Site icon Ullalavani

ಮುಡಿಪು: ಸೂರಜ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Un News networks
ಮುಡಿಪು: ವಿದ್ಯಾರ್ಥಿಗಳಿಗೆ ಪ್ರತಿ ಹಂತದಲ್ಲೂ ಶಿಸ್ತು, ಸಕಾರಾತ್ಮಕ, ಧನಾತ್ಮಕ ಚಿಂತನೆ ಬೆಳೆಸಿಕೊಳ್ಳುವುದು ಮುಖ್ಯ. ಸ್ಪರ್ಧೆಯಲ್ಲಿ ಗೆದ್ದರೆ ಖುಷಿ ಸಿಗುತ್ತದೆ, ಸೋತರೆ ಎದೆಗುಂದದೆ ಸೋಲು ಸ್ವೀಕರಿಸಿ ಮುಂದಿನ ಸ್ಪರ್ಧೆಯಲ್ಲಿ ಗೆಲುವು ಪಡೆಯುವ ಸಲುವಾಗಿ ಆಗಿನಿಂದಲೇ ಹೆಚ್ಚಿನ ಶ್ರಮ ಪಡಬೇಕು. ಮಕ್ಕಳಲ್ಲಿ ಶಿಸ್ತು ಎನ್ನುವುದು ಕೇವಲ ಪಾಠದ ಸಂದರ್ಭಕ್ಕೆ ಸೀಮಿತವಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಅಭಿಪ್ರಾಯಪಟ್ಟರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಮತ್ತು ಮುಡಿಪು ಜ್ಞಾನದೀಪ ಆಂಗ್ಲಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಮಂಚಿ ವಲಯ ಮಟ್ಟದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಜ್ಞಾನೇಶ್ ಮಾತನಾಡಿ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವವರು ತಮ್ಮನ್ನು ತಾವು ಮರೆತಾಗ ಮನಸ್ಸಿಗೆ ತೃಪ್ತಿ ಸಿಗುತ್ತದೆ. ಇನ್ನೊಬ್ಬರನ್ನು ಹೋಲಿಕೆ ಮಾಡಿಕೊಳ್ಳಲು ಮುಂದಾದರೆ ಕೀಳರಿಮೆ ಉಂಟಾಗುತ್ತದೆ ಎಂದು ಹೇಳಿದರು. ಜ್ಞಾನದೀಪ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷ ಡಾ. ಮಂಜುನಾಥ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ಇಸಿಒ ಸುಧಾ, ಪಿಟಿಎ ಅಧ್ಯಕ್ಷ ಸ್ಟೀಫನ್ ಪ್ರಕಾಶ್ ವೇಗಸ್, ಪಜೀರು ಪಂಚಾಯಿತಿ ಅಧ್ಯಕ್ಷೆ ಲತಾ, ಸದಸ್ಯರಾದ ಸಿರಾಜುದ್ದಿನ್, ಶಾಫಿ, ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ ನಾಯ್ಕ್, ಸದಸ್ಯ ಗೋಪಾಲ ದೇವಾಡಿಗ ಉಪಸ್ಥಿತರಿದ್ದರು.
ಬಂಟ್ವಾಳ ಇಸಿಒ ಪ್ರತಿಮಾ ಸ್ವಾಗತಿಸಿದರು. ಡಾಲ್ಫಿ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಪ್ರಿನ್ಸಿಪಾಲ್ ಪ್ರೊ. ಜಯರಾಮ್ ಪೂಂಜಾ ವಂದಿಸಿದರು.

Exit mobile version