Site icon Ullalavani

ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರುಗಳ ವಿರುದ್ಧ ಪೊಲೀಸ್‌ ಠಾಣೆಗಳಲ್ಲಿ ಎಸ್‌ ಡಿಪಿಐನಿಂದ ದೂರು : ಮೊಹಮ್ಮದ್‌ ಶಾಫಿ

ಉಳ್ಳಾಲ: ದಿಗಂತ್‌ ನಾಪತ್ತೆ ಪ್ರಕರಣದಲ್ಲಿ ಜಿಲ್ಲೆಯ ವಾತಾವರಣವನ್ನು ಕೆಡಿಸಲು ಯತ್ನಿಸಿದ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲು ಯತ್ನಿಸಿದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಬಂಟ್ವಾಳ ಹಾಗೂ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಎಸ್‌ ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ದೂರು ದಾಖಲಿಸುತ್ತಿದ್ದು, ರಾಜ್ಯ ಸರಕಾರವೂ ಕಠಿಣ ಕಾಯಿದೆಗಳಡಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಎಸ್‌ ಡಿಪಿಐ ಫರಂಗಿಪೇಟೆ ಬ್ಲಾಕ್‌ ಕಾರ್ಯದರ್ಶಿ, ಪುದು ಗ್ರಾಮ ಪಂಚಾಯತ್‌ ಸದಸ್ಯ ಮೊಹಮ್ಮದ್‌ ಶಾಫಿ ಹೇಳಿದರು.

ಅಮ್ಮೆಮ್ಮಾರ್‌ ದಿಗಂತ್‌ ನಾಪತ್ತೆ ಪ್ರಕರಣದಲ್ಲಿ ಸಂಘಪರಿವಾರ ಹಾಗೂ ಬಿಜೆಪಿ ಮುಖಂಡರು , ಶಾಸಕರ ವಿರುದ್ಧ ರಾಜ್ಯ ಸರಕಾರ ಹಾಗೂ ಕೊರಗಜ್ಜನ ಕಡೆ ನಮ್ಮ ನಡೆ ಪ್ರಕರಣದಲ್ಲಿ ಚಕ್ರವರ್ತಿ ಸೂಲಿಬೆಲೆ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿರುವ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ನಡೆಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಪುದು ಗ್ರಾಮ ವ್ಯಾಪ್ತಿಯ ಅಮ್ಮೆಮ್ಮಾರ್‌ ಎಂಬಲ್ಲಿ ಬಾಲಕ ದಿಗಂತ್‌ ನಾಪತ್ತೆ ಪ್ರಕರಣದಲ್ಲಿ ಸಂಘಪರಿವಾರ ಪ್ರೇರಿತ ಮುಸ್ಲಿಂ ವರ್ಗದ ಮೇಲೆ ಪ್ರಚೋದನಾಕಾರಿ ದಾಳಿಯನ್ನು ನಡೆಸಲಾಗಿದೆ.
ದಿಗಂತ್‌ ಕಾಣೆಯಾದ ಅಂದು ರಾತ್ರಿಯೇ ಅಮ್ಮೆಮ್ಮಾರ್‌ ಜನತೆಗೆ ಮಾಹಿತಿ ಸಿಕ್ಕಿತ್ತು. ಸಿಕ್ಕ ತಕ್ಷಣವೇ ರಾತ್ರಿ ೩ ರ ಹೊತ್ತಿಗೂ ಊರಿನ ಮುಸಲ್ಮಾನರು ಸೇರಿಕೊಂಡು ಹುಡುಕಾಟದಲ್ಲಿ ಭಾಗಿಯಾದರೂ ಸುಳಿವು ಸಿಕ್ಕಿರಲಿಲ್ಲ. ಅಂತಹದ್ದೆಲ್ಲಾ ವಿಚಾರಗಳ ನಡುವೆ ಊರೊಳಗಿನ ಒಗ್ಗಟ್ಟನ್ನು ಮುರಿಯಲು ಹೊರಗಿನಿಂದ ಬಂದ ಸಂಘ ಪ್ರೇರಿತ ಶಕ್ತಿಗಳು
ಅಮ್ಮೆಮಾರ್‌ ಪ್ರದೇಶದ ಬಹುತೇಕ ಮುಸ್ಲಿಮರು ಗಾಂಜಾ ವ್ಯಸನಿಗಳು, ಗೀತಾ ಎಂಬ ಮಹಿಳೆಯೂ ನಡೆದುಕೊಂಡು ಮಹಿಳೆಯರು ನಡೆದುಕೊಂಡು ಹೋಗಲು ಸಾಧ್ಯವಿಲ್ಲ ಅನ್ನುವ ಆರೋಪವನ್ನು ಮಾಡಿದ್ದಾರೆ. ಆದರೆ ಗೀತಾ ಅವರು ಈವೆರಗೆ ಸ್ಥಳೀಯ ಪೊಲೀಸ್‌ ಠಾಣೆಗೆ ಯಾಕೆ ದೂರು ಕೊಟ್ಟಿಲ್ಲ. ಪ್ರಕರಣಗಳನ್ನು ಮುಚ್ಚಿಡುವ ಉದ್ದೇಶವಾದರೂ ಏನು? ಇದು ಅಮ್ಮೆಮ್ಮಾರ್‌ ಊರಿನ ಮಹಿಳೆಯರಿಗೆ ಮಾಡಿದ ಅಪಮಾನವಾಗಿದೆ. ೧-೩ -೨೦೨೪ ರಂಝಾನ್‌ ವ್ಯಾಪಾರ ಇರುವ ಸಂದರ್ಭದಲ್ಲೇ ಬಂದ್‌ ಗೆ ಕರೆ ಕೊಡುತ್ತಾರೆ, ಆದರೂ ಊರಿನ ಬಾಲಕನಿಗಾಗಿ ಸ್ಥಳೀಯ ಮುಸ್ಲಿಂ ವ್ಯಾಪಾರಿಗಳು ಬಂದ್‌ ಗೆ ಬೆಂಬಲ ಸೂಚಿಸಿ ವ್ಯಾಪಾರವನ್ನು ಬಂದ್‌ ಮಾಡಿದ್ದಾರೆ. ಸ್ಥಳೀಯ ಎಲ್ಲಾ ಮುಸ್ಲಿಮರು ಒಗ್ಗಟ್ಟಿನಲ್ಲಿದ್ದರೆ. ಹೊರಗಿನ ಶಕ್ತಿಗಳು ಉದ್ರೇಕಕಾರಿ ಮಾತುಗಳನ್ನಾಡುತ್ತಿದ್ದಾರೆ. ಶಾಸಕರು ಸಹ ಪೊಲೀಸ್‌ ಇಲಾಖೆಗೆ ಸವಾಲು ಎಂಬಂತೆ ಮಾತನಾಡುತ್ತಾರೆ. ಅಂತಹ ಶಾಸಕರು ಮತ್ತು ಸಂಸದರ ವಿರುದ್ಧ ದ.ಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು.
ಸ್ಪೀಕರ್‌ ಯು.ಟಿ.ಖಾದರ್‌ ವಿಧಾನಸಭಾ ಕಲಾಪದಲ್ಲಿ ಉದ್ರೇಕಕಾರಿ ಮಾತುಗಳನ್ನಾಡಿದ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳಬೇಕು, ಕಲಾಪದಿಂದ ಬಹಿಷ್ಕರಿಸಬೇಕು. ಸ್ಪಷ್ಟನೆ ಕೇಳಿ ಬಳಿಕ ಕಲಾಪದಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಅಶ್ರಫ್‌ ಕಲಾಯಿ ಕೊಲೆ ಆರೋಪಿ ಭರತ್‌ ಕುಮ್ಡೇಲು ಊರಿನ ಬಗ್ಗೆ ಮಾತನಾಡಿ, ಹಿಂದೂ ಮನೆಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ ಅನ್ನುವ ಹೇಳಿಕೆ ನೀಡಿದ್ದಾನೆ.
ಕುಮ್ಡೇಲಿನಲ್ಲಿದ್ದ ಎಂಟು ಮುಸಲ್ಮಾನರ ಮನೆಗಳಲ್ಲಿ ಸದ್ಯ ಇರುವುದು ಒಂದು ಮನೆಯಷ್ಟೇ. ಕಷ್ಟಕಾಲಗಳಲ್ಲಿ ಅಮ್ಮೆಮಾರ್‌ ಊರಿನಲ್ಲಿ ಪ್ರತೀ ಹಿಂದೂ ಮನೆಗಳಿಗೆ ಭುಜಕ್ಕೆ ಭುಜ ಕೊಟ್ಟು ಸಹಕರಿಸುತ್ತಿರುವುದು ಮುಸಲ್ಮಾನರು, ಮನೆ ದುರಸ್ತಿಗಳು, ಕಷ್ಟಕಾಲದಲ್ಲಿ ಜತೆಯಾಗಿದ್ದು, ಅಂತಹ ವಾತಾವರಣವನ್ನು ಹಾಳು ಮಾಡಲು ಯತ್ನಿಸುತ್ತಿರುವುದನ್ನು ತೀಕ್ಷ್ಣವಾಗಿ ಖಂಡಿಸುತ್ತೇವೆ. ದಿಗಂತ್‌ ಪತ್ತೆಯಾದ ನಂತರದ ತನಿಖೆಯಲ್ಲಿ ಆತನಲ್ಲಿ ಮೂರು ಮೊಬೈಲ್‌ ಇದೆ, ಹಲವು ಚಪ್ಪಿಲಗಳು, ಬೇಕಾದಷ್ಟು ಡ್ರೆಸ್‌ ಗಳಿವೆ ಅನ್ನುವುದು ತಿಳಿದುಬಂದಿದೆ. ಪ್ರಕರಣದಲ್ಲಿ ಸತ್ಯಾಸತ್ಯತೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಬಹಿರಂಗವಾಗಿ ಸಾರ್ವಜನಿಕರಿಗೆ ತಿಳಿಸಬೇಕು. ಪ್ರಚೋದನಾತ್ಮಕ ಮಾತುಗಳನ್ನಾಡುತ್ತಾರೆ ಇತರೆ ಜಾತಿಯ ಮಹಿಳೆಯರನ್ನು ಎತ್ತಿಹಾಕಿಕೊಂಡು ಹೋಗಲು ಅನ್ನುತ್ತಾರೆ,. ಇವರು ಸಮಾಜಕ್ಕೆ ಕೊಡುವ ಸಂದೇಶವಾದರೂ ಏನು? ಮಾರ್ಗದರ್ಶನವಾದರೂ ಏನು? ಇಂತಹ ನೀಚ ಮನಸ್ಥಿತಿಯಿಂದ ಸೌಜನ್ಯನಂತಹ ಬಡ ಹೆಣ್ಮಕ್ಕಳು ಬದುಕಲು ಕಷ್ಟವಾಗಿದೆ.

ಅಡ್ಯಾರ್‌ ಗ್ರಾಮ ಪಂಚಾಯತ್‌ ಅಧ್ಯಕ್ಷರು ಯಾಸೀನ್‌ ಅರ್ಕುಳ ಮಾತನಾಡಿ, ಎಲ್ಲಾ ಸಮುದಾಯದವರು ಗೌರವಿಸುವ ಕೊರಗಜ್ಜನ ಸನ್ನಿಧಿ, ಪವಿತ್ರವಾದ ಕ್ಷೇತ್ರ. ಸಮುದಾಯ, ಸಂಸ್ಕೃತಿಯ ನಾಯಕ, ಅಸಮಾನತೆಯ ವಿರುದ್ಧ ಹೋರಾಡಿದ ಕೊರಗಜ್ಜ, ಅಂತಹ ಸಾನಿಧ್ಯದಲ್ಲಿ ಕೊಳಕು ಮನಸ್ಥಿತಿಯಲ್ಲಿ ಮಾತನಾಡುವ ಕೆಲಸವಾಗಿದೆ. ಶ್ರದ್ಧಾ ಕೇಂದ್ರಕ್ಕೆ ಕಳಂಕ, ಅವಮಾನ ಉಂಟು ಮಾಡಿರುವುದನ್ನು ಖಂಡಿಸುತ್ತೇವೆ. ಅಂತಹ ಮನಸ್ಥಿತಿಯವರನ್ನು ವೇದಿಕೆಗೆ ಹತ್ತಿಸಬಾರದು ಎಂದು ಆಡಳಿತ ಮಂಡಳಿಗೆ ವಿನಂತಿ ಮಾಡುತ್ತೇವೆ. ಲೋಕಸಭೆ ಚುನಾವಣೆ ಮೊದಲು ಮೋದಿ ಬಗ್ಗೆ ಪುಂಗಿ ಊದುತ್ತಾ ಇದ್ದವರು, ಅತಂತ್ರ ಲೋಕಸಭೆ ಬಳಿಕ ಕಾಣುತ್ತಿರಲಿಲ್ಲ. ಇದೀಗ ಹಳೇ ಚಾಳಿಯನ್ನು ಮುಂದುವರಿಸುತ್ತಿದ್ದಾರೆ. ಆರ್‌ ಟಿಐ ಕಾರ್ಯಕರ್ತ, ದೇವಸ್ಥಾನದ ವಿಚಾರಕ್ಕಾಗಿ ನಡೆದ ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಆರೋಪಿ ನರೇಶ್‌ ಶೆಣೈ ಬಂಧನವಾಗಿ ಬಿಡುಗಡೆ ಮಾಡುವ ಸಂದರ್ಭ ಸೂಲಿಬೆಲೆ ಹೂಹಾರ ಹಾಕಿ ಸ್ವಾಗತ ಮಾಡುತ್ತಾರೆ. ಕೊಲೆಗಡುಕರ ಜೊತೆಗಿರುವ ವ್ಯಕ್ತಿ ಹಿಂದೂ ಧರ್ಮದ ಮಾರ್ಗದರ್ಶನ, ಬೋಧನೆ ನಡೆಸಲು ಯಾವ ನೈತಿಕತೆಯಿದೆ? ಸಂಘ ಪರಿವಾರದ ನಾಯಕರಾಗಲಿ, ಬೆಂಬಲಿತ ಜನಪ್ರತಿನಿಧಿಗಳ ಫೇಸ್‌ ಬುಕ್‌ ಗಳಲ್ಲಿ ಸಮಾಜದ ಅಭಿವೃದ್ಧಿ, ಮೂಲಭೂತ ಸಮಸ್ಯೆಯಾಗಲಿ, ಜನರ ಸಂಕಷ್ಟಕ್ಕೆ ಮಿಡಿಯುವ ಯಾವುದೇ ವಿಚಾರಗಳು ಕಾಣುವುದಿಲ್ಲ. ಹಿಂದೂ ಮುಸ್ಲಿಂ ವಿಚಾರದಲ್ಲಿ ಮಾತ್ರ ಮಾತನಾಡಲಾಗುತ್ತಿದೆ. ಬುದ್ಧಿವಂತ ಸಮಾಜ ಅರ್ಥೈಸಬೇಕಿದೆ. ಕೊರಗಜ್ಜನ ಕಡೆ ನಮ್ಮ ನಡಿಗೆ ವಾತಾವರಣ ಕೆಡಿಸುವಂತಹದ್ದು, ಧಾರ್ಮಿಕ ಕೇಂದ್ರಗಳಿಗೆ ಅಪಮಾನ ಮಾಡುವುದು ಖಂಡಿಸುವಂತಹದ್ದು, ಜಿಲ್ಲೆ ಅಭಿವೃದ್ಧಿಯಲ್ಲಿ ಮುಂದುವರಿಯಬೇಕಿತ್ತು, ಜಿಲ್ಲೆ ಬಹಳ ಹಿಂದೆಯುಳಿದಿದೆ. ಸ್ಮಾರ್ಟ್‌ ಸಿಟಿ ಅಭಿವೃದ್ಧಿಯಾಗಿಲ್ಲ, ಫುಟ್‌ ಪಾತ್ ಗಳೇ ಇಲ್ಲ. ಸುರತ್ಕಲ್‌ ಮಾರುಕಟ್ಟೆ ಈಗಲೂ ಶಿಥಿಲಾವಸ್ಥೆಯಲ್ಲಿದೆ. ಕ್ಷೇತ್ರದ ಶಾಸಕರು ತಕ್ಷಣವೇ ಮುಖ್ಯಮಂತ್ರಿಗಳಿಗೆ ಸೂಚಿಸಿ , ದಿಗಂತ್‌ ಪ್ರಕರಣ ಹಾಗೂ ಕೊರಗಜ್ಜನ ನಡಿಗೆಯಲ್ಲಿ ಪ್ರಚೋದನಾತ್ಮಕ ಮಾತುಗಳನ್ನಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಅನ್ನುವ ಸೂಚನೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನೀಡುವಂತೆ ನೋಡಬೇಕಿದೆ. ಎಸ್‌ ಡಿಪಿಐ ಎಂದಿಗೂ ಸಂಯಮ, ನೆಮ್ಮದಿ, ಸಾಮರಸ್ಯವನ್ನು ಬಯಸುತ್ತದೆ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡುವುದಿಲ್ಲ. ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಮಂಗಳೂರು ೭ ಗಂಟೆ ಆಗುತ್ತಿದ್ದಂತೆ ನಿರ್ಜನವಾಗುತ್ತಿದೆ ಅನ್ನುತ್ತಾರೆ. ಅದರ ನಡುವೆ ಬಿಜೆಪಿ ಜನಪ್ರತಿನಿಧಿಗಳು ಪ್ರಚೋದನೆಗೆ ಕುಮ್ಮಕ್ಕು ನೀಡಿರುವುದು ಡಿಕೆಶಿಯವರ ಮುಖಕ್ಕೆ ಮಂಗಳಾರತಿ ಮಾಡಿದಂತಾಗಿದೆ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಸಂಜೆ ೫ ಗಂಟೆಗೆ ದ.ಕ ಜಿಲ್ಲೆ ಬಂದ್‌ ಆಗುವುದರಲ್ಲಿ ಸಂಶಯವಿಲ್ಲ. ತುಳುನಾಡಿನ ಜನತೆಗೆ ಉದ್ಯೋಗ ಕೊಡಬೇಕು, ಹೊಸ ಕಂಪೆನಿಗಳಿಗಾಗಿ ಹೋರಾಟ ನಡೆಯಬೇಕಿದೆ, ಡ್ರಗ್ಸ್ ಮಾಫಿಯಾ ವಿರುದ್ಧ ಮಾತನಾಡುವವರಿಲ್ಲ. ಪ್ರಜ್ಞಾವಂತ ದ.ಕ ಜಿಲ್ಲೆಯ ಜನತೆ ಮಾತನಾಡಬೇಕಿದೆ ಎಂದರು.

ಈ ಸಂದರ್ಭ ಕ್ಷೇತ್ರ ಎಸ್‌ ಡಿಪಿಐ ಅಧ್ಯಕ್ಷ ಬಶೀರ್‌ ಎಸ್. ಎಂ, ಉಪಾಧ್ಯಕ್ಷ , ಪುದು ಗ್ರಾ. ಪಂ ಸದಸ್ಯ ನಝೀರ್‌ ಫರಂಗಿಪೇಟೆ, , ಸದಸ್ಯ ಇಮ್ತಿಯಾಝ್‌ ಕೋಟೆಪುರ , ಪುದು ಗ್ರಾಮ ಸಮಿತಿ ಅಧ್ಯಕ್ಷ ಬಶೀರ್‌ ಫರಂಗಿಫೇಟೆ ಉಪಸ್ಥಿತರಿದ್ದರು.

Exit mobile version