Site icon Ullalavani

ಅ.26 ರಂದು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶಿಶು ಗ್ಯಾಸ್ಟ್ರೋಂಟರೋಲಜಿಯ ನಿರಂತರ ವೈದ್ಯಕೀಯ ಶಿಕ್ಷಣ ಕಾರ‍್ಯಗಾರ- 2024

ಉಳ್ಳಾಲ: ನಾಟೆಕಲ್ ಕಣಚೂರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶಿಶು ಚಿಕಿತ್ಸಾ ವಿಭಾಗವು ಶಿಶು ಗ್ಯಾಸ್ಟ್ರೋಂಟರೋಲಜಿಯ ನಿರಂತರ ವೈದ್ಯಕೀಯ ಶಿಕ್ಷಣ ಕರ‍್ಯಗಾರ- 2024 ಕರಾವಳಿ ಶಿಶು ಗ್ಯಾಸ್ಟ್ರೋಂಟರೋಲಜಿಯ ಪ್ರಸ್ತುತ ಸ್ಥಿತಿಯ ಕುರಿತು ಒಂದು ದಿನದ ಕಾರ್ಯಗಾರವನ್ನು ಅ.26 ರ ಶನಿವಾರ ಕಣಚೂರು ವೈದ್ಯಕೀಯ ಕಾಲೇಜಿನ ಮೂರನೇ ಮಹಡಿಯ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಕಣಚೂರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ತಜ್ಞ ಹಾಗೂ ನವಜಾತ ಶಿಶು ಗ್ಯಾಸ್ಟ್ರೋಎಂಟರೋಲಜಿಸ್ಟ್ ಡಾ. ಗೌತಮ್ ಪೈ ತಿಳಿಸಿದ್ದಾರೆ.


ಗುರುವಾರ ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿ ಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಅವರು ಈ ಕಾರ್ಯಕ್ರಮದ ನೇತೃತ್ವವನ್ನು ಕಣಚೂರು ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ರಾದ ಡಾ. ಯು.ಕೆ. ಮೋನು ಮತ್ತು ನಿರ್ದೇಶಕರಾದ ಅಬ್ದುರಹಿಮಾನ್ ವಹಿಸಲಿದ್ದಾರೆ ಎಂದರು.
ಕರ‍್ಯಗಾರದಲ್ಲಿ ಮಕ್ಕಳ ಯಕೃತ್ ಕುರಿತಾದ ವಿವಿಧ ರೀತಿಯ ಕಾಯಿಲೆಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಚರ್ಚಿಸಲಾಗುತ್ತಿದ್ದು, ಇದರಲ್ಲಿ ಶಿಶು ಗ್ಯಾಸ್ಟ್ರೋಂಟರೋಲಜಿಯ ಕಡೆಗೆ ವೈದ್ಯಕೀಯ ಕ್ಷೇತ್ರದಲ್ಲಿರುವ ನಿರ್ಲಕ್ಷ್ಯತೆಯನ್ನು ಪರಿಹರಿಸುವ ಪ್ರಯತ್ನವನ್ನು ಈ ಕಾರ್ಯಗಾರದ ಮೂಲಕ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಪ್ರಮುಖ ವೈದ್ಯರನ್ನು ಭಾಗವಹಿಸಲಿದ್ದು ಕ್ಯಾಲಿಕಟ್‌ನ ಡಾ. ರಿಯಾಜ್ ಚೆನ್ನೈನ ಡಾ. ಸೋಮಶೇಖರ್, ಎಜೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಬಿ.ಎಸ್. ಪ್ರಸಾದ್ ,ಕಣಚೂರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಗೌತಮ್ ಪೈ ಮತ್ತು ಡಾ. ವಿಜಯ್ ಮಹಾಂತೇಶ್ ಮತ್ತು ಬೆಂಗಳೂರು ಅಪೋಲೊ ಆಸ್ಪತ್ರೆಯ ಡಾ. ಸಂದೀಪ್ ಸತ್ಸಂಗಿ ಸೇರಿಕೊಂಡು ಅಂತರಾಜ್ಯದ ಸಂಪನ್ಮೂಲ ವ್ಯಕ್ತಿ ಗಳು ಭಾಗವಹಿಸಿ ಮಾಹಿತಿ ನೀಡಲಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರುಗಳಿಗೆ ವಿಶೇಷ ಮಹತ್ವದ ಕಾರ್ಯಗಾರವಾಗಿದ್ದು, ಶಿಶುಗಳಲ್ಲಿ ಹೆಪಟೈಟಿಸ್, ಯಕೃತ್ತಿನ ರೋಗಗಳು, ಶಿಶುಗಳಲ್ಲಿ ವಾಂತಿ, ಬ್ಲಾಕ್ ಆದ ಯಕೃತ್ ಮಾರ್ಗ, ಮತ್ತು ಲಿವರ್ ಟ್ರಾನ್ಸ್ಪ್ಲಾಂಟೇಶನ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ತಿಳಿಸಲಾಗುತ್ತದೆ.
ಕಣಚೂರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ| ಓನಿಲ್ ಫೆರ್ನಾಂಡಿಸ್, ಮಕ್ಕಳ ತಜ್ಞ ಡಾ.ಸಂಶಾದ್ ಎ.ಖಾನ್,  ಸಹಾಯಕ  ಪ್ರಾಧ್ಯಾಪಕ ರಾದ ಡಾ ನಜಾಹ್ ಅಬ್ದರ‍್ರೆಹೆಮಾನ್,
ಸಹಾಯಕ ಪ್ರಾಧ್ಯಾಪಕರಾದ ಡಾ. ಅತುಲ್ ಉಪಸ್ಥಿತರಿದ್ದರು.

ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ
ಮಕ್ಕಳಲ್ಲಿ ಹೆಪಟೈಟಸ್-ಎ ಸೋಂಕು ವ್ಯಾಪಕ
ನಗರೀಕರಣದ ಪ್ರಭಾವದಿಂದ ಮಕ್ಕಳಲ್ಲಿ ಹೆಪಟೈಟಸ್ -ಎ ವೈರಾಣು ವ್ಯಾಪಕವಾಗಿ ಹರಡುತ್ತಿದೆ. ಒಂದು ಕಾಲದಲ್ಲಿ ಇದ್ದಂತಹ ಟೈಫಾಯ್ಡ್ ಇದೀಗ ಮತ್ತೆ ವ್ಯಾಪಿಸುತ್ತಿದೆ. ಸಮರ್ಪಕವಾಗಿ ಚರಂಡಿ ವ್ಯವಸ್ಥೆಗಳು ಇಲ್ಲದೇ ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ. ಅದನ್ನೇ ಮಕ್ಕಳು ಹೆಚ್ಚಾಗಿ ಸೇವಿಸುವುದರಿಂದ ಎಳೆಯ ಹರೆಯದಲ್ಲೇ ಯಕೃತ್ ಗೆ ಹೆಪಟೈಟಸ್ ಸೋಂಕು ತಗಲುತ್ತಿದೆ. ಇದರಿಂದ ಎಲ್ಲಾ ಮಕ್ಕಳಿಗೂ ತೊಂದರೆಯಿಲ್ಲ. ಆದರೆ ಗಂಭೀರವಾಗಿ ಬಾಧಿಸಿದಲ್ಲಿ ಯಕೃತ್ ಹಾಳಾಗಿ, ಟ್ರಾನ್ಸ್ ಪ್ಲಾಂಟೇಷನ್ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಆದುದರಿಂದ ಸೋಂಕು ಕುರಿತ ಮುಂಜಾಗ್ರತಾ ಕ್ರಮ ಅಗತ್ಯ ಇರುವುದರ ಜೊತೆಗೆ ಸೋಂಕನ್ನು ಪ್ರಾಥಮಿಕವಾಗಿ ಪತ್ತೆಹಚ್ಚಿದಲ್ಲಿ ಕಣಚೂರು ಆಸ್ಪತ್ರೆಯಲ್ಲಿ ಎಲ್ಲಾ ರೀತಿಯಲ್ಲಿ ಇರುವ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದಾಗ ಮಕ್ಕಳು ಗುಣಮುಖರಾಗಲು ಸಾಧ್ಯ. ಸಮರ್ಪಕ ಚರಂಡಿ ವ್ಯವಸ್ಥೆಗಳು ನಿರ್ಮಾಣವಾಗಬೇಕಿದೆ, ಸರಕಾರವೂ ಇತರೆ ಕಾಯಿಲೆಗಳಿಗೆ ನೀಡುವಂತಹ ಉಚಿತ ಲಸಿಕೆಗಳನ್ನು ಹೆಪಟೈಟಸ್ -ಎ ಗೆ ನೀಡುವಂತಹ ಯೋಜನೆಗಳನ್ನು ರೂಪಿಸುವ ಅನಿವರ‍್ಯತೆ ಇದೆ. ಪ್ರಸಕ್ತ ವರ್ಷದಲ್ಲಿ ಮಳೆಯೂ ಆಗಾಗ್ಗ ಬರುವುದರಿಂದಾಗಿ ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ. ಪರಿಣಾಮವಾಗಿ ಸೋಂಕು ವ್ಯಾಪಕವಾಗಿ ಹರಡಲಾರಂಭಿಸಿದೆ.
ಡಾ| ಸಂಶಾದ್ ಎ ಖಾನ್
ಪ್ರೊಪೆಸರ್
ಮಕ್ಕಳ ವಿಭಾಗ

Exit mobile version