
ಸೋಮೇಶ್ವರ: ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವ ಕಾಮಗಾರಿಯಿಂದಾಗಿ ರಸ್ತೆಯಿಡೀ ಅವ್ಯವಸ್ಥೆಯಿಂದ ಕೂಡಿದೆ. ಪುರಸಭೆಯ ವ್ಯಾಪ್ತಿಯುದ್ದಕ್ಕೂ ಜನಸಾಮಾನ್ಯರು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಆರಂಭವಾಗುವ ಮುನ್ನ ರಸ್ತೆ ದುರಸ್ತಿ ನಡೆಸಿ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ತಿಳಿಸಿದ್ದಾರೆ.
ಸೋಮೇಶ್ವರ ಪುರಸಭೆಯಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯು ಪುರಸಭಾ ಅಧ್ಯಕ್ಷೆ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಮೃತ್ 2.0 ಪೈಪ್ ಲೈನ್ ಕಾಮಗಾರಿಯು ಸಮರ್ಪಕ ನಿರ್ವಹಣೆಯಿಲ್ಲದೆ ಅವ್ಯವಸ್ಥೆಗಳಿಂದ ಕೂಡಿದ್ದು,ಕಾಮಗಾರಿಯಿಂದ ಈಗಾಗಲೇ ರಸ್ತೆ ,ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿ,ದಿನ ನಿತ್ಯಲೂ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದ್ದು ಮಳೆಗಾಲ ಆರಂಭದ ಮೊದಲು ಅವ್ಯವಸ್ಥೆಗಳನ್ನ ಸರಿಪಡಿಸಿ,ಕಾಮಗಾರಿಯನ್ನ ಸಮರ್ಪಕವಾಗಿ ನಿರ್ವಹಣೆ ನಡೆಸುವಂತೆ ಸೋಮೇಶ್ವರ ಪುರಸಭಾ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ಅವರು ಕಾಮಗಾರಿ ಮೇಲ್ವಿಚಾರಕರಿಗೆ ತಾಕೀತು ಮಾಡಿದ್ದಾರೆ.
ಪುರಸಭಾ ವ್ಯಾಪ್ತಿಯ ಕುಂಪಲ ಸೇರಿದಂತೆ ಹಲವೆಡೆ ಅಮೃತ್ 2.0 ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲಾ ಕಡೆಯಲ್ಲೂ ಅರೆಬರೆ ,ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ. ಕೆಲಸ ನಡೆಯದಿದ್ದರೂ ವಿನಾಕಾರಣ ರಸ್ತೆ ಸಂಪರ್ಕಗಳನ್ನು ಕಡಿತಗೊಳಿಸುವುದರಿಂದ ಜನಸಾಮಾನ್ಯರ ಬಾಯಲ್ಲಿ ನಾವು ಬೈಗಳನ್ನ ತಿನ್ನ ಬೇಕಾದ ಪರಿಸ್ಥಿತಿ ಎದುರಾಗಿದೆ.ಈ ಬಗ್ಗೆ ಕಾಮಗಾರಿಯ ಮೇಲ್ವಿಚಾರಕರಲ್ಲಿ ವಿಚಾರಿಸೋಣ ಎಂದು ಫೋನ್ ಕರೆ ಮಾಡಿದರೆ ಅವರು ನಮ್ಮ ಕರೆಗಳನ್ನೇ ಸ್ವೀಕರಿಸೋದಿಲ್ಲವೆಂದು ಪುರಸಭಾ ಸದಸ್ಯೆ ಸ್ವಪ್ನ ಶೆಟ್ಟಿ ಅವರು ಸಭೆಯಲ್ಲಿ ದೂರಿದರು. ಸಮಸ್ಯೆಯನ್ನ್ನು ಗಂಭೀರವಾಗಿ ಪರಿಗಣಿಸಿದ ಪುರಸಭಾ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ಅವರು ಅಮೃತ್ 2.0 ನ ಮೇಲ್ವಿಚಾರಕರಾದ ಸಫ್ವಾನ್ ಅವರನ್ನು ಉದ್ದೇಶಿಸಿ ಮಳೆಗಾಲ ಆರಂಭವಾಗುವ ಮೊದಲು ಪೈಪ್ ಲೈನ್ ಕಾಮಗಾರಿಯ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಬೇಕು. ಪುರಸಭಾ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿನ ನೀರಿನ ಪೈಪ್ ಲೈನ್ ವ್ಯವಸ್ಥೆ ಸರಿಪಡಿಸಬೇಕು.ಕಾಮಗಾರಿಯಿಂದ ಆಗಿರುವ ಹಾನಿಗೆ ಸಮರ್ಪಕ ದುರಸ್ಥಿ ಕಾಮಗಾರಿಯನ್ನು ಮಾಡಿಕೊಡಬೇಕು. ಈಗಾಗಲೇ ಕೆಲವೆಡೆ ಮಾಡಿರುವ ದುರಸ್ಥಿ ಕಾಮಗಾರಿಗಳು ಕೆಟ್ಟು ಹೋಗಿದ್ದು ಅದನ್ನು ಮತ್ತೆ ಸರಿಪಡಿಸಿಕೊಡಬೇಕು.ಬಹು ಮುಖ್ಯವಾಗಿ ಜನಪ್ರತಿನಿಧಿಗಳ ಕರೆಗಳಿಗೆ ತಕ್ಷಣ ಸ್ಫಂದಿಸಬೇಕೆAದು ತಾಕೀತು ಮಾಡಿದರು.
ವಿಪಕ್ಷದ ಹಿರಿಯ ನಾಮ ನಿರ್ದೇಶಿತ ಸದಸ್ಯರಾದ ಸತೀಶ್ ಉಳ್ಳಾಲ್ ಮಾತನಾಡಿ ಪೈಪ್ ಲೈನ್ ಕಾಮಗಾರಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮೇಲ್ವಿಚಾರಕರಲ್ಲಿ ತಿಳಿಸಿ ಏನು ಪ್ರಯೋಜನ.ಅವರಿಗೆ ಎಷ್ಟು ತಾಕೀತು ಮಾಡಿದರೂ ಮತ್ತೆ ಅದೇ ಪರಿಸ್ಥಿತಿ ಮುಂದುವರೆಯುತ್ತದೆ. ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಮೃತ 2.0 ಯೋಜನೆಯ ಬೆಂಗಳೂರಿನ ಮುಖ್ಯ ಅಭಿಯಂತರರಿಗೆ ಪುರಸಭೆಯ ಮುಖೇನ ದೂರು ಕೊಡುವಂತೆ ಸಭೆಯಲ್ಲಿ ಸಲಹೆ ನೀಡಿದರು.
ಸೋಮೇಶ್ವರ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ ಪರ್ಯತ್ತೂರು,ಮುಖ್ಯಾಧಿಕಾರಿ ಮತ್ತಡಿ ಉಪಸ್ಥಿತರಿದ್ದರು.
ಸಭೆಯಲ್ಲಿ ಕೌನ್ಸಿಲರ್ ಗಳಾದ ಅಮೀನಾ ಬಶೀರ್, ಯಶವಂತ, ಸ್ವಪ್ನಾ ಶೆಟ್ಟಿ, ಪುರುಷೋತ್ತಮ್ ಶೆಟ್ಟಿ, ಜಯ ಪೂಜಾರಿ, ಮಾಲತಿ ನಾಯ್ಕ್, ಮೋಹನ್ ಶೆಟ್ಟಿ ಕುಂಪಲ, ಪರ್ವೀನ್, ಮನೋಓಜ್ ಕುಮಾರ್, ಹರಿಶ್ಚಂದ್ರ, ಸುಗಂಧಿ, ದೀಪಕ್ ಅಂಚನ್ ಪಿಲಾರ್, ಅಮೀತಾ, ಸೋನಾ ಸುಭಾಷಿಣಿ, ಅನಿಲ್, ಶ್ರೀಲತಾ ದಿನೇಶ್ ಗಟ್ಟಿ, ಅಬ್ದುಲ್ ಸಲಾಂ, ರಮ್ಲತ್, ತಾಹಿರಾ, ಜಯಶ್ರೀ ಉಪೇಂದ್ರ ಉಚ್ಚಿಲ್ ಉಪಸ್ಥಿತರಿದ್ದರು.
**ಭಾಗ್ಯಲಕ್ಷ್ಮೀ ಯೋಜನೆ ಫಲಾನುಭವಿಗಳ ಸಮಸ್ಯೆ ಪರಿಹರಿಸಿ;
ಪುರಸಭಾ ಸದಸ್ಯರಾದ ಹರೀಶ್ ಕುಂಪಲ ಮಾತನಾಡಿ ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳು ಸರಕಾರದಿಂದ ಸಿಗುವ ದುಡ್ಡನ್ನ ಪಡೆಯಲು ಅಧಿಕಾರಿಗಳು ವ್ಯವಸ್ಥಿತವಾದ ಕ್ರಮಗಳನ್ನ ಕೈಗೊಳ್ಳಬೇಕು.ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಹದಿನೆಂಟು ವರುಷ ತುಂಬಿದಾಗ ವಿದ್ಯಾರ್ಥಿಗಳ ಮೂಲ ಹೆಸರುಗಳು ಕಡ್ಡಾಯವಾಗಿ ಮೂರು ಹೆಸರುಗಳಾಗಿ ಬದಲಾಗಿರುತ್ತದೆ.ಇದರಿಂದ ಭಾಗ್ಯಲಕ್ಷ್ಮಿ ಫಲಾನುಭವಿ ವಿದ್ಯಾರ್ಥಿನಿಯರು ತಮ್ಮ ದುಡ್ಡನ್ನ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ.ಇಂತಹ ಗೊಂದಲಗಳನ್ನ ಸರಿಪಡಿಸಲು ಜನಸಾಮಾನ್ಯರು ನೇರ ಸರಕಾರದ ಬಳಿ ತೆರಳಲು ಸಾಧ್ಯವಿಲ್ಲ.ಯೋಜನೆಯ ಫಲಾನುಭವಿ ವಿದ್ಯಾರ್ಥಿನಿಯರಿಗೆ ಅಫಿದವಿತ್ ಮಾಡಿ ಕೊಡುವ ವ್ಯವಸ್ಥೆಯನ್ನ ಅಧಿಕಾರಿಗಳೇ ಮಾಡಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿಣಿಯಲ್ಲಿ ಹರೀಶ್ ಆಗ್ರಹಿಸಿದರು.ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಸರಕಾರಿ ಆರೋಗ್ಯ ಕೇಂದ್ರವನ್ನ ಆರಂಭಿಸುವAತೆ ಹರೀಶ್ ಅವರು ಆರೋಗ್ಯಾಧಿಕಾರಿಗಳ ಗಮನಸೆಳೆದರು.
**ಸರಕಾರಿ ಬಾವಿಗಳ ಪುನಶ್ಚೇತನಕ್ಕೆ ಆಗ್ರಹ;
ಪುರಸಭಾ ಸದಸ್ಯರಾದ ಮನೋಜ್ ಕಟ್ಟೆಮನೆ ಮಾತನಾಡಿ ಪುರಸಭಾ ವ್ಯಾಪ್ತಿಯ ಪಿಲಾರು ಪಲ್ಲ ಮತ್ತು ಬಾರ್ದೆಯಲ್ಲಿರುವ ಸರಕಾರಿ ಬಾವಿಗಳಿಗೆ ಪುನಶ್ಚೇತನ ನೀಡುವಂತೆ ಆಗ್ರಹಿಸಿದರು.ನೂತನ ಪುರಸಭೆ ಆಡಳಿತವು ಅಸ್ಥಿತ್ವಕ್ಕೆ ಬಂದ ನಂತರದ ಪ್ರಥಮ ಸಾಮಾನ್ಯ ಸಭೆಯಲ್ಲೇ ಈ ಬಗ್ಗೆ ನಾನು ಪಸ್ತಾಪಿಸಿದ್ದೆ.ಪಿಲಾರು ಪಲ್ಲದ ಸರಕಾರಿ ಬಾವಿಯಲ್ಲಿ ಯಥೇಚ್ಛ ನೀರಿನ ಸೆಲೆ ಇದೆ.ಆದರೆ ಅಧಿಕಾರಿಗಳ ನಿರ್ಲಕ್ಷತನದಿಂದ ಬಾವಿಯು ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ.ಸುಡು ಬೇಸಿಗೆಯಲ್ಲಿ ಈ ಬಾವಿಯ ನೀರು ಜನರ ಉಪಯೋಗಕ್ಕೆ ಬರಬೇಕಾದರೆ ಶೀಘ್ರವೇ ಅದರ ಪುನಶ್ಚೇತನ ಕಾಮಗಾರಿ ಕೈಗೊಳ್ಳುವಂತೆ ಪುರಸಭೆ ಅಭಿಯಂತರರಾದ ಶ್ರೀಧರ್ ಅವರನ್ನ ಆಗ್ರಹಿಸಿದರು.ಅಲ್ಲದೆ ನಾಮ ನಿರ್ದೇಶಿತ ಸದಸ್ಯರಾದ ಶ್ರೀಧರ ಆಳ್ವ ಅವರ ತೋಟದಲ್ಲಿ ಸಾಕಷ್ಟು ನೀರಿರುವ ಬೃಹತ್ ಗಾತ್ರದ ಕೆರೆ ಒಂದಿದ್ದು,ಇದನ್ನೂ ಪುರಸಭೆ ವತಿಯಿಂದ ಪುನಶ್ಚೇತನಗೊಳಿಸಿ ನೀರಿನ ಅಭಾವವಿರುವ ಸಂದರ್ಭದಲ್ಲಿ ಬಳಸಬಹುದೆಂದು ಸಲಹೆ ನೀಡಿದರು.