
ದೇರಳಕಟ್ಟೆ: ಸಸ್ಯ ಜೀವತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಮೈಸೂರಿನಲ್ಲಿರುವ ಲ್ಯಾಬ್ಲ್ಯಾಂಡ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಹಾಗೂ ಮಂಗಳೂರಿನ ದೇರಳಕಟ್ಟೆಯಲ್ಲಿರುವ ನಿಟ್ಟೆ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ)ದ ನಡುವೆ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಒಡಂಬಡಿಕೆ ಏರ್ಪಟ್ಟಿದೆ.
ಔಷಧೀಯ ಗುಣವುಳ್ಳ ಸಸ್ಯಗಳು, ಅಂಗಾಂಶ ಅಭಿವೃದ್ಧಿ, ದ್ವಿತೀಯ ಚಯಾಪಚಯ ಕ್ರಿಯೆಗಳು, ಕ್ಲಿನಿಕಲ್ ಸಂಶೋಧನೆ, ಅಣುಬೀಜ ಜೀವವಿಜ್ಞಾನ, ಜೀವಮಾಹಿತಿ ವಿಜ್ಞಾನ, ಜೀವ ಅಂಕಿ-ಅಂಶ ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಬಯೋ ಇಂಧನ ಕ್ಷೇತ್ರಗಳಲ್ಲಿ ಜಂಟಿಯಾಗಿ ಸಹಮತದ ಸಂಶೋಧನೆ ನಡೆಸುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿದೆ.
ಒಡಂಬಡಿಕೆ ಏರ್ಪಟ್ಟ ವೇಳೆ ಲ್ಯಾಬ್ಲ್ಯಾಂಡ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಡಾ| ಸುಧೀರ್ ಶೆಟ್ಟಿ ಹಾಗೂ ನಿಟ್ಟೆ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ)ದ ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ, ಸಹ ಕುಲಪತಿ ಡಾ| ಎಂ.ಎಸ್.ಮೂಡಿತ್ತಾಯ, ಕುಲಸಚಿವೆ ಡಾ| ಅಲ್ಕಾ ಕುಲಕರ್ಣಿ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ| ಪ್ರವೀಣ್ ಕುಮಾರ್ ಶೆಟ್ಟಿ, ಜೀವರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ| ಎನ್.ಸುಚೇತಾ ಕುಮಾರಿ ಅವರು ಭಾಗವಹಿಸಿದ್ದರು.