಡಿ ತನ್ನ ಕೋಣೆಯಲ್ಲಿ ಮಲಗಿದ್ದರು. ರಾತ್ರಿ ಸುಮಾರು 11:45 ಕ್ಕೆ ಆರೋಪಿಗಳಾದ ಅಜಿತ್, ಅಕ್ಷೇಂದ್ರ ಮತ್ತು ಪ್ರದೀಪ್ ಎಂಬುವವರು ವಿನಯ್ ಅವರ ಮನೆಗೆ ನುಗ್ಗಿ ಅವನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಬಳಿಕ ವಿನಯ್ ಮಲಗಿದ್ದ ಕೋಣೆಗೆ ನುಗ್ಗಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ವಿನಯ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಹತ್ಯೆಯಾದ ವಿನಯ್ ಆರೋಪಿ ಅಕ್ಷೇಂದ್ರನಿಗೆ ಜೀವನ್ ಎಂಬಾತ ಬೈದಿರುವ ಆಡಿಯೋವನ್ನು ಇತರರಿಗೆ ಶೇರ್ ಮಾಡಿ ವೈರಲ್ ಮಾಡಿರುವುದೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ಹಲ್ಲೆಯ ನಂತರ, ಆರೋಪಿಗಳು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾರೆ. ಉಡುಪಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Exit mobile version