Site icon Ullalavani

ಉಳ್ಳಾಲ ಸಮುದ್ರದಬ್ಬರ ಬೆಚ್ಚಿಬಿದ್ದ ಬೆಂಗಳೂರು ಪ್ರವಾಸಿಗರು

ಉಳ್ಳಾಲ: ನಿರಂತರವಾಗಿ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಉಳ್ಳಾಲದಲ್ಲಿ ಸಮುದ್ರ ಕೊರೆತ ಗುರುವಾರವೂ ಮುಂದುವರಿದಿದೆ. ಬಟ್ಟಪ್ಪಾಡಿ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರಕ್ಕೆ ಅಲೆಗಳು ಬಡಿಯುತ್ತಿದೆ. ಬಟ್ಟಪ್ಪಾಡಿ- ಉಚ್ಚಿಲ ಸಂಪರ್ಕಿಸುವ ರಸ್ತೆ ಸಂಪೂರ್ಣ ಸಮುದ್ರಪಾಲಾದರೆ,ಸಮುದ್ರದ ಅಲೆಗಳ ರೌದ್ರ ನರ್ತನಕ್ಕೆ ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ 11 ಮಂದಿಯ ತಂಡ ಬೆದರಿ ವಾಪಸ್ಸಾಗಿದ್ದಾರೆ.
ಪ್ರವಾಸಕ್ಕೆ ಅಂತ ಮಂಗಳೂರು ಬಂದಿದ್ದೆವು. ಉಚ್ಚಿಲದ ರೆಸಾರ್ಟ್‍ನಲ್ಲಿ ತಂಗಿದ್ದೆವು. ಆದರೆ ಇಲ್ಲಿ ಸಿಕ್ಕಾಪಟ್ಟೆ ಮಳೆಯಿಂದ ಸಮುದ್ರ ಅಬ್ಬರಿಸುತ್ತಿದೆ. ಹೀಗಾಗಿ ಇದನ್ನು ನೋಡಿ ಭಯವಾಗುತ್ತಿದೆ, ಇವತ್ತೆ ಬೆಂಗಳೂರು ವಾಪಸ್ಸಾಗುತ್ತಿದ್ದೇವೆ. ಗುರುವಾರ ರಾತ್ರಿ ಅಲೆಗಳ ಅಬ್ಬರ ಜೋರಾಗಿತ್ತು. ನೀರಿಗೆ ಇಳಿಯಲು ಹೋದಾಗ ಅಲೆ ಬಂದು ಬಡಿದಿದೆ.
ರೆಸಾರ್ಟ್ ನ ಕುರ್ಚಿ ಎಲ್ಲಾ ಹಾರಿ ಹೋಗಿದೆ, ನೋಡುವಾಗ ಭಯ ಆಗುತ್ತಿದೆ . ನಾವು ಇಲ್ಲಿನ ಬೀಚ್ ನೋಡಲೆಂದು ಬೆಂಗಳೂರಿನಿಂದ 11 ಮಂದಿಯ ತಂಡ ಜು.13 ರಂದು ಬಂದು ತಂಗಿದ್ದೇವೆ. ಆದರೆ ಮಳೆಯಿಂದಾಗಿ ಡೇಂಜರ್ ಆಗಿದೆ. ಮಳೆ ನಿಲ್ಲುವವರೆಗೂ ಯಾರೂ ಇಲ್ಲಿಗೆ ಬರಬೇಡಿ, ತುಂಬಾ ಅಪಾಯಕಾರಿಯಾಗಿದೆ. ಮಳೆ ಹೆಚ್ಚಾದರೆ ಇಲ್ಲಿ ಫುಲ್ ಡೇಂಜರ್, ಎಲ್ಲರೂ ಹುಷಾರಾಗಿರಬೇಕು ಎಂದು ಬೆಂಗಳೂರು ನಿವಾಸಿ ತಮಗಾದ ಅನುಭವವನ್ನು ಮಾಧ್ಯಮದ ಜತೆಗೆ ವಿವರಿಸಿದರು.

Exit mobile version