ಉಸ್ಮಾನ್ ಅಲ್ತಾಫ್
ತೊಕ್ಕೊಟ್ಟು : ಖಾಸಗಿ ಬಸ್ನ ನೌಕರರನ್ನು ಗುರಿಯಾಗಿಸಿ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವ ಈ ಸಂದರ್ಭದಲ್ಲಿ ತಮ್ಮ ಮಾನವೀಯತೆಯನ್ನು ಎತ್ತಿ ತೋರಿಸುವಲ್ಲಿ ಮರ್ಸಿ ಬಸ್ ಚಾಲಕ ಮತ್ತು ನಿರ್ವಾಹಕ ಯಶಸ್ವಿ ಯಾಗಿದ್ದಾರೆ ಎಂದು ರಾಣಿ ಅಬ್ಬಕ್ಕ ಬಸ್ ನೌಕರರ ಸಂಘ ಪೂರ್ವ ವಲಯ ಮಂಗಳೂರು ಇದರ ಅಧ್ಯಕ್ಷ ಉಸ್ಮಾನ್ ಅಲ್ತಾಫ್ ತಿಳಿಸಿದ್ದಾರೆ.
ರಾಣಿ ಅಬ್ಬಕ್ಕ ಬಸ್ ನೌಕರರ ಸಂಘದ ಸದಸ್ಯರಾದ ಮೆರ್ಸಿ ಬಸ್ಸಿನ ಚಾಲಕರು ಆಗಿರುವ ಸವಾದ್ ಮತ್ತು ನಿರ್ವಾಹಕರಾದ ಯಾಕೂಬ್ ರವರು ಸೆ. 2 ರಂದು ಮಧ್ಯಾಹ್ನ 2:15 ರ ಹೊತ್ತಿಗೆ ವಿಟ್ಲ ಕಡೆಯಿಂದ ಮಂಗಳೂರು ಕಡೆ ಸಂಚರಿಸುತ್ತಿರುವಾಗ ಬಸ್ ನಲ್ಲಿದ್ದ ಪ್ರಯಾಣಿಕೆ ಅಸ್ವಸ್ಥಗೊಂಡು ಬಸ್ಸಿನ ಸೀಟಿನಲ್ಲಿ ಬಿದ್ದಿರುವುದನ್ನು ಗಮನಿಸಿದ ಅವರು ತಕ್ಷಣ ಬಸ್ಸನ್ನು ಕಣಚೂರು ಆಸ್ಪತ್ರೆಯ ಒಳಗೆ ಪ್ರವೇಶಿಸಿ ಪ್ರಯಾಣಿಕೆ ಮಹಿಳೆಗೆ ಚಿಕಿತ್ಸೆ ನೀಡಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಈ ನಿಟ್ಟಿನಲ್ಲಿ ರಾಣಿ ಅಬ್ಬಕ್ಕ ಬಸ್ ನೌಕರರ ಪರವಾಗಿ ಚಾಲಕ ಸವಾದ್ ಮತ್ತು ನಿರ್ವಾಹಕ ಯಾಕೂಬ್ ರವರಿಗೆ
ಸಂಘ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಸಣ್ಣ ತಪ್ಪುಗಳಾದಾಗಲೂ ಬಸ್ ಸಿಬ್ಬಂದಿಯನ್ನು ದೂಷಿಸುವ ಮಂದಿಯೇ ಜಾಸ್ತಿ, ಟೈಮಿಂಗ್ ವಿಚಾರವಾಗಿ ತಮ್ಮ ದುಡಿಮೆಗೆ ಕತ್ತರಿ ಬೀಳುವ ಆತಂಕದಿದ ಬಸ್ ಸಿಬ್ಬಂದಿ ಜೀವಬಿಟ್ಟು ದುಡಿಯುವ ಅನಿವಾರ್ಯತೆ ಇದೆ. ಸಾರ್ವಜನಿಕರಿಗೂ ಇದು ತಪ್ಪು ಸಂದೇಶಗಳನ್ನು ನೀಡಬಹುದು. ಆದರೆ ಇಂತಹ ಸಂದರ್ಭದಲ್ಲಿಯೂ ಸಂಪಾದನೆಗಿಂತ ಜೀವ ಮುಖ್ಯ ಅನ್ನುವುದನ್ನು ಬಸ್ ಸಿಬ್ಬಂದಿ ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ.
