Site icon Ullalavani

ಕುಂಪಲ: ಆ್ಯಕ್ಸಿಲ್ ತುಂಡಾಗಿ ಬಸ್ ಕಮರಿಗೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕುಂಪಲ: ಆ್ಯಕ್ಸಿಲ್ ತುಂಡಾಗಿ ಬಸ್ಸೊಂದು ಕಮರಿಗೆ ವಾಲಿ ಮನೆಯೊಂದರ ಕಂಪೌಂಡಿಗೆ ಡಿಕ್ಕಿ ಹೊಡೆದು ನಿಂತಿರುವ ಘಟನೆ ಕುಂಪಲದ ಚಿತ್ರಾಂಜಲಿನಗರ ಸಮೀಪದ ವಿಜಯನಗರ ಎಂಬಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಘಟನೆಯಲ್ಲಿ ಮೂವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಮಂಗಳೂರಿನಿಂದ ಬಗಂಬಿಲ ಕಡೆಗೆ ತೆರಳುತ್ತಿದ್ದ 44 ನಂಬರಿನ ಖಾಸಗಿ ಗಣೇಶ್ ಬಸ್ಸ್ ವಿಜಯನಗರದ ಏರುವ ಪ್ರದೇಶದಲ್ಲಿ ಆ್ಯಕ್ಸಿಲ್ ತುಂಡಾಗಿದ್ದು, ಪರಿಣಾಮ ಬಸ್ಸು ಹಿಂದುಗಡೆ ಚಲಿಸಿದೆ. ಏಕಾಏಕಿ ಹಿಂದುಗಡೆ ಚಲಿಸಿದ ಬಸ್ಸು ಕಮರಿಗೆ ಉರುಳಿ ಸಮೀಪದಲ್ಲಿದ್ದ ನಾರಾಯಣ ಎಂಬವರ ಕಂಪೌಂಡಿಗೆ ಡಿಕ್ಕಿ ಹೊಡೆದು ನಿಂತಿತು. ಬೆಳಗ್ಗಿನ ಸಮಯವಾಗಿದ್ದರಿಂದಾಗಿ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿದ್ದರು. ಆದರೆ ಪವಾಡಸದೃಶವಾಗಿ ಮೂವರು ಮಹಿಳೆಯರು ಮತ್ತು ಒಂದು ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ತಪ್ಪಿದ ಅಪಾಯ:

ಬಸ್ಸು ಕಮರಿಗೆ ಉರುಳದೇ ಇದ್ದಲ್ಲಿ ಹಿಂದೆ ಸೇತುವೆಯೊಂದಿದ್ದು, ಅದರ ಕೆಳಗಡೆ ಬೀಳುವ ಸಾಧ್ಯತೆ ಇತ್ತು. ಇತ್ತ ಕಡೆ ಹೈಟೆನ್ಶನ್ ಟ್ರಾನ್ಸ್ ಫಾರ್ಮರ್ ಕೂಡಾ ಇದ್ದು, ಇದರಿಂದ ಸಂಭವಿಸುತ್ತಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

`ಹೋಗುವಾಗಲೇ ಹತ್ತುತ್ತಾರೆ’ :

ಕುಂಪಲದಿಂದ ಮಂಗಳೂರಿಗೆ ಹೋಗುವ ಬಸ್ಸುಗಳು ಬಗಂಬಿಲದಲ್ಲಿ ತಿರುಗಿ ಹೋಗಬೇಕಾಗಿದೆ. ಬೆಳಗ್ಗಿನ ಸಮಯದಲ್ಲಿ ಸೀಟು ಸಿಗಬೇಕೆಂದು ಪ್ರಯಾಣಿಕರು ಬಗಂಬಿಲ ಕಡೆಗೆ ಬಸ್ಸು ಹೋಗುವಾಗಲೇ ಏರುತ್ತಾರೆ. ಇದರಿಂದ ಬಸ್ಸಿನಲ್ಲಿ ಓವರ್ ಲೋಡ್ ಆಗಿ ಚಿತ್ರಾಂಜಲಿನಗರದ ಏರುವ ರಸ್ತೆಯಲ್ಲಿ ಬಸ್ಸು ಚಾಲಕರು ಹರಸಾಹಸ ಪಡುವಂತಾಗಿದೆ. ಇಂದು ಒಂದು ಬಸ್ ಕೂಡಾ ಇರದೇ ಇದ್ದುದರಿಂದ ಅದರ ಪ್ರಯಾಣಿಕರೆಲ್ಲರೂ ಇದೇ ಬಸ್ಸನ್ನೇರಿದ್ದರು. ಇದರಿಂದ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿದ್ದರು ಎಂದು ಬಸ್ ಸಿಬ್ಬಂದಿ ತಿಳಿಸಿದ್ದಾರೆ.

ಮೂರನೇ ಅಪಘಾತ:

ಇದೇ ಜಾಗದಲ್ಲಿ ಈ ಹಿಂದೆ ಲಾರಿ, ಬಸ್ ಅಪಘಾತಕ್ಕೀಡಾಗಿತ್ತು. ಆದರೆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ.

Exit mobile version