
ಉಳ್ಳಾಲ : ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ವಿತರಿಸಿದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಅಸಮರ್ಪಕವಾಗಿದ್ದು ಮುನ್ನೂರು ಗ್ರಾಮದಲ್ಲಿರುವ ಸುಮಾರು ಐನೂರು ಕಟ್ಟಡ ಕಾರ್ಮಿಕರ ಪೈಕಿ ಕೇವಲ ಐವತ್ತೇಳು ಜನರಿಗೆ ಮಾತ್ರ ವಿತರಿಸಿ ಉಳಿದ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಮುನ್ನೂರು ಗ್ರಾಮ ಸಮಿತಿಯ ನೇತೃತ್ವದಲ್ಲಿ ಕಾರ್ಮಿಕರು ಇಂದು ಮುನ್ನೂರು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಜಯಂತ್ ನಾಯ್ಕ್ ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಕೇವಲ 57 ಜನ ಕಾರ್ಮಿಕರಿಗೆ ಕಿಟ್ ಕೊಟ್ಟು ಉಳಿದವರಿಗೆ ಕೊಡದೇ ವಂಚಿಸಿರುವುದು ಅನ್ಯಾಯವಾಗಿದೆ. ಇಲ್ಲಿರುವ 500 ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರೆಲ್ಲರೂ ಸಹ ಈ ಲಾಕ್ ಡೌನ್ ನಿಂದ ಸಂಕಷ್ಟ ಅನುಭವಿಸುತ್ತಿರುವವರೇ ಆಗಿದ್ದಾರೆ. ಹೀಗಿರುವಾಗ ಕೇವಲ 57 ಜನರಿಗೆ ಕೊಟ್ಟು ಉಳಿದವರಿಗೆ ಕೊಡದೇ ವಂಚಿಸಿರುವುದು ಅಮಾನವೀಯವಾಗಿದ್ದು ಕೂಡಲೇ ಬಾಕಿ ಉಳಿದಿರುವ ಇತರೆ ಕಾರ್ಮಿಕರಿಗೂ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಜನಾರ್ದನ್ ಕುತ್ತಾರ್, ಜೊತೆ ಕಾರ್ಯದರ್ಶಿ ನವೀನ್ ಗಿರಿಯಮೂಲೆ, ಮುನ್ನೂರು ಘಟಕ ಸಮಿತಿ ಅಧ್ಯಕ್ಷ ಸತೀಶ್ ತೇವುಲ ಪಾಲ್ಗೊಂಡರು.