Site icon Ullalavani

ಸರಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವುದು ನಮ್ಮೆಲ್ಲರ ಕರ್ತವ್ಯ – ಪ್ರವೀಣ ಕುಮಾರಿ ರೈ

ಮಂಗಳೂರು: ಪಿ ಎಂ ಪೋಷಣ್ – ಮಧ್ಯಾಹ್ನ ಉಪಹಾರ ಯೋಜನೆಯು ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಸರಕಾರದ ಬಹಳ ಮುಖ್ಯ ಯೋಜನೆಗಳಲ್ಲಿ ಒಂದಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಅದೆಷ್ಟೋ ಮಕ್ಕಳ ಹಸಿವನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವುಗಳನ್ನು ಬಹಳ ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ಅನುಷ್ಠಾನ ಮಾಡುವಲ್ಲಿ ಶಿಕ್ಷಕರ ಮತ್ತು ಅಧಿಕಾರಿ ವರ್ಗದವರ ಪಾತ್ರ ಹಿರಿದು. ಈ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿ, ಎಲ್ಲಾ ದಾಖಲೆಗಳನ್ನು ಅತ್ಯುತ್ತಮ ವಾಗಿ ನಿರ್ವಹಿಸಿ ಕೊಂಡು ಬರುತ್ತಿರುವ ಎಲ್ಲಾ ಶಿಕ್ಷಕರುಗಳಿಗೆ ಅಭಿನಂದನೆಗಳು ಎಂದು ಮಂಗಳೂರು ತಾಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರು ಪ್ರವೀಣ ಕುಮಾರಿ ರೈ ಅವರು ತಿಳಿಸಿದರು.

ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘ ಮಂಗಳೂರು ದಕ್ಷಿಣ ವಲಯದ ವತಿಯಿಂದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಭಾಂಗಣದಲ್ಲಿ ಹಮ್ಮಿ ಕೊಂಡ ಪಿ ಎಂ ಪೋಷಣ್ ಯೋಜನೆಯ ಯಶಸ್ವಿ ಅನುಷ್ಠಾನ ಮತ್ತು ಅಭಿನಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಆರ್ ಈಶ್ವರ್ ಅವರು ವಹಿಸಿ ಶೈಕ್ಷಣಿಕ ರಂಗದಲ್ಲಿ ಸರಕಾರದ ಯಾವುದೇ ಯೋಜನೆಗಳನ್ನು ತಳ ಮಟ್ಟದಲ್ಲಿ ಯಶಸ್ವಿಯಾಗಿ ಸಂಘಟನೆ ಮಾಡಿದಾಗ ಸರಕಾರಿ ಶಾಲೆಗಳು ಉನ್ನತ ಮಟ್ಟದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅದೆಷ್ಟೋ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ರೂ ಎಲ್ಲಾ ಯೋಜನೆ ಗಳನ್ನು ಶಿಸ್ತು ಬದ್ಧವಾಗಿ ಕಾರ್ಯ ರೂಪಕ್ಕೆ ತರುತ್ತಿರುವುದು ಅಭಿನಂದನೀಯ ಎಂದರು.

ಇದೇ ಸಂದರ್ಭದಲ್ಲಿ ಏಳನೇ ವೇತನ ಶ್ರೇಣಿಯಂತೆ ಪರಿಷ್ಕರಣೆ ಯಾಗಿರುವ ವೇತನವನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ಎಲ್ಲಾ ಶಾಲೆಗಳಿಗೆ ನಿಗದಿತ ಸಮಯದಲ್ಲೇ ಸಿಗುವಂತೆ ಮಾಡಿರುವುದು ಮಾತ್ರವಲ್ಲದೇ ಶಿಕ್ಷಕ ಸ್ನೇಹಿ ಅದೆಷ್ಟೋ ತರಬೇತಿಗಳು ಹಾಗೂ ವ್ಯವಸ್ಥೆಗಳಿಗೆ ಪೂರಕವಾಗಿ ಮಾರ್ಗದರ್ಶನ ನೀಡುತ್ತಾ ಬಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಆರ್ ಈಶ್ವರ್ ಅವರನ್ನು ಸನ್ಮಾನಿಸಲಾಯಿತು.
ಹಾಗೂ ಕಚೇರಿ ಅಧಿಕಾರಿಗಳಾದ ಸಂಧ್ಯಾ, ಮಹಮ್ಮದ್ ರೌಫ್, ಕಿರಣ್, ಚೇತನ್, ಸವಿತಾ ಬಜಾಲ್,ಮೊಹಮ್ಮದ್ ಫಾಝಿಲ್ ಉಳ್ಳಾಲ , ಸುನೀತ ಹಾಗೂ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ತ್ಯಾಗಮ್ ಹರೇಕಳ ಮುಂತಾದವರನ್ನು ಸನ್ಮಾನಿಸಲಾಯಿತು.ಹಾಗೂ ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಕೊಡಲ್ಪಟ್ಟ ಗುರುತಿನ ಚೀಟಿಯನ್ನು ಶಿಕ್ಷಕರುಗಳಿಗೆ ಹಸ್ತಾಂತರ ಮಾಡಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ತಾಲೂಕು ಅಕ್ಷರ ದಾಸೋಹ ಕಚೇರಿಯ ಸಹಾಯಕ ನಿರ್ದೇಶಕರಾದ ವಿಷ್ಣು ಪ್ರಸಾದ್ ಅವರು ಮಾಹಿತಿಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷರು ಲಿಲ್ಲಿ ಪಾಯ್ಸ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಮೋಹನ್ ಶಿರ್ಲಾಲ್, ಸಂಘದ ಉಪಾಧ್ಯಕ್ಷರು ರಾಘನಾಥ ಭಟ್, ರಾಧಾಕೃಷ್ಣ ರೈ, ತಿಪ್ಪೋಜಿ ರಾವ್ ಮುಂತಾದವರು ವೇದಿಕೆಯಲ್ಲಿ ಇದ್ದರು. ಅನುದಾನಿತಾ ಶಾಲಾ ಕಾಲೇಜು ನೌಕರರ ಸಂಘ ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷರು ಕೆ ಎಂ ಕೆ ಮಂಜನಾಡಿ ಪ್ರಸ್ತಾವಿಕ ಮಾತುಗಳನ್ನು ಆಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ತ್ಯಾಗಮ್ ಹರೇಕಳ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷರು ಗುರುಮೂರ್ತಿ ವಂದಿಸಿದರು. ಭಾರತ್ ಪ್ರೌಢಶಾಲೆ ಉಳ್ಳಾಲ ಮುಖ್ಯ ಶಿಕ್ಷಕರು ವಿನಯ ಕುಮಾರಿ ವೈ ಕಾರ್ಯಕ್ರಮ ನಿರೂಪಿಸಿದರು. ಗ್ಲೋರಿಯ , ಭವ್ಯ, ರೋನಾಲ್ಡ್ ಪೌಲ್, ಲಾನ್ಸಿ ಸಿಕ್ವೆರ, ಅರುಣ್ ಪ್ರಸಾದ್ ರೈ, ಮೋಹನ್ ದಾಸ್ ರೈ, ಪ್ಲಾವಿಯ ಪಾಯ್ಸ್ ಮುಂತಾದವರು ಸಹಕರಿಸಿದರು.

Exit mobile version