
ಉಳ್ಳಾಲ : ರೈಲು ಢಿಕ್ಕಿ ಹೊಡೆದು ನವಿಲೊಂದು ಸಾವನ್ನಪ್ಪಿರುವ ಘಟನೆ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೋಟೆಕಾರು ಸ್ಟೆಲ್ಲಾ ಮೇರಿ ಶಾಲಾ ಹಿಂಭಾಗದಲ್ಲಿ ನಡೆದಿದೆ.
ಶುಕ್ರವಾರ ಮಧ್ಯಾಹ್ನ ವೇಳೆ ರೈಲು ಹಳಿ ಬಳಿ ನವಿಲು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಕಂಡುಬಂದಿತ್ತು. ಸ್ಥಳೀಯರು ಪುರಸಭೆ ಮುಖ್ಯಾಧಿಕಾರಿ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು , ಸೋಮೇಶ್ವರದ ಹಿಂದು ರುದ್ರಭೂಮಿಯಲ್ಲಿ ಸರಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಸಿದರು.
ಈ ವೇಳೆ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ, ಅರಣ್ಯ ಸಂರಕ್ಷಣಾಧಿಕಾರಿ ಸೌಮ್ಯ, ತಾ.ಪಂ ಮಾಜಿ ಸದಸ್ಯ ರವಿಶಂಕರ್ , ಪುರಸಭೆ ಪ್ರಬಂಧಕ ಕೃಷ್ಣ ಹಾಗೂ ಸಿಬ್ಬಂದಿ ಶ್ರೀನಾಥ್ ಉಪಸ್ಥಿತರಿದ್ದರು.