Site icon Ullalavani

ಸುಪ್ರಿಯಾ ಬದುಕಲು ಬೇಕಿದೆ ದಾನಿಗಳ ನೆರವು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕುತ್ತಾರು: ಆಕೆಗಿನ್ನೂ 27ರ ಹರೆಯ. ಇನ್ನೂ ಬಾಳಿ ಬದುಕಬೇಕಾದ ಸುಪ್ರಿಯಾಳ ಇಳಿವಯಸ್ಸಿನಲ್ಲೇ ಲಿವರ್ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆ. ಇದೀಗ ಸಂಪೂರ್ಣ ನಿಷ್ಕ್ರಿಯಗೊಂಡಿರುವ ಲಿವರಿನ ಕಸಿ ಪ್ರಕ್ರಿಯೆಗೆ ಲಕ್ಷಾಂತರ ಹಣ ಬೇಕಾಗಿರುವುದರಿಂದ ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬ ಕಂಗಾಲಾಗಿದೆ. ಅದಕ್ಕಾಗಿ ಮನೆಮಂದಿ ದಾನಿಗಳ ಮೊರೆಹೋಗಿದ್ದಾರೆ.

ಕುಂಬಳೆ ಮಧೂರು ನಿವಾಸಿ ಮೋಹನ್ ಗಟ್ಟಿ ಮತ್ತು ಸುಲೋಚನಾ ದಂಪತಿ ನಾಲ್ವರು ಮಕ್ಕಳಲ್ಲಿ ಸುಪ್ರಿಯಾ ಕಿರಿಯವಳು. ಬಿ.ಕಾಂ ಪ್ರಥಮ ವರ್ಷ ಮುಗಿಸಿದ ಸುಪ್ರಿಯಾ ಕಾಲೇಜಿನ ಶುಲ್ಕ ಪಾವತಿಸಲು ರಜೆಯಲ್ಲಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಸದಾ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡಿದ್ದ ಸುಪ್ರಿಯಾಳಿಗೆ ಲಿವರ್ ಸಂಬಂಧಿ ತೊಂದರೆ ಇರುವುದರ ವಿಚಾರ ವೈದ್ಯರಿಂದ ಗೊತ್ತಾಗಿತ್ತು. ಆ ಬಳಿಕ ಸುಪ್ರಿಯಾ ಕಾಲೇಜನ್ನು ಮೊಟಕುಗೊಳಿಸಿದ್ದಳು. ಮನೆಮಂದಿ ದುಡಿದ ಹಣವನ್ನೆಲ್ಲಾ ಸುಪ್ರಿಯಾಳ ಚಿಕಿತ್ಸೆಗೆ ವ್ಯಯಿಸಲು ಆರಂಭಿಸಿದರು. ಆದರೆ ಲಿವರ್ ತೊಂದರೆ ತೀರಾ ಉಲ್ಬಣಿಸಿ, ಇದೀಗ ನಿಷ್ಕ್ರಿಯಗೊಂಡು ಹೊಟ್ಟೆಯಲ್ಲಿ ನೀರು ತುಂಬಲು ಆರಂಭವಾಗಿದೆ. ವೈದ್ಯರು ಲಿವರ್ ಕಸಿ ಮಾಡಿದಲ್ಲಿ ಸುಪ್ರಿಯಾಳನ್ನು ಬದುಕಿಸಬಹುದು ಅಂದಿದ್ದು, ಅದಕ್ಕಾಗಿ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಮಾತುಕತೆಯನ್ನು ಕುಟುಂಬ ನಡೆಸಿದೆ. ಕಸಿ ಪ್ರಕ್ರಿಯೆಗೆ ರೂ.45 ಲಕ್ಷ ಖರ್ಚಾಗುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದೆ.

ಸುಪ್ರಿಯಾ 10 ವರ್ಷದವಳಿದ್ದಾಗಿನಿಂದ ಹೊಟ್ಟೆ ನೋವು ಎಂದು ಚಿಕಿತ್ಸೆ ನೀಡುತ್ತಾ ಬಂದಿದ್ದೆವು. ಕಳೆದ ಒಂದೂವರೆ ವರ್ಷದಿಂದ ಹೊಟ್ಟೆನೋವು ಜಾಸ್ತಿಯಾದಾಗ ನಗರದ ಹೈಲ್ಯಾಂಡ್ ಮತ್ತು ಎಸ್ ಸಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸುಮಾರು 10 ಲಕ್ಷ.ರೂ ಖರ್ಚು ಮಾಡಿದ್ದೇವೆ. ಬಳಿಕ ಹೊಟ್ಟೆಯಿಂದ ನೀರು ತೆಗೆಯಲು ಮತ್ತು ಔಷಧಿಗೆಂದು ವಾರಕ್ಕೆ 15,000 ದಿಂದ 20,000 ರೂ ಖರ್ಚು ಮಾಡುತ್ತಲೇ ಬಂದಿದ್ದೇವೆ. ಇದೀಗ ಶೀಘ್ರ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಲಿವರ್ ಕಸಿ ಪ್ರಕ್ರಿಯೆ ನಡೆಸಬೇಕೆನ್ನುವ ವೈದ್ಯರ ಹೇಳಿರುವಂತೆ ಅಲ್ಲಿಗೆ ಕರೆದೊಯ್ಯಬೇಕಿದೆ. ಅಲ್ಲಿ ಸಹೋದರ ಮತ್ತು ಸಹೋದರಿಗೆ ಶಸ್ತ್ರಚಿಕಿತ್ಸೆ ನಡೆಸಿದ ನಂತರವೂ 6 ತಿಂಗಳ ಕಾಲ ಆಸ್ಪತ್ರೆಯಲ್ಲಿ ಉಳಿದುಕೊಳ್ಳಬೇಕಿದೆ ಎಂದು ಸುಪ್ರಿಯಾಳ ತಾಯಿ ಸುಲೋಚನಾ ಹೇಳಿದ್ದಾರೆ.

ಸಹೋದರನಿಂದ ದಾನ:

ಸಹೋದರಿಯ ಲಿವರ್ ಕಸಿ ಪ್ರಕ್ರಿಯೆಗೆ ಸಹೋದರ ಮಧುಸೂದನ್ ತನ್ನ ಲಿವರನ್ನು ದಾನ ಮಾಡುವುದಾಗಿ ತಿಳಿಸಿ, ಅದಕ್ಕಾಗಿ ಆಸ್ಪತ್ರೆಗಳಲ್ಲಿ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಆದರೆ ಶಸ್ತ್ರಚಿಕಿತ್ಸೆಗೆ ತಗಲುವ ರೂ.45 ಲಕ್ಷ ಹಣವನ್ನು ಒಂದುಗೂಡಿಸಲು ಇನ್ನೂ ಸಾಧ್ಯವಾಗಲಿಲ್ಲ. ವೈದ್ಯರು ಶೀಘ್ರವೇ ಶಸ್ತ್ರಕ್ರಿಯೆ ನಡೆಸಬೇಕಿದೆ ಎಂದು ಸೂಚಿಸಿದ್ದರೂ, ಹಣದ ಅಡಚಣೆಯಿಂದಾಗಿ ಪ್ರಕ್ರಿಯೆ ವಿಳಂಬವಾಗಿದೆ. ಹೊಟ್ಟೆ ಊದುವುದರಿಂದ ಅತ್ತ ಕುಳಿತುಕೊಳ್ಳಲು ಸಾಧ್ಯವಾಗದೆ ಸುಪ್ರಿಯಾ ಕಣ್ಣೀರಿಡುತ್ತಾ ಹಾಸಿಗೆಯಲ್ಲಿ ಮಲಗಿದಾಗ ಇಡೀ ಕುಟುಂಬವೇ ಆಕೆಯ ಜತೆ ಕಣ್ಣೀರು ಹಾಕುತ್ತಾ ದಿನ ದೂಡುತ್ತಿದೆ.

ಐಎಎಸ್ ಕಲಿಯುವವನಿದ್ದ :

ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದರೂ ಸುಪ್ರಿಯಾಳ ಸಹೋದರ ಮಧು ಬುದ್ಧಿವಂತ. ಮುಂಡೋಳಿ ಸಮೀಪ ಚರ್ಮುರಿ ಅಂಗಡಿ ನಡೆಸುತ್ತಿದ್ದ ಇವರಿಗೆ ಐಎಎಸ್ ಪರೀಕ್ಷೆ ಬರೆಯುವ ಆಸೆಯಿತ್ತು. ಅದಕ್ಕೆಂದೇ ಐಎಎಸ್ ಪರೀಕ್ಷೆ ಎದುರಿಸುವ ಪುಸ್ತಕಗಳನ್ನು ಸಂಗ್ರಹಿಸಿಟ್ಟು ಓದುವ ಹವ್ಯಾಸವನ್ನು ಹೊಂದಿದ್ದರು. ಅದೇ ಆಸಕ್ತಿಯಿಂದ ಬೆಂಗಳೂರಿಗೆ ವೃತ್ತಿ ನಿಮಿತ್ತ ತೆರಳಿ ಅಲ್ಲಿ ಐಎಎಸ್ ಪೂರ್ವತಯಾರಿ ತರಬೇತಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಕಿರಿಯ ಸಹೋದರಿಯ ವಿಚಾರ ತಿಳಿದು ಊರಿಗೆ ಮರಳಿರುವ ಮಧು ತರಬೇತಿಗಳನ್ನು ಅರ್ಧಕ್ಕೆ ಬಿಟ್ಟು ಇಲ್ಲಿಯೇ ಕೆಲಸಗಳನ್ನು ನಡೆಸುತ್ತಾ ಸಹೋದರಿಯ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸುತ್ತಲೇ ಇದ್ದಾರೆ. ಸಹೋದರಿಯನ್ನು ಹೇಗಾದರೂ ಮಾಡಿ ಉಳಿಸಬೇಕು ಅನ್ನುವ ಇಚ್ಛೆಯಿಂದ ರಾತ್ರಿ-ಹಗಲೆನ್ನದೆ ದುಡಿದು ತನ್ನ ಅಂಗವನ್ನು ದಾನ ಮಾಡಲು ಹೊರಟಿದ್ದಾರೆ. ಸದ್ಯ ಸುಪ್ರಿಯಾ ತನ್ನ ಕುತ್ತಾರು ಮುಂಡೋಳಿಯ ಅಜ್ಜಿ ಮನೆಯಲ್ಲಿ ಇದ್ದು, ಮಂಗಳೂರಿಗೆ ಚಿಕಿತ್ಸೆಗೆ ಕರೆದೊಯ್ಯಲಾಗುತ್ತಿದೆ. ಭವಿಷ್ಯದಲ್ಲಿ ಕನಸುಗಳನ್ನು ಕಂಡು ಇನ್ನೂ ಬಾಳಿ ಬದುಕಬೇಕಾದ ಹದಿಹರೆಯದ ಸುಪ್ರಿಯಾಳಿಗೆ ದಾನ ಮಾಡಲು ಇಚ್ಛಿಸುವವರು.

ಬ್ಯಾಂಕ್ ಖಾತೆಯ ವಿವರ:
ಯೂನಿಯನ್ ಬ್ಯಾಂಕ್
ದೇರಳಕಟ್ಟೆ ಶಾಖೆ
ಸುಪ್ರೀಯಾ.ಎಂ
ಖಾತೆ ನಂ: 574702010005311
ಐಎಫ್‍ಎಸ್‍ಸಿ ಸಂಖ್ಯೆ : ಯುಬಿಐಯನ್ 0557471

ವಿಳಾಸ :
ಸುಪ್ರಿಯಾ
ಕ್ಯಾ/ಆ ನಾರಾಯಣ ಗಟ್ಟಿ ಮುಂಡೋಳಿ
ಮುಂಡೋಳಿ ಹೌಸ್
ಕುತ್ತಾರುಪದವು
ಸೋಮೇಶ್ವರ ಗ್ರಾಮ
ಮುನ್ನೂರು ಅಂಚೆ
ಮಂಗಳೂರು-575017
ಸಹೋದರ ಮಧುಸೂದನ್: 7760719850

 

Exit mobile version