Site icon Ullalavani

ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಬೋವಿ ಜನಾಂಗದ ಅಸ್ತಿತ್ವ ನಾಶದ ಭೀತಿ : ಎಂ.ವೀರಪ್ಪ ಮೊಯ್ಲಿ

UN NEWS NETWORKS

ಉಳ್ಳಾಲ: ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಬೋವಿ ಜನಾಂಗದ ಅಸ್ತಿತ್ವನೇ ನಾಶವಾಗುವ ಭಯಾನಕ ಸ್ಥಿತಿ ಉಚ್ಚಿಲದ ಬಟ್ಟಪಾಡಿಯಲ್ಲಿ ನಿರ್ಮಾಣವಾಗಿದೆ. ಎನ್‌ ಡಿ ಆರ್‌ ಎಫ್‌ ಫಂಡನ್ನೂ ವಿನಿಯೋಗಿಸದೆ, ಸ್ಥಳೀಯ ಶಾಸಕರಿಗೆ ಬಜೆಟಿನಲ್ಲಿ ನಿರ್ವಹಣೆಗೂ ಅನುದಾನ ಇಡದೆ ಈಡೀ ಊರು ಉಳಿಯದಂತೆ ಮಾಡಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.

ಉಚ್ಚಿಲದ ಬಟ್ಟಪ್ಪಾಡಿ ಪ್ರದೇಶಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ
ಕಡಲ್ಕೊರೆತ ಕುರಿತು ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸದಾಶಿವ್‌ ಉಳ್ಳಾಲ್‌ ಹಾಗೂ ಶಾಸಕ ಯು.ಟಿ ಖಾದರ್‌ ಅವರಿಂದ ಮಾಹಿತಿ ಪಡೆದಾಗ
ಬಟ್ಟಪ್ಪಾಡಿ ಸಮುದ್ರ ತೀರದ ಒಂದು ನೋಟ

ಕಡಲ್ಕೊರೆತ ಬಾಧಿತ ಬಟ್ಟಪ್ಪಾಡಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದರು‌
ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆ ಮಾಡುವುದು ಹೊಸತೇನಲ್ಲ, ಅಳಿವೆಬಾಗಿಲಿನಿಂದ ಉಳ್ಳಾಲದ ತನಕ ಮಾಡಿದ್ದೇವೆ. ಅದನ್ನು ಉಳಿಸುವ ಕೆಲಸವಾಗಬೇಕು.ಆದರೆ ಉಳಿಸುವಂತಹ ಪ್ರಾಮಾಣಿಕ ಪ್ರಯತ್ನ ರಾಜ್ಯ ಸರಕಾರದಿಂದಾಗಲಿ, ಕೇಂದ್ರ ಸರಕಾರದಿಂದಾಗಲೀ ಆಗುತ್ತಿಲ್ಲ.ಕೇಂದ್ರ ಸರಕಾರ ತಾಂತ್ರಿಕವಾದಂತಹ ಸರ್ವೇ ಮಾಡಬೇಕಿತ್ತು. ಆದರೆ ಈವರೆಗೆ ಮಾಡಿಲ್ಲ.ಎನ್ ಡಿ ಆರ್ ಎಫ್ ಫಂಡನ್ನೂ ಹಾಗೇ ಬಿಡಲಾಗುತ್ತಿದೆ. ಅದರಲ್ಲಿ ಇರುವ ಸಾಕಷ್ಟು ಅನುದಾನ ಬಿಡುಗಡೆ ಮಾಡಬಹುದಾಗಿದೆ. ಅದನ್ನು ಖರ್ಚೇ ಮಾಡದೇ ಹಾಗೇ ಬಿಟ್ಟುಬಿಟ್ಟಿದ್ದಾರೆ. ಬರೀ ಭಾಷಣದಿಂದ ಇದೆಲ್ಲಾ ಸಾಧ್ಯವಿಲ್ಲ. ಕಾರ್ಯಚಟುವಟಿಕೆಯಿಂದ ಮಾಡಬೇಕಿದೆ. ಸರಕಾರಕ್ಕೆ ಜನರ ಮೇಲಿನ ಕಾಳಜಿಯಾದರೂ ಇರಬೇಕು. ಎನ್ ಡಿ ಆರ್ ಎಫ್ ಫಂಡನ್ನೂ ಹಾಗೇ ಬಿಡಲಾಗುತ್ತಿದೆ,.ಶಾಸಕರಿಗೆ ನಿರ್ವಹಣೆಗಾದರೂ ಬಜೆಟ್ ನಲ್ಲಿ ಅನುದಾನ ಇಡದಿದ್ದರೆ, ಊರಾದರೂ ಉಳಿಯುವುದು ಹೇಗೆ? ಇಬ್ಬರೂ ತುರ್ತಾಗಿ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ತಕ್ಷಣ ಪರಿಹಾರ ಒದಗಿಸುವಂತೆ ಒತ್ತಾಯಿಸುತ್ತೇವೆ. ಜೊತೆಗೆ ತಾಂತ್ರಿಕ ತಂಡದೊಂದಿಗೆ ಸಭೆ ನಡೆಸಿ ತುರ್ತು ಪರಿಹಾರದ ಕುರಿತು ಚಿಂತಿಸುತ್ತೇವೆ ಎಂದರು.
ಈ ಸಂದರ್ಭ ಶಾಸಕ ಯು.ಟಿ ಖಾದರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಹಿಂದುಳಿದ ವರ್ಗಗಳ ಕ್ಷೇತ್ರ ಅಧ್ಯಕ್ಷ ದೀಪಕ್ ಪಿಲಾರ್, ಬ್ಲಾಕ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಇಂಟಕ್ ಅಧ್ಯಕ್ಷ ವಿಶಾಲ್ ಕೊಲ್ಯ, ಜಿ.ಪಂ ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ್, ರಾಜ ಬಂಡಸಾಲೆ, ರೋಹಿತ್ ಮಾಸ್ಟರ್, ದಾಸಣ್ಣ ಅಡ್ಕ, ಶಾಲಿನಿ ಶೆಟ್ಟಿ, ಧನರಾಜ್ ಗಟ್ಟಿ, ಸುಂದರ್ ಚೆಂಬುಗುಡ್ಡೆ, ರವಿ ಗಾಂಧಿನಗರ, ರಾಘವ್ ಉಚ್ಚಿಲ್, ಬಶೀರ್ ಕೊಳಂಗೆರೆ ಉಪಸ್ಥಿತರಿದ್ದರು.

ʻ ಸಾಂಪ್ರದಾಯಿಕ ಮೀನುಗಾರರನ್ನು ಓಡಿಸುವ ಕೆಲಸವಾಗುತ್ತಿದೆ ‘
ತುರ್ತಾಗಿ ಯಾವುದೇ ಪರಿಹಾರವನ್ನು ನೀಡದ ಫಲವಾಗಿ ಉಚ್ಚಿಲ ದ ಮೀನುಗಾರರು ಊರು ಬಿಡುವಂತಾಗಿದೆ. 20 ಮನೆಗಳಷ್ಟು ಮಂದಿ ನಾಡದೋಣಿ ಮೂಲಕ ಮೀನುಗಾರಿಕೆ ನಡೆಸುವವರಿದ್ದಾರೆ‌. ಅವರನ್ನೇ ಓಡಿಸುವ ಕೆಲಸವಾಗುತ್ತಿದೆ. ಮನೆ ದುರಸ್ತಿಗೆ ಮುಂದಾಗುವಾಗ ನೋಟೀಸು ನೀಡಲಾಗುತ್ತಿದೆ. ಅದೇ ರಸಾಟ್೯ ನವರು ಒಂದು ಮಹಡಿ ನಿರ್ಮಿಸಿದರೂ ಕೇಳುವವರಿಲ್ಲ. ಸಿ ಆರ್ ಝೆಡ್ ನಲ್ಲಿ ಬೋವಿ ಜನಾಂಗದವರು ಮೀನುಗಾರರೆಂದು, ಅವರಿಗೆ ರಕ್ಷಣೆ ನೀಡಬೇಕೆಂಬ ಕಾನೂನಿದ್ದರೂ, ಅವರಿಗೆ ದೌರ್ಜನ್ಯ ಮಾಡಲಾಗುತ್ತಿದೆ ಎಂದು ಸ್ಥಳೀಯ ರಾಘವ ಮಾಸ್ಟರ್ ಎಂಬವರು ವೀರಪ್ಪ ಮೊಯ್ಲಿ ಅವರಲ್ಲಿ ಅಳಲು ತೋಡಿಕೊಂಡರು.

Exit mobile version