Site icon Ullalavani

ಕೋಟೆಕಾರು ಶ್ರೀ ಶೃಂಗೇರಿ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ
ಅವರಿಗೆ ಜಗದ್ಗುರು ಶ್ರೀ ಭಾರತೀ ತೀರ್ಥ ಪುರಸ್ಕಾರ್  ಪ್ರಧಾನ

UN networks

ಉಳ್ಳಾಲ: ಕೋಟೆಕಾರು ಶೃಂಗೇರಿ ಮಠದಲ್ಲಿ ಭವ್ಯವಾದ ದೇವಸ್ಥಾನ, ಸಭಾಂಗಣ, ಪಾಠಶಾಲೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಸತಿ ಸಹಿತ ಶಾಲೆ ಶೀಘ್ರವೇ ಆರಂಭವಾಗಲಿದೆ. ಈ ಹಿಂದೆ  ಚೆನ್ನೈನಿಂದ  ಶೃಂಗೇರಿ ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ಕೋಟೆಕಾರು ಕೇಂದ್ರ ಸ್ಥಾನ ಆಗಬೇಕು ಎನ್ನುವ ಆಸೆ ಗುರುಗಳಲ್ಲಿದ್ದರೂ ಅದನ್ನು ಬದಲಿಸಿ ಇದೀಗ ಹೊಸಯೋಜನೆಗೆ ಶೀಘ್ರವೇ ಚಾಲನೆ ನೀಡಲಿದ್ದಾರೆ ಎಂದು ದಕ್ಷಿಣಾಮ್ನಾಯ  ಶೃಂಗೇರಿ ಶ್ರೀ ಶಾರದಾ ಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು ಪದ್ಮಶ್ರೀ ಪುರಸ್ಕೃತ ಡಾ.ವಿ.ಆರ್ ಗೌರಿಶಂಕರ್  ಅಭಿಪ್ರಾಯಪಟ್ಟರು.
ಅವರು ಕೋಟೆಕಾರು ಭಾರತಿ ತೀರ್ಥ ಕೃಪಾ ಧರ್ಮಾಧಿಕಾರಿ ಶ್ರೀ ಬೊಳ್ಳಾವ ಸತ್ಯಶಂಕರ ಅಭಿನಂದನಾ ಸಮಿತಿ ವತಿಯಿಂದ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶರಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ಕರಕಮಲಸಂಜಾತರಾದ  ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರ ಅನುಗ್ರಹದಿಂದ  ಕೋಟೆಕಾರು ಶ್ರೀ ಶೃಂಗೇರಿ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ – ನಾರಾಯಣಿ ಬೊಳ್ಳಾವ ದಂಪತಿಗೆ  ಜಗದ್ಗುರು ಶ್ರೀ ಭಾರತೀ ತೀರ್ಥ ಪುರಸ್ಕಾರ್ ‘ ಇದನ್ನು ಪ್ರಧಾನ ಮಾಡಿ ಮಾತನಾಡಿದರು.
ನೂತನ ಯೋಜನೆ ಕುರಿತು 2017 ರಲ್ಲಿ ಮಾರ್ಚ್ ತಿಂಗಳಿನಲ್ಲಿ ಸಭೆ ನಡೆದಿತ್ತಾದರೂ, ಕೊರೊನಾದಿಂದಾಗಿ ಹಿಂದೆ ಸರಿದಿತ್ತು. ಇದೀಗ ಮತ್ತೆ ಗುರುಗಳು ಆಸೆ ತೋರಿದ್ದು, ಶೀಘ್ರವೇ ಎಲ್ಲರ ಸಹಕಾರದಿಂದ ಅದು ತಲೆ ಎತ್ತಲಿದೆ ಎಂದ ಅವರು ಗುರುಗಳ ಹೆಸರಿನ ಪುರಸ್ಕಾರವನ್ನು ಬೊಳ್ಳಾವರಿಗೆ ನೀಡುವ ಮೂಲಕ ಸಜ್ಜನಿಕೆಯ ಸ್ನೇಹಿತನಿಗೆ ಸಂದಾಯ ಗೌರವವಾಗಿದೆ.  ರಾಜನಾದವನ ಹಿಂದೆ ಪಾಪವೂ ಬರುವುದು ಪುಣ್ಯಾನು ಬರುತ್ತದೆ. ಹಾಗೆಯೇ ಉತ್ತಮ ಕಾರ್ಯಗಳನ್ನು ಕೈಗೊಂಡಾಗ ಆಪಾದನೆಗಳು ಸಾಮಾನ್ಯ.  ವರ್ಷದ ಜನಿವಾರ ಬದಲಾಯಿಸುವ ವೇಳೆ  ಪಾಪಗಳನ್ನು ಮರೆಯುವಂತೆ ಮಂತ್ರ ಪಠಣ ಕೈಗೊಳ್ಳುತ್ತೇವೆ. ಹಾಗಾಗಿ ಅಂತಹ ಮಾತುಗಳಿಗೆ ಕಿವಿಗೊಡದೆ ಮುಂದೆ ಸಾಗಬೇಕಿದೆ. ಯಾರಿಗಾಗಿ ಕೆಲಸ ಮಾಡುತ್ತೇವೆ, ಅಂತಹ ವ್ಯಕ್ತಿಗಳಿಗೆ ಸತ್ಯ ತಿಳಿದರೆ ಸಾಕು  ಹಾಗೆಯೇ ಗುರುಗಳು ಎಂದಿಗೂ ಆಪಾದನೆಗಳ ಕುರಿತು ಕೇಳಲಿಲ್ಲ, ಧೈರ್ಯದಿಂದ ಮುನ್ನುಗ್ಗಿರಿ. 1987 ರಲ್ಲಿ ಹುಂಡಿ ಹಣವನ್ನು  ಬ್ಯಾಂಕ್ ವತಿಯಿಂದಲೇ ಎಣಿಸುವ ಕ್ರಾಂತಿಕಾರಕ ಹೆಜ್ಜೆಗೆ ಹಲವು ಆಪಾದನೆಗಳು ತನ್ನ ಮೇಲೆ ವ್ಯಕ್ತವಾಯಿತಾದರೂ  ಇದೀಗ  ಸರಕಾರಿ ವ್ಯವಸ್ಥೆಯಲ್ಲದೆ ಹಲವು ಧಾರ್ಮಿಕ ಕ್ಷೇತ್ರಗಳಲ್ಲೂ  ಅದೇ ಕಾನೂನು ಪರಿಪಾಲನೆಯಲ್ಲಿದೆ ಎಂದರು.
ಬೆಂಗಳೂರು ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಮ ಭಟ್ ಐ.ಎ.ಎಸ್ ಮಾತನಾಡಿ,
ಶೃಂಗೇರಿಯ  ಮಹಾಸನ್ನಿಧಾನಕ್ಕೆ ಸತ್ಯಶಂಕರ ಬೊಳ್ಳಾವ ಅವರು ತನ್ನನ್ನು ಪರಿಚಯಿಸಿದ ದಿನದಿಂದ ಆಡಳಿತಾಧಿಕಾರಿಗಳ ಸಲಹೆಗಳನ್ನು ಪಡೆಯುತ್ತಾ ಬಂದವರು. ಸರಕಾರಿ ಆಡಳಿತ ತರಬೇತಿ ಸಂಸ್ಥೆಗಳ ಬದಲಾಗಿ ಹಿರಿಯ ಅಧಿಕಾರಿಗಳನ್ನು ಶೃಂಗೇರಿ ಕ್ಷೇತ್ರದ ಆಡಳಿತಾಧಿಕಾರಿಗಳಾದ ಗೌರಿಶಂಕರ್ ಅವರ ಬಳಿ ತರಬೇತಿಗೆ ಕಳುಹಿಸಿದರೆ  ವ್ಯವಸ್ಥೆಯಲ್ಲಿ ಉನ್ನತ ಮಟ್ಟಕ್ಕೆ ಅಧಿಕಾರಿಗಳು ಏರುತ್ತಾರೆ. ಅವರಲ್ಲಿನ ಕೌಶಲ್ಯ, ಆಡಳಿತ, ವಿದೇಶಿ ಸಂಬಂಧ ಜ್ಞಾನ  ಎಲ್ಲವೂ ಶ್ರೇಷ್ಟವಾದುದು. ಸತ್ಯಶಂಕರ ಬೊಳ್ಳಾವರು ಶಂಕರತತ್ವದ ಕಟ್ಟಾ ಅಭಿಮಾನಿ. ಕ್ಷೇತ್ರದಲ್ಲಿ ತೊಡಗಿಸದೇ ಕೊಳ್ಳುತ್ತಿದ್ದರೆ ಪ್ರಸಿದ್ಧ ಚಾರ್ಟಡ್9 ಅಕೌಂಟೆಂಟ್ ಆಗಿ ನಗರದಲ್ಲಿ ಕೋಟ್ಯಂತರ ಬೆಲೆಯ ಜಮೀನಿನ ಮಾಲಕರಾಗುತ್ತಿದ್ದರು. ಯೌವ್ವನದಲ್ಲಿ ಬಹಳಷ್ಟು ಧೈರ್ಯಶಾಲಿಯಾಗಿದ್ದರು. ಇದೀಗ ಅವರ ತೆಗೆದುಕೊಂಡ ಬದುಕು ಎಲ್ಲರಿಗೂ ಆದರ್ಶಯುತವಾದುದು ಎಂದರು. 
ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ, ಹಲವು ಹೋರಾಟದ ಫಲವಾಗಿ ಜಾಗವನ್ನು ಪಡೆದುಕೊಂಡು, ಮೊಗವೀರ ಮುಖಂಡರ ಧೈರ್ಯದಿಂದ   ಕೋಟೆಕಾರಿನಲ್ಲಿ ಸನ್ನಿಧಾನ ಸ್ಥಾಪಿಸಲು ಸಾಧ್ಯವಾಗಿದೆ. ಗುರುಗಳು ಸನ್ನಿಧಾನದಲ್ಲಿ  ಒಂದು ದಿನ ವಿಶ್ರಾಂತಿಗೆ ಬಂದ ಸಂದರ್ಭ ಧಾರ್ಮಿಕ ಸನ್ನಿಧಾನಕ್ಕೆ ಸ್ಥಳಾವಕಾಶ ಕೋರಿದಂತೆ ಹೃದಯಪೂರ್ವಕವಾಗಿ ಒಪ್ಪಿಕೊಂಡ ಪರಿಣಾಮ ಇದೀಗ ಸ್ಥಳೀಯ 45 ಸಮಾಜದವರನ್ನು ಶೃಂಗೇರಿ ಮಠಕ್ಕೆ ಸಂಪರ್ಕ ಕಲ್ಪಿಸುವಲ್ಲಿ ಸಹಕಾರಿಯಾಗಿರುವೆನು. ಚಾತುರ್ಮಾಸಕ್ಕಾಗಿ ಚೆನ್ನೈನಿಂದ ಬಂದವರು ಸೇರಿದಂತೆ ಸುತ್ತಲ ಜನರಿಗೆ ಜ್ಞಾನ ಕಲ್ಪಿಸಿರುವ ಯೋಗ ತನ್ನದು ಎಂದರು. 
ಕಾರ್ಯಕ್ರಮದಲ್ಲಿ ಮಂಗಳೂರು ಕರ್ನಾಟಕ ಬ್ಯಾಂಕ್ ಲಿ. ಅಧ್ಯಕ್ಷರು ಪ್ರದೀಪ್ ಕುಮಾರ್ ಪಂಜ, ಬೆಂಗಳೂರು ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಮ ಭಟ್ ಐ.ಎ.ಎಸ್, ಕರ್ನಾಟಕ ಸರಕಾರದ ಮಾಜಿ ಅಡ್ವಕೇಟ್ ಜನರಲ್ ಮತ್ತು ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣರ ಮಹಾಸಭಾದ ಅಧ್ಯಕ್ಷ  ಅಶೋಕ ಹಾರ್ನಹಳ್ಳಿ, ಶ್ರೀ ಶೃಂಗೇರಿ ಮಠದ ಉಡುಪಿ ಪ್ರಾಂತದ ಧರ್ಮಾಧಿಕಾರಿ  ಎಸ್.ವಾಗೀಶ ಶಾಸ್ತ್ರಿ,  ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದ  ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಬಿ.ರವೀಂದ್ರನಾಥ ರೈ, ಬೆಂಗಳೂರು ನಿವೃತ್ತ ಡಿವೈಎಸ್ಪಿ ಕೆ.ಎಲ್ ರಾವ್, ಪುತ್ತೂರು ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ  ಎನ್.ಕೆ ಜಗನ್ನಿವಾಸ ರಾವ್, ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ  ವರದರಾಯ ಸುಬ್ರಾಯ ನಾಗ್ವೇಕರ್, ಮಂಗಳೂರು ಶ್ರೀ ಶಂಕರ ಪ್ರತಿಷ್ಠಾನ ಅಧ್ಯಕ್ಷ ಕೆ.ಕೇಶವ ಆಚಾರ್ಯ,  ಮೈಸೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಾಯಿನಾಥ ಮಲ್ಲಿಗೆಮಾಡು , ಸಮಿತಿ ಅಧ್ಯಕ್ಷ ಎಂ.ಆರ್ ವಾಸುದೇವ,   ಕಾಳಿಕಾಂಬ ದೇವಸ್ಥಾನದ  ಆಡಳಿತ ಮೊಕ್ತೇಸರರಾದ ಸುಂದರ್ ಆಚಾರಿ ಮುಖ್ಯ ಅತಿಥಿಗಳಾಗಿದ್ದರು.
ಗುರುಗಳ ಸಂದೇಶವನ್ನು  ವಿದ್ಯಾಶಂಕರ್ ಬೊಳ್ಳಾವ ವಾಚಿಸಿದರು.  ಕಾರ್ಯಾಧ್ಯಕ್ಷ ಮದುಸೂಧನ ಆಯರ್ ಸ್ವಾಗತಿಸಿದರು.  ಮೋಹನ್ ರಾವ್ ಕೊಯ್ಲ ನಿರೂಪಿಸಿದರು.  ನಾರಾಯಣ ಕೈಯ್ಯೂರ್ ವಂದಿಸಿದರು.

Exit mobile version