Site icon Ullalavani

ಗುಳಿಗ ದೈವದ ಮುನಿಸು: ಸ್ಮಾರ್ಟ್ ಸಿಟಿ ಗುತ್ತಿಗೆದಾರನಿಗೆ ಅನಾರೋಗ್ಯ, ಆರ್ಕಿಟೆಕ್ಟ್ ಗೆ ಅಪಘಾತ: ಕೊನೆಗೂ ದೈವಕ್ಕೆ ಹರಕೆ ಹೇಳಿದ ಕುಟುಂಬ!

ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ದ ದೈವ ಮುನಿದ ಸ್ಪೋರಿಗೆ ಮತ್ತೊಂದು ತಿರುವು ಸಿಕ್ಕಿದ್ದು, ಕಾಮಗಾರಿ ಗುತ್ತಿಗೆದಾರ ಹಾಗೂ ಆರ್ಕಿಟೆಕ್ಟ್ ಬದುಕಿನಲ್ಲಿ ಅವಘಡದ ಬೆನ್ನಲ್ಲೇ ಅವರ ಕುಟುಂಬ ಎಚ್ಚೆತ್ತುಕೊಂಡಿದೆ.

ಕೊನೆಗೂ ಗುಳಿಗ ದೈವದ ಮೊರೆ ಹೋದ ಗುತ್ತಿಗೆದಾರ ಮತ್ತು ಆರ್ಕಿಟೆಕ್ಟ್ ಕುಟುಂಬ ಗುಳಿಗ ದೈವಕ್ಕೆ ಕೋಲ ಕೊಡುವ ಹರಕೆ ಹೊತ್ತುಕೊಂಡಿದೆ. ಇಬ್ಬರೂ ಗುಣಮುಖರಾಗುವಂತೆ ಪ್ರಾರ್ಥಿಸಿ ಕೋಲದ ಹರಕೆ ಪ್ರಾರ್ಥನೆ ಮಾಡಿದೆ. ದೈವದ ಮಾತು ದಿಕ್ಕರಿಸಿ ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರನಿಗೆ ಅನಾರೋಗ್ಯ ಎದುರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶರವು ಗುಳಿಗೆ ದೈವದ ಅಭಯ ಪಡೆಯದೇ ಕಾಮಗಾರಿ ಆರಂಭಿಸಿದ್ದ ಪರಿಣಾಮ ಕಾಮಗಾರಿಗೆ ವಿಘ್ನ ಎದುರಾಗಿತ್ತು. ಸರಣಿ ಅವಘಡದ ಬೆನ್ನಲ್ಲೇ ಎಚ್ಚೆತ್ತ ಕುಟುಂಬಸ್ಥರಿಂದ ಅ.16ರಂದು ದೈವದ ಮೊರೆ ಹೋಗಿದ್ದಾರೆ. ತಮ್ಮ ಆರೋಗ್ಯ ಶೀಘ್ರ ಚೇತರಿಕೆಗಾಗಿ ಶರವು ಮಹಾಗುಳಿಗ ದೈವಕ್ಕೆ ಮೊರೆ ಹೋಗಿದ್ದಾರೆ. ಸದ್ಯ ಮುಂದಿನ ಕೋಲದಲ್ಲೇ ಅಭಯ ನೀಡುವ ಬಗ್ಗೆ ಕುಟುಂಬಸ್ಥರಿಗೆ ದೈವ ನುಡಿದಿದೆ.

ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ದ ದೈವದ ಮುನಿಸು ಯಾಕೆ?

ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡಿತಾ ಇದೆ. ಆದ್ರೆ ಮಂಗಳೂರಿನ ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣ ಇದ್ದ ಸ್ಥಳದಲ್ಲಿ ಕಳೆದ ಮೂರು ವರ್ಷದಿಂದ ಕಾಮಗಾರಿಯೊಂದು ನೆನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣ ಗುಳಿಗೆ ದೈವದ ಮುನಿಸಂತೆ. ಬಹು ಅಂತಸ್ಥಿನ ಕಾರ್ ಪಾರ್ಕಿಂಗ್ ಕಾಮಗಾರಿಯ ಈಗಿನ ಈ ಸ್ಥಿತಿಗೆ ಕಾರಣ ಇಲ್ಲೇ ಸಮೀಪದಲ್ಲಿ ಇರುವ ಶರವು ಮಹಾ ಗುಳಿಗ ದೈವ ಅನ್ನೋದು ಸದ್ಯ ಚರ್ಚೆಯ ವಿಷಯ. ಇತ್ತೀಚೆಗೆ ಶರವು ಮಹಾಗುಳಿಗನಿಗೆ ನೀಡಲಾದ ಕೋಲದಲ್ಲಿ ಗುಳಿಗ ಇದೇ ಕಾಮಗಾರಿ ವಿಚಾರವಾಗಿ ತನ್ನ ಕೋಪವನ್ನು ಹೊರಹಾಕಿದೆಯಂತೆ. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಾತನ ನಿರ್ಲಕ್ಷ್ಯದ ಬಗ್ಗೆ ಶರವು ಮಹಾ ಗುಳಿಗ ಕೋಪದಿಂದಲೋ ಮುಂದೆ ದೊಡ್ಡ ಅನಾಹುತ ನಡೆಯಲಿದೆ ಎಂದು ಎಚ್ಚರಿಸಿದೆಯಂತೆ. ಎಚ್ಚರಿಕೆ ನೀಡಿದ ಬೆನ್ನಲ್ಲೇ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ತಡೆಗೋಡೆಯೊಂದು ಧರಾಶಾಹಿಯಾಗಿದೆ. ಕಾಮಗಾರಿ ಆರಂಭಿಸುವ ಮೊದಲೇ ಇಲ್ಲಿನ ಗುಳಿಗನಿಗೆ ಪೂಜೆ ಸಲ್ಲಿಸಿ ತಿಂಗಳ ಸಂಕ್ರಮಣದಂದು ಅಗೇಲು ನೀಡಲು ಗುತ್ತಿಗೆದಾರ ಕಂಪೆನಿಗೆ ಸಲಹೆ ನೀಡಲಾಗಿತ್ತು. ಆದ್ರೆ ದೈವದ ಬಗ್ಗೆ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರ ರಾಕೇಶ್ ಶೆಟ್ಟಿ ದೈವಕ್ಕೆ ಕೊಡಬೇಕಾದ ಸೇವೆ ಕೊಡಲಿಲ್ಲ ಒಂದೆಡೆಯಾದ್ರೆ ಕನಿಷ್ಟ ದೈವಕ್ಕೆ ಕೈಮುಗಿದು ಕೆಲಸ ಆರಂಭಿಸಿಲ್ಲ. ಇದೇ ಕಾರಣದಿಂದ ಇದೀಗ ಆತನಿಗೆ ಅನಾರೋಗ್ಯ ಕೂಡಾ ಕಾಡಿದೆ ಅನ್ನೋ ವಿಚಾರ ಕೂಡಾ ಚರ್ಚೆಯಲ್ಲಿದೆ. ಇನ್ನೂ ಆತನ ಬದಲಿಗೆ ಗುಳಿಗನ ಕೋಲಕ್ಕೆ ಬಂದ ಆತನ ಮ್ಯಾನೇಜರ್‌ಗೆ ದೈವ ಆತನನ್ನೇ ಕರೆದುಕೊಂಡು ಬಾ ಎಂದು ಹೇಳಿದೆಯಂತೆ. ಈ ಗುಳಿಗನ ಕೋಪದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಕಾಮಗಾರಿ ಸ್ಥಳದಲ್ಲಿ ಪಿಲ್ಲರ್ ಎದ್ದಿರೋದು ಬಿಟ್ರೆ ಬಹುಅಂತಸ್ತಿನ ಕಾರು ಪಾರ್ಕಿಂಗ್ ಕಟ್ಟಡ ಮೇಳೆ ಏಳೆಲೆ ಇಲ್ಲ.

ಇದು ಥೇಟ್ ಕಾಂತಾರ ಸಿನಿಮಾ ಹೋಲುವ ದೈವ ಪವಾಡದ ಸ್ಟೋರಿಯಂತಿದ್ದು,’ಇದು ಅವನ ಮತ್ತು ನನ್ನ ಲೆಕ್ಕ’ ಅಂತ ದೈವ ಎಚ್ಚರಿಕೆ ಕೊಟ್ಟಿದೆ. ಕಾಂತಾರದ ‘ಕೋರ್ಟಿಗೆ ಹೋಗ್ತಿ’ ದೃಶ್ಯದ ಮಾದರಿಯಲ್ಲೇ ಗುಳಿಗ ದೈವ ಎಚ್ಚರಿಕೆ ಕೊಟ್ಟಿದೆ. ಇದು ಅವನ ಮತ್ತು ನನ್ನ ಲೆಕ್ಕ, ಅವನು ಬರದಿದ್ರೆ ಲೆಕ್ಕ ನಾನು ನೋಡ್ತೀನಿ’ ಅಂತ ಗುತ್ತಿಗೆದಾರನ ವಿರುದ್ದ ಮುನಿದಿದೆ ದೈವ. ಶರಾವು ಗುಳಿಗೆ ದೈವದ ಅಭಯ ಪಡೆಯದೇ ಕಾಮಗಾರಿ ಆರಂಭಿಸಿದ ಪರಿಣಾಮ ಕಾಮಗಾರಿಗೆ ವಿಘ್ನ ಎದುರಾಗಿದ್ದು, ಮೂರು ವರ್ಷ ಕಳೆದರೂ 10% ಕೂಡ ಕಾಮಗಾರಿ ಪೂರ್ಣಗೊಂಡಿಲ್ಲ. ರಿಟೈನಿಂಗ್ ವಾಲ್ ಕುಸಿತ, ಮಣ್ಣು ಕುಸಿತ ಹಾಗೂ ಮಳೆ ನೀರು ತುಂಬಿಕೊಂಡು ಅವಘಡ ಎದುರಾಗಿದೆ.‌ ಇನ್ನು ಕಾಮಗಾರಿ ಅವೈಜ್ಞಾನಿಕವಾಗಿದ್ದು, ಭೂಕುಸಿತವಾಗುವ ಭೀತಿ ಇದ್ದ ಕಾರಣ ಸುತ್ತಮುತ್ತಲ ವ್ಯಾಪಾರಿಗಳು, ಕಟ್ಟಡದ ಮಾಲೀಕರಿಂದಲೂ ದೈವದ ಬಳಿ ದೂರಿಕೊಂಡಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿ 70 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಇದಾಗಿದ್ದು, 6 ಅಂತಸ್ತಿನ 800 ವಾಹನ ಪಾರ್ಕ್ ಮಾಡುವ ಸಾಮಾರ್ಥ್ಯವಿರುವ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಇದಾಗಿದೆ. ಕೇವಲ ಪಿಲ್ಲರ್ ಕೆಲಸ ಆಗಿದ್ದು ಬಿಟ್ಟರೆ ಕಾಮಗಾರಿಗೆ ವೇಗ ಸಿಕ್ಕಿಲ್ಲ. ಕಾರ್ ಸ್ಟ್ರಕ್ಚರ್ ಎಂಬ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ವಹಿಸಲಾಗಿದೆ. ಕಾಮಗಾರಿ ಆರಂಭದಲ್ಲೇ ದೈವದ ಅಭಯ ಕೇಳದ ಕಾಮಗಾರಿ ಗುತ್ತಿಗೆದಾರನ ವಿರುದ್ದ ಮುನಿಸಿಕೊಂಡು ಎಚ್ಚರಿಕೆ ಕೊಟ್ಟಿದೆ ದೈವ. ಆದರೂ ಕಳೆದ ಮೂರು ವರ್ಷಗಳಲ್ಲಿ ದೈವ ಸಾನಿಧ್ಯಕ್ಕೆ ಬಾರದ ಗುತ್ತಿಗೆದಾರ ಬರೋವರೆಗೂ ಗಂಡಾಂತರದ ಭವಿಷ್ಯ ನುಡಿದಿತ್ತು.‌ ಇನ್ನು ಗುಳಿಗ ದೈವದ ಮುನಿಸಿನಿಂದ ಗುತ್ತಿಗೆದಾರನಿಗೆ ಅನಾರೋಗ್ಯ ಕಾಡಿದೆಯಂತೆ. ಈ ಬಗ್ಗೆ ಸ್ವತ: ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸ್ಪೋಟಕ ಸತ್ಯ ಬಿಚ್ಚಿಟ್ಟಿದ್ದರು. ಗುತ್ತಿಗೆದಾರನ ಅನಾರೋಗ್ಯದ ಕಾರಣದಿಂದಲೇ ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಗಿತವಾಗಿದೆ ಅಂದಿದ್ದರು. ಸ್ಮಾರ್ಟ್ ಸಿಟಿ ವತಿಯಿಂದ ಪಿಪಿಪಿ ಆಧಾರದಲ್ಲಿ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್ ಕೆಲಸ ನಡೀತಿದೆ. ಕಾರ್ ಇನ್ಫ್ರಾ ಎಂಬ ರಾಕೇಶ್ ಶೆಟ್ಟಿ ಪಾಲುದಾರಿಕೆಯ ಕಂಪೆನಿ ಅದು. ಈಗಾಗಲೇ ಕೆಲಸ ವಹಿಸಿ ಎರಡು ವರ್ಷವಾದರೂ ಕೆಲಸ ಆಗಿಲ್ಲ.‌ ಅವರು ಮೂರು ವರ್ಷದ ಅವಧಿಯಲ್ಲಿ ಕೆಲಸ ಮುಗಿಸಬೇಕಿತ್ತು. 70 ಕೋಟಿ ಪ್ರಾಜೆಕ್ಟ್ ಅದು, ಅವರು 30 ವರ್ಷದ ಒಪ್ಪಂದ ಮಾಡಿದ್ದಾರೆ. ಅಲ್ಲಿ ಪಾರ್ಕಿಂಗ್ ನಲ್ಲಿ ಬರೋ ಆದಾಯದಲ್ಲಿ ಪ್ರತೀ ವರ್ಷ 3 ಕೋಟಿ ಕಟ್ಟಬೇಕು. ಆದರೆ ಎರಡು ವರ್ಷದಲ್ಲಿ ಕೇವಲ ಹತ್ತು ಶೇ. ಮಾತ್ರ ಕೆಲಸ ಆಗಿದೆ. ಈ ಬಗ್ಗೆ ಸ್ಮಾರ್ಟ್ ಸಿಟಿ ಸಭೆಯಲ್ಲೂ ಬಹಳ ಚರ್ಚೆ ಆಗಿದೆ. ಆ ಗುತ್ತಿಗೆದಾರನಿಗೆ ಟರ್ಮಿನೇಷನ್ ಪತ್ರ ಕೊಡಲು ಸ್ಮಾರ್ಟ್ ಸಿಟಿ ಚೇರ್ ಮೆನ್ ಸೂಚಿಸಿದ್ದಾರೆ. ಆದರೆ ಅವರನ್ನ ಮಾತನಾಡಿಸಲು ಯತ್ನಿಸಿದಾಗ ಅವರು ಅನಾರೋಗ್ಯಕ್ಕೀಡಾಗಿರೋದು ಗೊತ್ತಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದಾರೆ. ಹಾಗಾಗಿ ನಾವು ಅವರಿಗೆ ನೋಟೀಸ್ ಕೊಟ್ಟಿದ್ದೇವೆ, ಉತ್ತರ ಬಂದ ಬಳಿಕ ಕ್ರಮ. ಅನಾರೋಗ್ಯದ ಕಾರಣ ಅಲ್ಲಿ ಸಂಪೂರ್ಣ ಕೆಲಸ ಸ್ಥಗಿತ ಆಗಿದೆ. ಹೀಗಾಗಿ ಅವರ ಉಳಿದ ಪಾಲುದಾರರನ್ನ ಕರೆದು ಮಾತನಾಡಲು ಹೇಳಿದ್ದೇನೆ. ಆ ಬಳಿಕ ಹೊಸ ಟೆಂಡರ್ ಕರೆಯೋ ಬಗ್ಗೆ ಚಿಂತಿಸಲಾಗಿದೆ ಎಂದಿದ್ದರು.

Exit mobile version