Site icon Ullalavani

ತೊಕ್ಕೊಟ್ಟು ಓವರ್ ಬ್ರಿಡ್ಜ್ -ಕುಂಪಲ ಬೈಪಾಸ್ ಸರ್ವಿಸ್ ರಸ್ತೆಯಲ್ಲಿ ವಿಳಂಬ
ಎರಡು ದಿನಗಳಲ್ಲಿ ಕಾಮಗಾರಿ ಆರಂಬಿಸದೇ ಇದ್ದಲ್ಲಿ ಹೆದ್ದಾರಿ ಬಂದ್‍ನ ಎಚ್ಚರಿಕೆ

UN networks

ಉಳ್ಳಾಲ : ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಕುಂಪಲ ಬೈಪಾಸ್ ವರೆಗಿನ ಸರ್ವಿಸ್ ರಸ್ತೆ ಕಾಮಗಾರಿ ವಿಳಂಬವನ್ನು ಖಂಡಿಸಿ ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ ಮತ್ತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾಧಿಕಾರಿಯನ್ನು ತರಾಟೆಗೆ ಪಡೆದುಕೊಂಡ ಘಟನೆ ತೊಕ್ಕೊಟ್ಟು ಕಾಪಿಕಾಡಿನಲ್ಲಿ ಇಂದು ನಡೆಯಿತು.
2022ರ ಅಕ್ಟೋಬರ್ ತಿಂಗಳಲ್ಲಿ ಹೋರಾಟ ಸಮಿತಿಯ ಬೇಡಿಕೆಗೆ ಸ್ಪಂಧಿಸಿ ನವಯುಗ ಸಂಸ್ಥೆ ಕಾಮಗಾರಿ ಆರಂಭಿಸಿತು. ಆದರೆ ಅರ್ಧದಷ್ಟು ಕಾಮಗಾರಿ ನಡೆಸಿದ ಸಂಸ್ಥೆ ಇದೀಗ ಕಾಮಗಾರಿಯನ್ನು ನಿಲ್ಲಿಸಿ ವಿಳಂಬ ನಡೆಸುತ್ತಿದೆ. ಈಗಾಗಲೇ ಸರ್ವಿಸ್ ರಸ್ತೆಯಿಲ್ಲದೆ, ಕಾಪಿಕಾಡು ಬಳಿ ಯುಟರ್ನ್ ನೀಡಿರುವ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಅವಧಿಯಲ್ಲಿ ಅಪಘಾತದಲ್ಲಿ ಆರು ಜನ ಸಾವನ್ನಪ್ಪಿರುವುದನ್ನು ಪೊಲೀಸ್ ವರದಿಯೇ ನೀಡಿದೆ. ಈ ವರದಿಯನ್ನು ಮುಂದಿಟ್ಟುಕೊಂಡು ಹೋರಾಟ ಸಮಿತಿ ನಡೆಸಿದ ಹೋರಾಟದ ಫಲವಾಗಿ ಶಾಸಕರು, ಸಂಸದರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ನವಯುಗ ಸಂಸ್ಥೆಯವರನ್ನು ಒಟ್ಟುಗೂಡಿಸಿ ತಕ್ಷಣ ಕಾಮಗಾರಿ ನಡೆಸುವಂತೆ ಆದೇಶಿಸಿದ್ದರು.
`ಹೆದ್ದಾರಿ ಬಂದ್ ನಡೆಸಿ ಉಗ್ರ ಪ್ರತಿಭಟನೆ’
ಸಮಿತಿಯ ಹಿರಿಯ ಈಶ್ವರ್ ಉಳ್ಳಾಲ್ ಮಾತನಾಡಿ, ಇನ್ನೆರಡು ದಿನಗಳ ಒಳಗೆ ಕಾಮಗಾರಿಯನ್ನು ಆರಂಭಿಸದೇ ಇದ್ದಲ್ಲಿ ವಾಹನ ಸವಾರರು, ಗ್ರಾಮಸ್ಥರು , ಸಾರ್ವಜನಿಕರನ್ನು ಸೇರಿಸಿಕೊಂಡು ರಾ.ಹೆ.66 ನ್ನು ಕಾಪಿಕಾಡಿನಲ್ಲಿ ಬಂದ್ ಮಾಡಿ ಉಗ್ರ ರೀತಿಯಲ್ಲಿ ಹೋರಾಟ ನಡೆಸುತ್ತೇವೆ. ಬಾರ್ ಒಂದಕ್ಕಾಗಿ ಕಾಮಗಾರಿಯನ್ನು ವಿಳಂಬ ನಡೆಸುತ್ತಿರುವುದು ಸರಿಯಲ್ಲ. ಊರಿನ ಮಕ್ಕಳು ಅಪಘಾತದಲ್ಲಿ ಸಾವನ್ನಪ್ಪಿರುವುದು ಬಹಳಷ್ಟು ನೋವುಂಟು ಮಾಡಿದೆ. ನವಯುಗ ಸಂಸ್ಥೆಯವರ ಸಂಬಂಧಿಕರಿಗೆ ಇದೇ ರೀತಿ ಅಪಘಾತವಾಗುತ್ತಿದ್ದರೆ ಕಾಮಗಾರಿಯನ್ನು ನಡೆಸುತ್ತಿರಲಿಲ್ಲವೇ?. ಎರಡು ದಿನಗಳ ಒಳಗೆ ಕಾಮಗಾರಿ ಆರಂಭವಾಗದೇ ಇದ್ದಲ್ಲಿ ಸಮಸ್ತ ಜನ ಸೇರಿಕೊಂಡು ಉಗ್ರ ಪ್ರತಿಭಟನೆ ನಡೆಸುವುದು ನಿಶ್ಚಿತ ಎಂದರು.
ಪತ್ರಕರ್ತ ತಾರನಾಥ್ ಕಾಪಿಕಾಡ್ ಮಾತನಾಡಿ, ಪಾದಚಾರಿಗೆ ಓಡಾಡಲು ಸ್ಥಳಾವಕಾಶವಿಲ್ಲದ ಸ್ಥಿತಿ. ಹೆದ್ದಾರಿ ಇಲಾಖೆ ಈಗಾಗಲೇ ಸ್ವಾಧೀನಪಡಿಸಿದ ಭೂಮಿಯಿದೆ. ಎಲ್ಲವೂ ಖಾಸಗಿಯವರು ಅಕ್ರಮವಾಗಿ ಕಬಳಿಸಿಕೊಂಡರೂ ಅವರನ್ನು ಎಬ್ಬಿಸುವ ಧೈರ್ಯ ಇಲಾಖೆ ಮಾಡದಿರುವುದು ಹೆದ್ದಾರಿ ಇಲಾಖೆಯ ಮೇಲೆ ಜನರು ಸಂಶಯ ಪಡುವಂತಾಗಿದೆ. ತಕ್ಕಮಟ್ಟಿಗೆ ಕಾಮಗಾರಿ ಆರಂಭಿಸಿ, ಸ್ವಾಧೀನಪಡಿಸಿದ ಭೂಮಿಯಲ್ಲಿದ್ದ ಕೆಲವರನ್ನು ಮಾತ್ರ ತೆಗೆಸಿ, ಇನ್ನು ಕೆಲವರನ್ನು ಹಾಗೆಯೇ ಬಿಡಲಾಗಿದೆ. ಎಲ್ಲವನ್ನೂ ತೆಗೆಯಿರಿ ವ್ಯವಸ್ಥಿತವಾಗಿ ಜನರು ಹಾಗೂ ಸ್ಥಳೀಯರ ಸಂಕಷ್ಟಕ್ಕೆ ಸ್ಪಂಧಿಸಿ. ಕಾಪಿಕಾಡು ಯು ಟನ್ ್ ಬಂದ್ ಮಾಡಬೇಕು, ಪೊಲೀಸರ ವರದಿಯಲ್ಲಿ ಆರು ಸಾವು ಒಂದೂವರೆ ವರ್ಷದಲ್ಲಿ ಆಗಿದೆ. ತಕ್ಷಣವೇ ಅಂಬಿಕಾರೋಡ್‍ನಲ್ಲಿ ಯುಟರ್ನ್ ನೀಡುವಂತೆ ಒತ್ತಾಯಿಸಿದರು.
ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿಯ ಸುಕುಮಾರ್ ತೊಕ್ಕೊಟ್ಟು, ಭವಾನಿ ಮೊದಲಾದವರು ಉಪಸ್ಥಿತರಿದ್ದರು.

`ತಕ್ಷಣವೇ ಕಾಮಗಾರಿ ಆರಂಭಿಸುವಂತೆ ನವಯುಗ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕ್ರಿಸ್ ಮಸ್ ವರೆಗೂ ಬಾರ್ ಮಾಲೀಕರು ತೆರವಿಗೆ ಅವಕಾಶ ಕೇಳಿರುವುದರಿಂದ ಕಾಮಗಾರಿ ನಿಂತಿತ್ತು. ಇದೀಗ 15 ದಿನಗಳಲ್ಲಿ ತೊಕ್ಕೊಟ್ಟುವಿನಿಂದ ಕುಂಪಲ ಬೈಪಾಸ್ ವರೆಗೆ ಎರಡು ಬದಿಗಳಲ್ಲಿ 2.5 ಮೀ ಕಚ್ಚಾ ಸರ್ವಿಸ್ ರಸ್ತೆ ನಿರ್ಮಿಸಲು ಸೂಚಿಸಲಾಗಿದೆ. ಒಂದು ವೇಳೆ ಕಾಮಗಾರಿ ಆಗದೇ ಇದ್ದಲ್ಲಿ ಊರವರೇ ಜೆಸಿಬಿ ಮೂಲಕ ಅಗೆದು ಕಾಮಗಾರಿ ನಡೆಸಲು ಒಪ್ಪುತ್ತೇನೆ’.
ಲಿಂಗೇ ಗೌಡ
ಯೋಜನಾ ನಿರ್ದೇಶಕರು
ರಾ.ಹೆ.ಅಭಿವೃದ್ಧಿ ಪ್ರಾಧಿಕಾರ

Exit mobile version