
ಉಳ್ಳಾಲ: ಕೃಷಿ ಕ್ಷೇತ್ರ ಆಧುನೀಕರಣಗೊಳ್ಳಬೇಕು, ಬದಲಾವಣೆಗಳಾಗಬೇಕು ಅನ್ನುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿಪಾಠ ಹೇಳುವ ಕಾರ್ಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿ ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಕೆ. ಅಭಿಪ್ರಾಯಪಟ್ಟರು.
ಅವರು ನಿಟ್ಟೆ ಶಂಕರ್ ಅಡ್ಯಂತಾಯ ಸ್ಮಾರಕ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಪಿಲಾರು ಇರ್ನೂರುಗುತ್ತು ಗದ್ದೆಯಲ್ಲಿ ಮಂಗಳವಾರ ಹಮ್ಮಿಕೊಂಡ ಭತ್ತದ ನಾಟಿ ಕಾರ್ಯದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೃಷಿ ಮಾಡಿದವನಿಗೆ ಬಡತನವಿಲ್ಲ, ಜಪ ಮಾಡಿದವನಿಗ ಭಯವಿರುವುದಿಲ್ಲ ಅನ್ನುವ ಮಾತಿಗೆ ಒತ್ತು ಕೊಟ್ಟು ವಿದ್ಯಾರ್ಥಿಗಳಿಗೆ ಕೃಷಿಪಾಠ ಹೇಳುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಈ ಮೂಲಕ ಅನ್ನದ ಬೆಲೆಯನ್ನು ವಿದ್ಯಾರ್ಥಿಗಳು ಅರಿಯಲು ಸಾಧ್ಯ ಎಂದರು.
ನಿಟ್ಟೆ ಶಂಕರ್ ಅಡ್ಯಂತಾಯ ಸ್ಮಾರಕ ಪಿ.ಯು ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಶೆಟ್ಟಿ ಮಾತನಾಡಿ, ಕಾಲೇಜಿನಲ್ಲಿ ದಾಂಡೇಲಿ, ಮೈಸೂರು ಸಹಿತ ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳಿದ್ದಾರೆ, ಭತ್ತದ ಮೂಲ ಗೊತ್ತಿರದ ಪರಿಸ್ಥಿತಿ ಇಂದಿನ ವಿದ್ಯಾರ್ಥಿಗಳದ್ದಾಗಿದೆ. ಅದಕ್ಕಾಗಿ ಜ್ಞಾನ ವೃದ್ಧಿಸುವ ಕಾರ್ಯ ಈ ಮೂಲಕ ಆಗಿದೆ . ಕೊರೊನಾ ಸಂದರ್ಭ ಹಳ್ಳಿಗಳಿಗೆ ಮರಳಿರುವ ಮಂದಿ ಕೃಷಿ ಕಾಯಕದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಬದುಕು ಕಲಿಸಿದಂತಹ ಸಂದರ್ಭ ಅನ್ನ ನೀಡಿದ ಕೃಷಿಯನ್ನು ಯಾರೂ ಮರೆಯಬಾರದು ಎಂದರು.
ಈ ಸಂದರ್ಭ ಸೋಮೇಶ್ವರ ಪುರಸಭೆ ಮಾಜಿ ಸದಸ್ಯ ಪುರುಷೋತ್ತಮ ಪಿಲಾರ್, ಪ್ರಗತಿಪರ ಕೃಷಿಕ ವಿಶ್ವನಾಥ್ ಆಳ್ವ ಶರತ್ ಕುಮಾರ್ ಭಂಡಾರಿ ಹಾಗೂ ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕ ಸಂಜಯ್ ಉಪಸ್ಥಿತರಿದ್ದರು.
ಎನ್ ಎಸ್ ಎಸ್ ಯೋಜನಾಧಿಕಾರಿ ಸಂಧ್ಯಾ ಸ್ವಾಗತಿಸಿದರು. ಉಪನ್ಯಾಸಕಿ ಮನಸ್ವಿ ವಂದಿಸಿದರು.
`ಪ್ರತಿ ವರ್ಷವೂ ಗದ್ದೆಯಲ್ಲಿ ನಾಟಿ ಮಾಡುತ್ತಾ ಬಂದಿದ್ದೇವೆ. ಕಾರ್ಮಿಕರಿಲ್ಲದೆ ಸಂಕಷ್ಟಗಳನ್ನು ಅನುಭವಿಸುತ್ತಿದ್ದೇವೆ. ನಿಟ್ಟೆ ಕಾಲೇಜು ವಿದ್ಯಾರ್ಥಿಗಳು ಹಮ್ಮಿಕೊಂಡ ನಾಟಿ ಕಾರ್ಯದಿಂದ ಬಹಳಷ್ಟು ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಕೃಷಿ ಜ್ಞಾನದ ಅರಿವು ಹಾಗೂ ನಾಟಿ ಕಾರ್ಯ ಈ ಬಾರಿ ಸುಲಭವಾಗಿ ಮಾಡಬಹುದು.
ಶೈಲಜಾ ಶೆಟ್ಟಿ
ಜಾಗದ ಮಾಲೀಕರು
`ಹೊಸ ಅನುಭವ, ಕೃಷಿ ಕಾಯಕದಲ್ಲಿ ಎಲ್ಲರೂ ಜತೆಯಾಗಿ ತೊಡಗಿಸಿಕೊಂಡಿರುವುದು ಸಂತೋಷ ಕೊಟ್ಟಿದೆ. ಕೃಷಿ ಕುರಿತ ಅರಿವೂ ಕಾರ್ಯಕ್ರಮದ ಮೂಲಕ ಲಭಿಸಿದೆ’
ಛಾಯ
ವಿದ್ಯಾರ್ಥಿನಿ