ಉಳ್ಳಾಲ: ಬ್ಯಾರೀಸ್ ಗ್ರೂಪ್ ಆಯೋಜಿಸಿರುವ ‘ಗ್ರೀನ್ ವಾಕಥಾನ್ 2021’ಕ್ಕೆ ಕೊಣಾಜೆ ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಾ ಸಭಾಂಗಣದ ಮುಂದೆ ಇಂದು ಮುಂಜಾನೆ ಚಾಲನೆ ನೀಡಲಾಯಿತು.
ಬಿಐಟಿ ಮತ್ತು ಬೀಡ್ಸ್ ಹಮ್ಮಿಕೊಂಡ ‘ವಿಶ್ವ ಹಸಿರು ಸಪ್ತಾಹ’- ‘ಗ್ರೀನ್ ವಾಕಥಾನ್’ ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಿಂದ ಆರಂಭಗೊಂಡು ದೇರಳಕಟ್ಟೆಯ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ (ಬಿಟಿಪಿ)ನತ್ತ ಸಾಗಿತು. ವಾಕಥಾನ್ಗೆ ಚಾಲನೆ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ ಸ್ವಚ್ಛ ಮನಸ್ಸು ಹೊಂದಿದರೆ ಮಾತ್ರ ಪರಿಸರವೂ ಸ್ವಚ್ಛವಾಗಲಿದೆ. ನಮಗೆ ಜೀವ ಮೊದಲು, ಜೀವನ ಆ ಬಳಿಕವಾಗಿದೆ. ಜೀವ ಉಳಿಯಲು ಪ್ರಕೃತಿ ಮುಖ್ಯವಾಗಿದೆ. ಹಾಗಾಗಿ ಪ್ರಕೃತಿ ಉಳಿಸುವ ಕೈಂಕರ್ಯಕ್ಕೆ ನಾವೆಲ್ಲ ಕೈ ಜೋಡಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಸ್ವಚ್ಛ ಹಾಗೂ ಹಸಿರು ನಗರವನ್ನು ಉತ್ತೇಜಿಸುವ ಸಲುವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಪ್ರಕೃತಿ ನಮಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತದೆ. ಆದರೆ ಪ್ರಕೃತಿಗೆ ನಾವೇನು ಕೊಡುತ್ತಿದ್ದೇವೆ ಎಂಬುದೂ ಮುಖ್ಯವಾಗಿದೆ. ಒಂದು ಮನೆ ಅಥವಾ ಕಟ್ಟಡ ನಿರ್ಮಿಸುವಾಗ ಸಾಕಷ್ಟು ಮರಗಳನ್ನು ಕಡಿಯುತ್ತೇವೆ. ಆದರೆ ಮತ್ತೆ ಸಸಿ ನೆಡಲು ಮುಂದಾಗುವುದಿಲ್ಲ. ಸಸಿಗಳನ್ನು ನೆಟ್ಟರಷ್ಟೇ ಪರಿಸರ ಹಸುರೀಕರಣಗೊಳ್ಳಬಹುದು. ಪ್ರಕೃತಿ ಪ್ರೇಮ, ಪರಿಸರ ಸ್ವಚ್ಛತೆಯು ವಾಕಥಾನ್ನ ಉದ್ದೇಶವಾಗಿದೆ ಎಂದರು.
ವಿಶ್ವದಲ್ಲಿ ಹವಾಮಾನ ನಿರಂತರವಾಗಿ ಬದಲಾಗುತ್ತಿದೆ. ಇದು ಮನುಕುಲದ ಮೇಲೆ ಭಾರೀ ಪರಿಣಾಮ ಬೀರಿದೆ. ಹಾಗಾಗಿ ಭೂಮಿಯನ್ನು ರಕ್ಷಿಸಲು ಮಾನವನು ಅಪಾರವಾಗಿ ಶ್ರಮಿಸಬೇಕಿದೆ. ಪ್ರಕೃತಿಯ ಮುಂದೆ ನಾವು ಏನೂ ಅಲ್ಲ. ಪ್ರಕೃತಿಗಿಂತ ದೊಡ್ಡವರೂ ನಾವಲ್ಲ. ಪ್ರಕೃತಿಯನ್ನು ಉಳಿಸಿದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.
ಬಿಐಟಿ ಪ್ರಾಂಶುಪಾಲ ಡಾ.ಎಸ್.ಐ. ಮಂಜೂರ್ ಬಾಷಾ ಸ್ವಾಗತಿಸಿದರು.
ಬೀಡ್ಸ್ ಪ್ರಾಂಶುಪಾಲ ಎ.ಆರ್. ಅಶೋಕ್ ಮೆಂಡೋನ್ಸಾ, ಡಾ.ಅಝೀಝ್ ಮುಸ್ತಫ, ವೆಂಕಟೇಶ್ ಪೈ, ಸಂತೋಷ್ ಡಿಸೋಜ, ಬಿಐಟಿ- ಇಸಿಇ ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ ಮತ್ತಿತರರು ಉಪಸ್ಥಿತರಿದ್ದರು.
ಪೆÇ್ರ. ಮುಬೀನಾ ತಾಜ್ ಬಳಗವು ಪ್ರಾರ್ಥನಾ ಗೀತೆ ಹಾಡಿತು.